ಒತ್ತುವರಿ ಜಾಗದಲ್ಲಿ ಸೈಟ್‌ ಕೊಟ್ಟ ಬಿಡಿಎಗೆ ₹50000 ದಂಡ!

KannadaprabhaNewsNetwork |  
Published : Jan 08, 2024, 01:45 AM IST
ಬಿಡಿಎ | Kannada Prabha

ಸಾರಾಂಶ

ಬನಶಂಕರಿಯಲ್ಲಿ ಅರಣ್ಯ ಜಾಗ ಒತ್ತುವರಿ ಮಾಡಿ ಸೈಟ್‌ ಹಂಚಿದ್ದಕ್ಕಾಗಿ ಬಿಡಿಎಗೆ 50 ಸಾವಿರ ರು. ದಂಡ ವಿಧಿಸಿದ ಗ್ರಾಹಕರ ವ್ಯಾಜ್ಯ ಪರಿಹಾರ ವೇದಿಕೆ

ಕನ್ನಡಪ್ರಭ ವಾರ್ತೆ ಬೆಂಗಳೂರು

ಒತ್ತುವರಿ ಜಮೀನಿನಲ್ಲಿ ಲೇಔಟ್ ನಿರ್ಮಿಸಿ ಗ್ರಾಹಕರಿಗೆ ಹಂಚಿದ್ದ ನಿವೇಶನವನ್ನು ಅರಣ್ಯ ಇಲಾಖೆ ವಶಕ್ಕೆ ಪಡೆದ ಹಿನ್ನೆಲೆಯಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ (ಬಿಡಿಎ) ₹50 ಸಾವಿರ ದಂಡ ವಿಧಿಸಿರುವ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ, ಬದಲಿ ನಿವೇಶನ ನೀಡುವಂತೆ ಆದೇಸಿದೆ.

ಲಕ್ಕಸಂದ್ರ ನಿವಾಸಿ ಕಾವೇರಿಯಮ್ಮ ಎಂಬುವರು ಎರಡು ದಶಕಗಳ ಹಿಂದೆ ನಿವೇಶನಕ್ಕಾಗಿ ಬಿಡಿಎಗೆ ಅರ್ಜಿ ಸಲ್ಲಿಸಿದ್ದರು. 2002ರ ಫೆಬ್ರವರಿಯಲ್ಲಿ ಬನಶಂಕರಿ 6ನೇ ಹಂತದ 2ನೇ ಬ್ಲಾಕ್‌ನಲ್ಲಿ 30/40 ಅಳತೆಯ ನಿವೇಶನವನ್ನು ಬಿಡಿಎ ಮಂಜೂರು ಮಾಡಿ 2003ರಲ್ಲಿ ಸ್ವಾಧೀನ ಪತ್ರ ನೀಡಿತ್ತು. ಕಾವೇರಿಯಮ್ಮ ಅವರು ತಮ್ಮ ಹೆಸರಿಗೆ ಖಾತಾ ಮಾಡಿಸಿಕೊಂಡಿದ್ದರು.

ನಿವೃತ್ತಿ ನಂತರ ಮನೆ ಕಟ್ಟಿಸಿಕೊಳ್ಳುವ ಆಲೋಚನೆಯಲ್ಲಿದ್ದ ಅವರು, 2019ರ ಫೆಬ್ರವರಿ ತಿಂಗಳಲ್ಲಿ ತಮ್ಮ ನಿವೇಶನದ ಬಳಿ ಹೋದಾಗ ನಿವೇಶನ ಜಾಗದಲ್ಲಿ ಅರಣ್ಯ ಇಲಾಖೆ ಕಾಂಪೌಂಡ್ ಹಾಕಿತ್ತು. ಈ ಕುರಿತು ವಿಚಾರಿಸಿದಾಗ, ಅದು ಅರಣ್ಯ ಇಲಾಖೆಯ ಒತ್ತುವರಿ ಜಾಗ ಎಂದು ಗೊತ್ತಾಗಿದೆ. ಹೀಗಾಗಿ, ಬದಲಿ ನಿವೇಶನ ನೀಡುವಂತೆ ಕಾವೇರಿಯಮ್ಮ ಬಿಡಿಎಗೆ ಮನವಿ ಪತ್ರ ನೀಡಿದ್ದರು.

ಮಂಜೂರಾದ 2 ವರ್ಷಗಳಲ್ಲಿ ಮನೆ ಕಟ್ಟಿಸಿಕೊಳ್ಳದ ಕಾರಣ ಅರಣ್ಯ ಇಲಾಖೆ ತನ್ನ ಜಾಗದ ವ್ಯಾಪ್ತಿಯನ್ನು ವಿಸ್ತರಿಸಿಕೊಂಡು ಕಾಂಪೌಂಡ್ ನಿರ್ಮಿಸಿಕೊಂಡಿದೆ. ಈ ವಿಚಾರವನ್ನು ಸರ್ಕಾರದ ಗಮನಕ್ಕೆ ತರಲಾಗಿದೆ. ಸರ್ಕಾರದಿಂದ ಮುಂದಿನ ಕ್ರಮಕ್ಕಾಗಿ ಕಾಯುತ್ತಿದ್ದೇವೆ ಎಂದು ಬಿಡಿಎ ಅಧಿಕಾರಿಗಳು ಉತ್ತರಿಸಿದ್ದಾರೆ. ಈ ಉತ್ತರದಿಂದ ತೃಪ್ತರಾಗದ ಕಾವೇರಿಯಮ್ಮ, ಬಿಡಿಎ ಆಯುಕ್ತರ ವಿರುದ್ಧ ಗ್ರಾಹಕರ ವೇದಿಕೆಯ ಮೊರೆ ಹೋಗಿದ್ದರು.

ವಿಚಾರಣೆ ವೇಳೆ ತುರಹಳ್ಳಿ ಅರಣ್ಯ ಪ್ರದೇಶದ ಗಡಿಯ ಜಾಗವನ್ನು ಒತ್ತುವರಿ ಮಾಡಿ ಬನಶಂಕರಿ ಲೇಔಟ್‌ ನಿರ್ಮಾಣ ಮಾಡಿದ್ದಕ್ಕಾಗಿ ಬಿಡಿಎ ಆಯುಕ್ತರ ವಿರುದ್ಧ ಎಫ್‌ಐಆರ್ ದಾಖಲಾಗಿರುವುದು ಕಂಡು ಬಂದಿದೆ. ಕಾವೇರಿಯಮ್ಮ ಅವರಿಗೆ ಮಂಜೂರು ಮಾಡಲಾಗಿದ್ದ ನಿವೇಶನವು ಒತ್ತುವರಿಯಾಗಿದ್ದ ಜಮೀನಿನಲ್ಲೇ ಇದೆ. ಹೀಗಾಗಿ, ಬಿಡಿಎಯಿಂದ ಸೇವೆಯಲ್ಲಿ ನ್ಯೂನತೆ, ನ್ಯಾಯಸಮ್ಮತವಲ್ಲದ ವ್ಯಾಪಾರ ಕ್ರಮ ಮತ್ತು ಬೇಜವಾಬ್ದಾರಿಯ ನಡೆ ಎನ್ನುವುದು ಸ್ಪಷ್ಟವಾಗಿ ಕಾಣಿಸುತ್ತದೆ ಎಂದು ಗ್ರಾಹಕರ ವೇದಿಕೆ ಅಭಿಪ್ರಾಯಪಟ್ಟಿದೆ.

ಈ ಹಿನ್ನೆಲೆಯಲ್ಲಿ ಅರ್ಜಿದಾರರಾದ ಕಾವೇರಿಯಮ್ಮನವರಿಗೆ ಮೂರು ತಿಂಗಳ ಒಳಗಾಗಿ ಅದೇ ಲೇಔಟ್‌ನಲ್ಲಿ ಅಥವಾ ಬೇರೆ ಲೇಔಟ್‌ನಲ್ಲಿ ಬದಲಿ ಬಿಡಿಎ ನಿವೇಶನ ಮಂಜೂರು ಮಾಡಬೇಕು. ಸೇವೆಯಲ್ಲಿನ ನ್ಯೂನತೆಗಾಗಿ ₹50 ಸಾವಿರ ಹಾಗೂ ಕಾನೂನು ಹೋರಾಟದ ಶುಲ್ಕವಾಗಿ ₹5 ಸಾವಿರ ಪರಿಹಾರ ನೀಡುವಂತೆ ಬೆಂಗಳೂರು ಒಂದನೇ ಹೆಚ್ಚುವರಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಯು ತನ್ನ ಆದೇಶದಲ್ಲಿ ತಿಳಿಸಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅತಿವೇಗ ಎಂದರೆ ನಿರ್ಲಕ್ಷ್ಯದ ಚಾಲನೆ ಅಲ್ಲ: ಹೈಕೋರ್ಟ್‌
‘ಜಾಹೀರಾತಲ್ಲಿ ಗಾಂಧೀಜಿ ಬಳಕೆ ಗಾಂಧೀಜಿಯರ ಮೌಲ್ಯಗಳ ಹತ್ಯೆ’