ಕನ್ನಡಪ್ರಭ ವಾರ್ತೆ ಮಂಗಳೂರು
ಕೆಸ್ಸಾರ್ಟಿಸಿ ಪುತ್ತೂರು ಹಾಗೂ ಮಂಗಳೂರು ವಿಭಾಗದಿಂದ ವಿಶೇಷ ಬಸ್ಗಳ ವ್ಯವಸ್ಥೆ ಕಲ್ಪಿಸಲಾಗಿದ್ದು, ಅ.30ರಂದು ಬೆಂಗಳೂರಿನಿಂದ ಕರಾವಳಿಗೆ ಹಾಗೂ ನ.3ರಂದು ಕರಾವಳಿಯಿಂದ ಬೆಂಗಳೂರಿಗೆ ವಿಶೇಷ ಸಾರಿಗೆ ಬಸ್ಗಳು ಸಂಚರಿಸಲಿವೆ.
ಬೆಂಗಳೂರಿನಿಂದ ಅ.30ರಂದು ಪುತ್ತೂರು ವಿಭಾಗ ವ್ಯಾಪ್ತಿಯ ಪುತ್ತೂರು, ಸುಳ್ಯ, ಬೆಳ್ತಂಗಡಿ, ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯಗಳಿಗೆ 60 ಬಸ್ಗಳು ಹಾಗೂ ಬಿಎಂಟಿಸಿಯ 60 ಬಸ್ಗಳು ವಿಶೇಷ ಸಂಚಾರ ನಡೆಸಲಿವೆ. ಇದೇ ಪ್ರಮಾಣದಲ್ಲಿ ಬಸ್ಗಳು ನವೆಂಬರ್ 3ರಂದು ವಾಪಸ್ ಬೆಂಗಳೂರಿಗೆ ನಿರ್ಗಮಿಸಲಿವೆ.ಅ.30ರಂದು ಬೆಂಗಳೂರಿನಿಂದ ಮಂಗಳೂರು ವಿಭಾಗ ವ್ಯಾಪ್ತಿಯ ಮಂಗಳೂರು, ಉಡುಪಿ ಹಾಗೂ ಕುಂದಾಪುರಗಳಿಗೆ ವಿಭಾಗದ 546 ಬಸ್ಗಳಲ್ಲದೆ, 50 ಹೆಚ್ಚುವರಿ ಬಸ್ಗಳು ಆಗಮಿಸಲಿವೆ. ನ.3ರಂದು ಮತ್ತೆ ಈ ಬಸ್ಗಳು ಬೆಂಗಳೂರಿಗೆ ತೆರಳಲಿವೆ.
ದೀಪಾವಳಿ ವಿಶೇಷ ಬಸ್ಗಳ ಓಡಾಟ ಹಿನ್ನೆಲೆಯಲ್ಲಿ ಗ್ರಾಮೀಣ ಭಾಗದಲ್ಲಿ ಬಸ್ಗಳ ವಿಪರೀತ ಕೊರತೆ ತಲೆದೋರುವ ಸಾಧ್ಯತೆ ಇದೆ. ದಸರಾ ವೇಳೆ ಗ್ರಾಮೀಣ ಭಾಗದ ಅಲ್ಲಲ್ಲಿ ಬಸ್ಗಳ ಕೊರತೆ ಉಂಟಾಗಿದ್ದು, ಜನಸಾಮಾನ್ಯರಿಗೆ ತೊಂದರೆಯಾಗಿತ್ತು. ಆದರೂ ಸಾರಿಗೆ ಅಧಿಕಾರಿಗಳು ಜನಸಾಮಾನ್ಯರಿಗೆ ತೊಂದರೆ ಉಂಟಾಗದಂತೆ ಹೆಚ್ಚುವರಿ ಬಸ್ಗಳನ್ನು ಓಡಿಸಿದ್ದಾಗಿ ಸ್ಪಷ್ಟಪಡಿಸಿದ್ದರು. ಈ ಬಾರಿ ಕೂಡ ಗ್ರಾಮೀಣ ಸಾರಿಗೆಗೆ ತೊಂದರೆಯಾಗದಂತೆ ಹೆಚ್ಚುವರಿ ಬಸ್ಗಳನ್ನು ಬಳಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ಕರಾವಳಿಯ ನಾನಾ ಕಡೆಗಳಿಗೆ ಆಗಮಿಸುವವರಿಗೆ ಕೆಎಸ್ಸಾರ್ಟಿಸಿ ವಿಶೇಷ ಬಸ್ಗಳ ವ್ಯವಸ್ಥೆ ಕಲ್ಪಿಸಿದೆ. ಅ.30ರಂದು ಬೆಂಗಳೂರಿನಿಂದ ಕರಾವಳಿಗೆ, ನ.3ರಂದು ಮರಳಿ ಬೆಂಗಳೂರಿಗೆ ವಿಶೇಷ ಬಸ್ಗಳ ಸೌಲಭ್ಯ ಮಾಡಲಾಗಿದೆ. ಈ ವೇಳೆ ಗ್ರಾಮೀಣ ಜನತೆಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲಾಗುವುದು.
ಕೆಎಸ್ಸಾರ್ಟಿಸಿ ಅಥವಾ ಖಾಸಗಿ ಬಸ್ಗಳು ಹಬ್ಬಗಳ ವೇಳೆ ವಿಶೇಷ ಸಂಚಾರ ನಡೆಸುವುದಕ್ಕೆ ಹೆಚ್ಚುವರಿ ಟಿಕೆಟ್ ದರ ವಿಧಿಸುವುದು ಯಾಕೆ ಎಂಬ ಪ್ರಶ್ನೆಗೆ ಕೆಎಸ್ಸಾರ್ಟಿಸಿ ಅಧಿಕಾರಿಗಳು ಸಮಜಾಯಿಷಿ ನೀಡುತ್ತಾರೆ.
ಆದರೆ ಖಾಸಗಿ ಬಸ್ನಲ್ಲಿ ಸೀಮಿತ ದರ ಏರಿಕೆ ಎಂಬುದಿಲ್ಲ. ಅದರ ಬದಲು ನಾಲ್ಕೈದು ಪಟ್ಟು ದರ ವಸೂಲಿ ಮಾಡುತ್ತಾರೆ ಎನ್ನುವುದು ಪ್ರಯಾಣಿಕರ ಆರೋಪ. ಪ್ರಯಾಣಿಕರ ದೂರು ಬಂದಾಗ ಸಾರಿಗೆ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಾರೆ, ಬೇಕಾಬಿಟ್ಟಿ ದರ ಏರಿಕೆಯನ್ನು ಹತೋಟಿಗೆ ತರಲು ಯಾವುದೇ ಕ್ರಮಗಳಾಗುತ್ತಿಲ್ಲ ಎನ್ನುವುದು ಪ್ರಯಾಣಿಕರ ಬೇಸರದ ನುಡಿ. ಟೂರಿಸ್ಟ್ ಬಸ್, ವಿಮಾನಯಾನ ದರ ಹೆಚ್ಚಳ ಪೈಪೋಟಿ!
ಅ.30ರಂದು ಖಾಸಗಿ ಟೂರಿಸ್ಟ್ ಬಸ್ಗಳು ಬೆಂಗಳೂರಿನಿಂದ ಮಂಗಳೂರಿಗೆ ಕನಿಷ್ಠ 1,500 ರು.ನಿಂದ ಗರಿಷ್ಠ 3,249 ರು. ವರೆಗೆ ದರ ವಿಧಿಸಿವೆ. ನ.3ರಂದು ಮಂಗಳೂರಿನಿಂದ ಬೆಂಗಳೂರಿಗೆ ಕೂಡ ಇದೇ ರೀತಿಯ ದುಬಾರಿ ದರ ಇದೆ.