ಕನ್ನಡಪ್ರಭ ವಾರ್ತೆ, ತುಮಕೂರುಹಬ್ಬಗಳು ನಮ್ಮನ್ನು ಒಂದುಗೂಡಿಸಬೇಕೇ ಹೊರತು ವಿಘಟಿಸುವ ಕೆಲಸ ಆಗಬಾರದು ಎಂದು ಹಿರಿಯ ಪ್ರಾಧ್ಯಾಪಕ ಲಾಲ್ ಹುಸೇನ್ ಕುಂದಗಲ್ ತಿಳಿಸಿದರು.
ನ್ಯಾಯ ಇರುವಡೆ ಶಾಂತಿ, ನೆಮ್ಮದಿ, ಸಮಾಧಾನ, ಸೌಹಾರ್ದತೆ, ಸಾಮರಸ್ಯದ ಬದುಕು ಸಾಧ್ಯ ನಿಜವಾದ ಧರ್ಮನಿಷ್ಠೆ ಎಂದರೆ ದೇವರ ಆರಾಧನೆಯಲ್ಲಿ ತೊಡಗುವುದಲ್ಲ, ನ್ಯಾಯದ ಪರ ನಿಲ್ಲುವುದು. ಇದನ್ನು ಪ್ರವಾದಿ ಮುಹಮ್ಮದ್ ಅವರು ಬದುಕಿನಲ್ಲಿಯೂ ಕಾಣಬಹುದಾಗಿದೆ. ನ್ಯಾಯ ನೀಡುವಾಗ ಬಡವರು, ಶ್ರೀಮಂತರು, ಮೇಲು, ಕೀಳು ಎಂಬ ಭಾವನೆ ಬಂದರೆ ಅದು ಅರಾಜಕತೆಗೆ ದಾರಿ ಮಾಡಿಕೊಡುತ್ತದೆ. ತನ್ನ ಹೆತ್ತವರು, ಒಡಹುಟ್ಟಿದವರು ತಪ್ಪು ಮಾಡಿದ್ದರೆ ಅದಕ್ಕೆ ಶಿಕ್ಷೆ ವಿಧಿಸುವುದೇ ನಿಜವಾದ ನ್ಯಾಯ ಎಂದು ಪ್ರವಾದಿ ಮುಹಮ್ಮದ್ ಅವರು ಪ್ರತಿಪಾದಿಸಿದ್ದಾರೆ. ಪ್ರವಾದಿ ಮುಹಮ್ಮದ್ ರ ಜನ್ಮ ದಿನಾಚರಣೆ ಮಿಲಾದುನ್ನಿ ಎಂದರೆ ಮೆರವಣಿಗೆ ಮಾತ್ರವಲ್ಲ. ಮನುಷ್ಯನ ಸಂಕಷ್ಟಕ್ಕೆ ಮಿಡಿಯುವುದು ಎಂದರು.
ಶಾಂತಿ ಪ್ರಕಾಶನ ಹೊರತಂದಿರುವ ಪ್ರವಾದಿ ಮುಹಮ್ಮದ್ ಅರಿಯಿರಿ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಇತಿಹಾಸ ಪ್ರಾಧ್ಯಾಪಕ ಡಾ.ಸಿದ್ದಲಿಂಗಯ್ಯ, ಪ್ರವಾದಿಗಳು ಜ್ಞಾನಕ್ಕೆ ಹೆಚ್ಚು ಮಹತ್ವ ನೀಡಿದವರು. ಹಾಗಾಗಿ ಅವರ ಬಗ್ಗೆ ಹೆಚ್ಚು ತಿಳಿದುಕೊಳ್ಳುವ ಅಗತ್ಯವಿದೆ. ನಮ್ಮಲ್ಲಿ ಅರಿಯುವಲ್ಲಿ ಅಂತರವಿಲ್ಲ. ಆದರೆ ಅರಿತವರ ನಡುವೆ ಅಂತರವಿದೆ.ಪ್ರ ವಾದಿಗಳು ಶಾಂತಿ, ಕರುಣೆ, ಪ್ರೀತಿಯ ಸಂಕೇತ. ಧರ್ಮ ಗ್ರಂಥಗಳನ್ನು ಪೂರ್ವಾಗ್ರಹ ಪೀಡಿತರಾಗಿ ನೋಡುವ ಮನಸ್ಥಿತಿ ಬದಲಾಗಬೇಕು. ದಾರಿ ತಪ್ಪಿಸುವ ಕೆಲಸ ಆಗಬಾರದು. ಬಹುತ್ವದ ನಡುವೆ ನಾವು ಬದುಕುತಿದ್ದೇವೆ ಎಂಬ ಅರಿವು ನಮಗಿರಬೇಕು ಎಂದರು.ಭಾರತೀಯ ಸಮಾಜದಲ್ಲಿ ಪ್ರವಾದಿ ಮುಹಮ್ಮದ್ ಆದರ್ಶದ ಔಚಿತ್ಯ ಎಂಬ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಪ್ರೊ.ಚಂದ್ರಕಾಂತ್,ಪ್ರವಾದಿ ಮುಹಮ್ಮದ್ ಅವರು ತಮ್ಮ ಜೀವನದಲ್ಲಿ ಇಡೀ ಪ್ರಪಂಚಕ್ಕೆ ಅಗತ್ಯವಾದ ಮಾರ್ಗದರ್ಶನ ನೀಡಿದ್ದಾರೆ. ಈ ಪುಸ್ತಕ ವಾಟ್ಸಪ್ ವಿವಿಗಳ ಅರೆತಿಳುವಳಿಕೆಗೆ ಉತ್ತರವಾಗಿ ಮೂಡಿಬಂದಿದೆ. ಪ್ರತಿಯೊಬ್ಬರು ಓದುವ ಮೂಲಕ ಇಸ್ಲಾಂ ಧರ್ಮದ ಬಗ್ಗೆ ಇರುವ ತಪ್ಪು ಕಲ್ಪನೆಯನ್ನು ಹೋಗಲಾಡಿಸಿಕೊಳ್ಳಿ ಎಂದು ಸಲಹೆ ನೀಡಿದರು.ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ನುಡಿಗಳನ್ನಾಡಿದ ಪ್ರೊ.ರಿಜ್ವಾನ್ ಖಾಲಿದ್, ಸತ್ಯ ನುಡಿಯುವ ಮೂಲಕ ನ್ಯಾಯ ಸ್ಥಾಪಿಸಲು ಸಾಧ್ಯ ಎಂದು ಪ್ರವಾದಿ ಮಹಮದ ತೊರಿಸಿಕೊಟ್ಟಿದ್ದಾರೆ. ಸತ್ಯನಿಷ್ಠೆ ಮತ್ತು ಪ್ರಾಮಾಣಿಕತೆಗೆ ಮತ್ತೊಂದು ಹೆಸರು ಪ್ರವಾದಿಗಳು. ಈ ಬಗ್ಗೆ ಜನರಿಗೆ ಅರಿವು ಮೂಡಿಸಲು ಜಮಾತೆ ಇಸ್ಲಾಮಿ ಹಿಂದ್ ಪ್ರವಾದಿಗಳ ಜನನದ ಮಾಸದಲ್ಲಿ ಈ ರೀತಿಯ ಉಪನ್ಯಾಸಗಳ ಮೂಲಕ ಅರಿವು ಮೂಡಿಸುವ ಕೆಲಸ ಮಾಡಲಾಗುತ್ತಿದೆ ಎಂದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಮಾಆತೆ ಇಸ್ಲಾಮಿ ಹಿಂದ್ನ ಸ್ಥಾನಿಯ ಅಧ್ಯಕ್ಷರಾದ ಅಸ್ರಾರ್ ಅಹಮದ್ ವಹಿಸಿದ್ದರು.ಜಮಾಆತೆ ಇಸ್ಲಾಮಿ ಹಿಂದಿನ ಪದಾಧಿಕಾರಿಗಳು, ವಿವಿಧ ಸಮುದಾಯದ ನಾಗರಿಕರು ಪಾಲ್ಗೊಂಡಿದ್ದರು.