ಯಲ್ಲಾಪುರ: ದೇಶ ಕಾಯುವ ಕಾರ್ಯ ಗಡಿ ಕಾಯುವುದಕ್ಕೊಂದೇ ಸೀಮಿತವಾಗಿರದೇ, ದೇಶದ ಒಳಗೆ ನಡೆಯುವ ಅನ್ಯಾಯ, ದೌರ್ಜನ್ಯ ವಿರೋಧಿಸಿ, ಹೋರಾಡುವುದೂ ಸ್ವಾತಂತ್ರ್ಯ ಹೋರಾಟದ ಲಕ್ಷಣವೇ ಆಗಿದೆ. ಇಂದು ಎಲ್ಲ ಪ್ರಜೆಗಳೂ ಈ ಮನೋಭಾವವನ್ನು ರೂಢಿಸಿಕೊಳ್ಳಬೇಕು ಎಂದು ನಿವೃತ್ತ ಭಾರತೀಯ ಸೇನಾಧಿಕಾರಿ ಪ್ರಭಾಕರ ನಾಯ್ಕ ಹೇಳಿದರು.
ಧ್ವಜಾರೋಹಣ ನೆರವೇರಿಸಿದ ಸಂಸ್ಥೆಯ ಅಧ್ಯಕ್ಷ ಹರಿಪ್ರಕಾಶ ಕೋಣೆಮನೆ ಮಾತನಾಡಿ, ಕೇವಲ ಶಿಕ್ಷಣ ಸಂಸ್ಥೆ, ಇಲಾಖೆಗಳು ಸ್ವಾತಂತ್ರ್ಯೋತ್ಸವ ಆಚರಿಸಿ, ಸಂಭ್ರಮಿಸುವ ರೂಢಿಯಿತ್ತು. ಆದರೆ, ಇಂದು ಹರ್ ಘರ್ ತಿರಂಗಾ ಅಭಿಯಾನವನ್ನು ನಮ್ಮ ಸರ್ಕಾರ ಘೋಷಿಸಿ, ಪ್ರತಿ ಮನೆಮನೆಗಳಲ್ಲಿ ಪ್ರತಿ ಪ್ರಜೆಯೂ ಸ್ವಾತಂತ್ರ್ಯವನ್ನು ಸಂಭ್ರಮಿಸುವ ಅವಕಾಶ ಕೊಟ್ಟಿದೆ. ದೇಶದ ಲಾಂಛನಗಳನ್ನು ಗೌರವಿಸುತ್ತಾ ಸತ್ಪ್ರಜೆಗಳಾಗೋಣ ಎಂದರು.
ವಿಶ್ವದರ್ಶನ ಕನ್ನಡ ಮಾಧ್ಯಮ ಪ್ರೌಢಶಾಲೆಯ ಶಿಕ್ಷಕಿ ಪ್ರೇಮಾ ಗಾಂವ್ಕರ್ ಕಾರ್ಯಕ್ರಮ ನಿರ್ವಹಿಸಿದರು. ಮುಖ್ಯಾಧ್ಯಾಪಕಿ ಮುಕ್ತಾ ಶಂಕರ್ ಸ್ವಾಗತಿಸಿದರು. ದೈಹಿಕ ಶಿಕ್ಷಣ ಶಿಕ್ಷಕರಾದ ಮಹೇಶ್ ನಾಯ್ಕ ವಂದಿಸಿದರು. ಸಂತೋಷಿ ಜನರಲ್ ಸ್ಟೋರ್ಸ್ ಮಾಲೀಕ ವಾಮನ್ ನಾಯ್ಕ ಸಿಹಿ ವಿತರಿಸಿದರು.