ಕೋಂಗಳಿ ಏತ ನೀರಾವರಿ ಯೋಜನೆ ಶೀಘ್ರ ಮುಗಿಸುವಂತೆ ಶಾಸಕ ಸಲಗರ ಒತ್ತಾಯ
ಬೆಳಗಾವಿ ಅಧಿವೇಶನದಲ್ಲಿ ಉತ್ತರ ಕರ್ನಾಟಕ ಕುರಿತಾಗಿ ಮಾತನಾಡಿದ ಅವರು, ಕೋಂಗಳಿ ಏತ ನೀರಾವರಿ ಯೋಜನೆಯು 306 ಕೋಟಿ ರು. ವೆಚ್ಚದ್ದಾಗಿದ್ದು, 2018ರ ಮಾರ್ಚ 26ರಂದು ಮಂಗಳೂರಿನ ಓಸಿಯನ್ ಗುತ್ತಿಗೆದಾರರಿಗೆ ಕಾರ್ಯಾದೇಶ ನೀಡಲಾಗಿದೆ. ಆದರೆ ಅವರು ಇನ್ನೂ ಈ ಕಾಮಗಾರಿ ಪೂರ್ಣಗೊಳಿಸಿಲ್ಲ, ಹೀಗಾಗಿ ಬಸವಕಲ್ಯಾಣ ತಾಲೂಕಿನಲ್ಲಿ ಬರಗಾಲ ಇದ್ದ ಕಾರಣ ರೈತರು ಸಂಕಷ್ಟದಲ್ಲಿದ್ದಾರೆ ಎಂದು ತಿಳಿಸಿದ್ದಾರೆ.
ಆದ್ದರಿಂದ ಸರ್ಕಾರ ಇತ್ತ ಗಮನ ಹರಿಸಿ ಕಾಮಗಾರಿ ಪೂರ್ಣಗೊಳಿಸಿ, 18 ಕೆರೆಗಳಿಗೆ ನೀರು ತುಂಬಿಸಿ ಹಾಗೂ ರೈತರ ಹೊಲಗಳಿಗೆ ನೀರು ಹರಿಸಲು ಕ್ರಮ ಕೈಗೊಳ್ಳಬೇಕು ಎಂದು ಸಭಾಧ್ಯಕ್ಷರ ಮೂಲಕ ಸರ್ಕಾರಕ್ಕೆ ಮನವಿ ಮಾಡಿದರು.ಬಸವಕಲ್ಯಾಣ ತಾಲೂಕು ಆಸ್ಪತ್ರೆಯಲ್ಲಿ ಕಳೆದ ಏಪ್ರಿಲ್ನಿಂದ ನವೆಂಬರ್ ವರೆಗೆ 1800 ಹೆರಿಗೆಗಳಾಗಿವೆ. ಇದರಲ್ಲಿ ಕೇವಲ 207 ಸಿಜೇರಿಯನ್ ಆಗಿವೆ. ಆದರೆ ಇದೇ ಸಂದರ್ಭದಲ್ಲಿ ನಗರದ ವಿವಿಧ ಖಾಸಗಿ ಆಸ್ಪತ್ರೆಗಳಲ್ಲಿ 940 ಹೆರಿಗೆಗಳಾಗಿದ್ದು, ಇದರಲ್ಲಿ 608 ಸಿಜೇರಿಯನ್ ಆಗಿವೆ. ಸರ್ಕಾರಿ ಆಸ್ಪತ್ರೆಯಲ್ಲಿ ಸಾಮಾನ್ಯ ಹೆರಿಗೆಗಳಾದರೆ, ಖಾಸಗಿ ಆಸ್ಪತ್ರೆಗಳಲ್ಲಿ ಅದು ಹೇಗೆ ಸಿಜೇರಿಯನ್ ಆಗುತ್ತಿವೆ ಎಂಬುವದನ್ನು ಪರಿಶೀಲಿಸಬೇಕು ಎಂದು ಆರೋಗ್ಯ ಇಲಾಖೆಯ ಸಚಿವರಲ್ಲಿ ಮನವಿ ಮಾಡಿದರು.
ವಿಶ್ವಗುರು ಬಸವಣ್ಣನವರ ಕ್ಷೇತ್ರದಿಂದ ಎರಡು ಬಾರಿ ಶಾಸಕನಾಗಿ ವಿಧಾನ ಸಭೆಗೆ ಬಂದಿದ್ದೇನೆ. ಕ್ಷೇತ್ರದಲ್ಲಿ ಸರ್ಕಾರದಿಂದ ಇನ್ನೂ ಅನೇಕ ಅಭಿವೃದ್ಧಿ ಕೆಲಸಗಳು ಆಗಬೇಕಾಗಿದೆ ಎಂದು ಶರಣು ಸಲಗರ ತಿಳಿಸಿದರು.