ರಾಮನಗರ: ಗೃಹ ಸಚಿವ ಡಾ.ಜಿ. ಪರಮೇಶ್ವರ್ ಅವರಿಗೆ ಸೇರಿದ ಸಿದ್ಧಾರ್ಥ ಶಿಕ್ಷಣ ಸಂಸ್ಥೆಗಳ ಮೇಲೆ ನಡೆದಿರುವ ಇಡಿ ದಾಳಿ ರಾಜಕೀಯ ಪ್ರೇರಿತ ದಾಳಿಯಾಗಿದ್ದು, ಇದರ ವಿರುದ್ಧ ದೊಡ್ಡ ಮಟ್ಟದಲ್ಲಿ ಹೋರಾಟ ರೂಪಿಸುವುದಾಗಿ ದಲಿತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಡಾ.ಎಂ.ವೆಂಕಟಸ್ವಾಮಿ ತಿಳಿಸಿದರು.
ಈಗ ರಾಜಕೀಯವಾಗಿ ಪ್ರವರ್ಧಮಾನಕ್ಕೆ ಬರುತ್ತಿರುವ ಜಿ.ಪರಮೇಶ್ವರ್ ದಲಿತ ಸಮುದಾಯಕ್ಕೆ ಆದರ್ಶ ರಾಜಕಾರಣಿಯಾಗಿದ್ದು, ಮುಂದಿನ ಮುಖ್ಯಮಂತ್ರಿ ಎಂದು ಪ್ರತಿಬಿಂಬಿತರಾಗಿದ್ದಾರೆ. ಇದನ್ನು ಸಹಿಸದ ಸ್ವಪಕ್ಷಿಯರ ಪಿತೂರಿಯಿಂದ ಇಡಿ ದಾಳಿ ನಡೆದಿದೆ ಎಂದು ಆರೋಪಿಸಿದರು.
ಕಾಂಗ್ರೆಸ್ ಹೈಮಾಂಡ್ ಜಿ.ಪರಮೇಶ್ವರ್ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡುತ್ತದೆಯೊ ಇಲ್ಲವೊ ಬೇರೆ ವಿಚಾರ. ಆದರೆ, ಸ್ವಪಕ್ಷಿಯರು ರೂಪಿಸಿರುವ ಷಡ್ಯಂತ್ರಕ್ಕೆ ಉತ್ತರ ನೀಡಿ ಪರಮೇಶ್ವರ್ ಪರ ನಿಲ್ಲಬೇಕು. ಬಲಾಡ್ಯರ ಶಿಕ್ಷಣ ಸಂಸ್ಥೆಗಳ ಮೇಲೆ ಇದೇ ರೀತಿಯ ದಾಳಿ ನಡೆದಿದ್ದರೆ ಇಷ್ಟೊತ್ತಿಗೆ ಅಲ್ಲೋಲಕಲ್ಲೋಲ ಆಗುತ್ತಿತ್ತು. ಇದು ಪರಮೇಶ್ವರ್ ನಾಯಕತ್ವವನ್ನು ಹೊಸಕಿ ಹಾಕುವ ಪ್ರಯತ್ನವಾಗಿದೆ. ಕಾಂಗ್ರೆಸ್ ಹೈಕಮಾಂಡ್ ಪರಮೇಶ್ವರ್ ಅವರಿಗೆ ಬೆನ್ನೆಲುಬಾಗಿ ನಿಲ್ಲಬೇಕು. ಕೇಂದ್ರ ಸರ್ಕಾರ ದಲಿತ ಜನಾಂಗದ ತಾಳ್ಮೆಯನ್ನು ಕೆಣಕಬಾರದು. ಇಲ್ಲದಿದ್ದರೆ ದಲಿತ ಸಮುದಾಯದ ಶಕ್ತಿ ಪ್ರದರ್ಶನ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.ದಸಂಸ ಸಂಯೋಜಕ ಅಶ್ವತ್ಥ್ ಮಾತನಾಡಿ, ಕಾಂಗ್ರೆಸ್ ಮಹಾ ನಾಯಕರು ನೀಡಿದ ದೂರಿನ ಮೇರೆಗೆ ಪರಮೇಶ್ವರ್ ಅವರಿಗೆ ಸೇರಿದ ಶಿಕ್ಷಣ ಸಂಸ್ಥೆಗಳ ಮೇಲೆ ನಡೆದಿರುವ ಅನುಮಾನಗಳು ದಟ್ಟವಾಗಿವೆ. ಪರಮೇಶ್ವರ್ ಅವರನ್ನು ಖೆಡ್ಡಾಗೆ ಕೆಡವಲು ಸಂಚು ರೂಪಿಸಿರುವುದು ಸ್ಪಷ್ಟವಾಗಿದೆ. ಇನ್ನಾದರು ದಲಿತರು ಇಂತಹ ರಾಜಕೀಯ ಷಡ್ಯಂತ್ರದ ವಿರುದ್ಧ ಎಚ್ಚೆತ್ತು ಹೋರಾಡಬೇಕು ಎಂದರು.
ಸುದ್ದಿಗೋಷ್ಠಿಯಲ್ಲಿ ಪ್ರಜಾ ವಿಮೋಚನಾ ಚಳವಳಿಯ ಮುರಳಿ, ಎಸ್ಎಸ್ಡಿ ಮುಖಂಡ ಡಾ.ಜಿ.ಗೋವಿಂದಯ್ಯ, ದಲಿತ ಸಂಘರ್ಷ ಸೇನೆ ಮುಖಂಡ ಎ.ಗೋಪಾಲ್, ಮಂಜು, ನಾಗಣ್ಣ, ಸುರೇಶ್, ರವಿಕುಮಾರ್, ಸಂಕರ್, ರಮೇಶ್ ಇತರರಿದ್ದರು.29ಕೆಆರ್ ಎಂಎನ್ 1.ಜೆಪಿಜಿ
ರಾಮನಗರದಲ್ಲಿ ದಲಿತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಡಾ.ಎಂ.ವೆಂಕಟಸ್ವಾಮಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.