ಕನ್ನಡಪ್ರಭ ವಾರ್ತೆ ಬೆಂಗಳೂರು
ಮಡಿಕೇರಿಯ ಕೂರ್ಗ್ ಗ್ಯಾಸ್ ಸರ್ವೀಸ್ ಸೆಂಟರ್ ಎದುರು ಅಡುಗೆ ಅನಿಲದ ಸಿಲಿಂಡರ್ ಗಾಗಿ ಜನ ಕ್ಯೂ ನಿಲ್ಲುತ್ತಿದ್ದಾರೆ. ಬಿಸಿಲಿನಲ್ಲೇ ಮಹಿಳೆಯರು, ವೃದ್ಧರು ಕಾದು ಸುಸ್ತಾಗಿ ಸರದಿ ಸಾಲಿನಲ್ಲೇ ಸಿಲಿಂಡರ್ ಮೇಲೆ ಕುಳಿತಿರುವ ದೃಶ್ಯ ಕಂಡು ಬರುತ್ತಿದೆ.
ಬೆಳಗಾವಿ ಜಿಲ್ಲೆ ರಾಯಭಾಗದಲ್ಲಿ ಏಜೆನ್ಸಿಗಳು ‘ನೋ ಸ್ಟಾಕ್’ ಬೋರ್ಡ್ ಹಾಕಲಾಗಿದೆ. ವಿಜಯಪುರದಲ್ಲಿ ಗೋಳಗುಮ್ಮಟ ರಸ್ತೆಯ ಇಂಡಿಯಸ್ ಗ್ಯಾಸ್ ಎದುರು ಪೊಲೀಸ್ ಭದ್ರತೆಯಲ್ಲಿ ಗ್ಯಾಸ್ ಸಿಲೆಂಡರ್ ವಿತರಣೆ ಮಾಡಲಾಗುತ್ತಿದೆ.ಕಲಬುರಗಿ, ಕೊಪ್ಪಳ, ದಾವಣಗೆರೆ, ರಾಯಚೂರಲ್ಲೂ ಅಡುಗೆ ಅನಿಲಕ್ಕಾಗಿ ಕ್ಯೂ ಕಂಡು ಬರುತ್ತಿದೆ. ರಾಯಚೂರಿನ ಬಿಜನಗೇರಾ ಮೆಟ್ರಿಕ್ ನಂತರದ ಎಸ್ ಟಿ ಹಾಸ್ಟೆಲ್ ನಲ್ಲಿ ವಾಣಿಜ್ಯ ಸಿಲಿಂಡರ್ ಸಿಗದೆ ಕಟ್ಟಿಗೆ ಬಳಸಿ ಅಡುಗೆ ತಯಾರಿಸಲಾಗುತ್ತಿದೆ. ಹಾವೇರಿಯ ಹುಕ್ಕೇರಿ ಮಠದಲ್ಲಿ ವಿದ್ಯಾರ್ಥಿಗಳ ಬಿಸಿಯೂಟ, ಭಕ್ತರ ದಾಸೋಹಕ್ಕೆ ಸಂಕಷ್ಟ ಎದುರಾಗಿದೆ. ಬಳ್ಳಾರಿಯ ಬಹುತೇಕ ಹೋಟೆಲ್ಗಳಲ್ಲಿ ಮೊದಲಿನಿಂದಲೂ ಕಟ್ಟಿಗೆ ಮೇಲೆ ದೋಸೆ ಮಾಡುತ್ತಿದ್ದು, ದೋಸೆ ಈಗಲೂ ಮುಂದುವರಿದಿದೆ. ಆದರೆ, ಇತರ ಮೆನುಗಳಿಗೆ ಕಡಿವಾಣ ಹಾಕಲಾಗಿದೆ. ತುಮಕೂರಿನ ರೈಲ್ವೆ ನಿಲ್ದಾಣದ ರಸ್ತೆಯಲ್ಲಿರುವ ಇಂದಿರಾ ಕ್ಯಾಂಟೀನ್ನಲ್ಲಿ ಸೌದೆ ಒಲೆಯಲ್ಲಿ ಅಡುಗೆ ತಯಾರಿಸಲಾಗುತ್ತಿದೆ.ಆಟೋ ಗ್ಯಾಸ್ ಬೆಲೆಯೂ ಏರಿಕೆ:
ತುಪ್ಪದ ದೋಸೆಗೆ ಹೆಸರಾದ, ಶತಮಾನ ಕಂಡಿರುವ ಧಾರವಾಡದ ಬಾಂಬೆ ರೆಸ್ಟೋರೆಂಟ್ಗೆ ತಾತ್ಕಾಲಿಕವಾಗಿ ಬಾಗಿಲು ಮುಚ್ಚಬೇಕಾದ ಸ್ಥಿತಿ ಬಂದಿದೆ. ಸುಮಾರು 20 ಕಾರ್ಮಿಕರನ್ನು ಹೊಂದಿರುವ ಈ ಹೋಟೆಲ್, ತುಪ್ಪದ ದೋಸೆ ಸೇರಿದಂತೆ ಬೆಳಗಿನ ಹಲವು ಉಪಾಹಾರಕ್ಕೆ ಪ್ರಸಿದ್ಧಿ ಪಡೆದಿದೆ. ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಶಾಸಕ ಅರವಿಂದ ಬೆಲ್ಲದ ಸೇರಿದಂತೆ ಹಲವರು ಈ ಹೋಟೆಲ್ಗೆ ತುಪ್ಪದ ದೋಸೆ ತಿನ್ನಲು ಬರುತ್ತಿದ್ದರು. ಕೋವಿಡ್ ಬಿಟ್ಟರೆ ಈ ಹೋಟೆಲ್ ಬಾಗಿಲು ಮುಚ್ಚಿರುವ ಇತಿಹಾಸ ಇಲ್ಲ. ಇದೀಗ ಸಿಲಿಂಡರ್ ಕಾರಣದಿಂದ ಬಂದ್ ಆಗಿದ್ದು, ಕಾರ್ಮಿಕರಿಗೆ ಕೆಲ ದಿನಗಳ ಕಾಲ ರಜೆ ನೀಡಲಾಗಿದೆ. ಸಿಲಿಂಡರ್ ಸಮಸ್ಯೆ ಬಗೆಹರಿದ ನಂತರ ಮತ್ತೆ ಹೋಟೆಲ್ ಆರಂಭಿಸುವುದಾಗಿ ಮಾಲೀಕರು ತಿಳಿಸಿದ್ದಾರೆ.ಕೋಳಿ ಕೇಳೋರಿಲ್ಲ, ಮೊಟ್ಟೆ ಕೊಳ್ಳೋರಿಲ್ಲ:
ರಾಜ್ಯದ ಕುಕ್ಕುಟೋದ್ಯಮಕ್ಕೆ ಕುತ್ತು ಬಂದಿದೆ. ಮೊಟ್ಟೆ ಮಾರಾಟವೂ ಆಗುತ್ತಿಲ್ಲ, ದರವೂ ಅರ್ಧಕ್ಕರ್ಧ ಕುಸಿದಿದೆ. ಕೋಳಿ ಫಾರ್ಮ್ ಮಾಲಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೊಪ್ಪಳ ಜಿಲ್ಲೆಯಲ್ಲಿ ನಿತ್ಯ 10-15 ಲಕ್ಷ ಕೋಳಿ ಮೊಟ್ಟೆ ಪಕ್ಕದ ಗೋವಾ ಮತ್ತು ಮಹಾರಾಷ್ಟ್ರ ಮೂಲಕ ಗಲ್ಫ್ ರಾಷ್ಟ್ರಗಳಿಗೆ ರಫ್ತಾಗುತ್ತಿತ್ತು. ಈಗ ಮೊಟ್ಟೆಗಳನ್ನು ಕೇಳುವವರೇ ಇಲ್ಲದಂತಾಗಿದೆ. ದರ ಕುಸಿದಿರುವುದು ಒಂದು ಕಡೆಯಾದರೆ, ಉತ್ಪಾದನೆಯಾಗಿರುವ ಮೊಟ್ಟೆ ಕೋಳಿಫಾರ್ಮ್ ನಲ್ಲಿಯೇ ಇರುವಂತಾಗಿದೆ.ಇನ್ನು ಕೋಳಿ ಮೊಟ್ಟೆ ರಫ್ತು ನಿಂತಿದೆ. ಇದರಿಂದ ತೀವ್ರ ಸಮಸ್ಯೆಯಾಗಿದ್ದು, ಸ್ಥಳೀಯ ಮಾರುಕಟ್ಟೆಯಲ್ಲಿ ಅಷ್ಟೊಂದು ಮೊಟ್ಟೆ ಮಾರಾಟವಾಗುವುದಿಲ್ಲ. ಹೀಗಾಗಿ, ₹6.50 ಪೈಸೆ ಇದ್ದ ದರ ಈಗ ₹3 ಕ್ಕೆ ಕುಸಿದಿದೆ.
ವಾಣಿಜ್ಯ ಸಿಲಿಂಡರ್ ತಂದು ಕೊಟ್ಟರೆ ಫ್ರೀ ಫುಡ್ ಆಫರ್!:ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ತಂದು ಕೊಟ್ಟರೆ ಸಿಗುತ್ತದೆ ಉಚಿತ ಆಹಾರ! ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ಪೂರೈಕೆಯಲ್ಲಿ ವ್ಯತ್ಯಯ ಹಿನ್ನೆಲೆಯಲ್ಲಿ ಮಂಗಳೂರಿನ ಹೋಟೆಲ್ ಉದ್ಯಮ ಸಂಸ್ಥೆಯೊಂದು ಸ್ಪೆಷಲ್ ಆಫರ್ ಪ್ರಕಟಿಸಿದೆ. ಮಂಗಳೂರಿನ ವೋಕ್ ಆ್ಯಂಡ್ ಫೋರ್ಕ್ ಮತ್ತು ಬಿಗ್ ಫ್ಯಾಟ್ ರೋಲ್ ಸಂಸ್ಥೆ, ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ತಂದು ಕೊಟ್ಟರೆ 50 ಪ್ಲೇಟ್ ಮೊಮೊಸ್ (ಸುಮಾರು ₹5,500)ಅನ್ನು ಉಚಿತವಾಗಿ ನೀಡುವುದಾಗಿ ಆಫರ್ ನೀಡಿದೆ. ಇನ್ನೊಂದು ಸಂಸ್ಥೆಯವರು ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ತಂದು ಕೊಟ್ಟರೆ 25 ರೋಲ್ ಉಚಿತ ಆಹಾರದ ಆಫರ್ ನೀಡಿದ್ದಾರೆ.ಮಂಗಳೂರಿನ ವೋಕ್ ಆ್ಯಂಡ್ ಫೋರ್ಕ್, ಬೆಂಗಳೂರು ಸೇರಿದಂತೆ ಹಲವು ಕಡೆ ಔಟ್ಲೆಟ್ ಹೊಂದಿದೆ. ಹತ್ತಿರದ ಯಾವುದೇ ಔಟ್ಲೆಟ್ಗೆ ತೆರಳಿದರೂ ಈ ಆಫರ್ ಸಿಗಲಿದೆ. ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲೂ ಸಂಸ್ಥೆ ಈ ಆಫರ್ ಬಗ್ಗೆ ಪೋಸ್ಟ್ ಹಾಕಿದೆ. ಆಫರ್ನ ಕಾನೂನಾತ್ಮಕ ಸಮಸ್ಯೆ ಬಗ್ಗೆ ಅರಿವಿದ್ದರೂ ಸಾಮಾಜಿಕ ತಾಣಗಳಲ್ಲಿ ಈ ಆಫರ್ ವೈರಲ್ ಆಗಿದೆ.