18 ಕೆರೆಗಳಿಗೆ ನೀರು ತುಂಬಿಸಿ, ಹೊಲಗಳಿಗೆ ನೀರುಣಿಸಿ: ಸರ್ಕಾರಕ್ಕೆ ಆಗ್ರಹ

KannadaprabhaNewsNetwork | Published : Dec 15, 2023 1:30 AM

ಸಾರಾಂಶ

ಕೋಂಗಳಿ ಏತ ನೀರಾವರಿ ಯೋಜನೆಯಿಂದ ಬಸವಕಲ್ಯಾಣ ತಾಲೂಕಿನ 18 ಕೆರೆಗಳನ್ನು ತುಂಬಿಸುವ ಯೋಜನೆ ಮತ್ತು ರೈತರ ಹೊಲಗಳಿಗೆ ನೀರುಣಿಸುವ ಕಾಮಗಾರಿ ಶೀಘ್ರ ಮುಗಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕೆಂದು ಶಾಸಕ ಶರಣು ಸಲಗರ ಸರ್ಕಾರಕ್ಕೆ ಆಗ್ರಹಿಸಿದರು

ಕೋಂಗಳಿ ಏತ ನೀರಾವರಿ ಯೋಜನೆ ಶೀಘ್ರ ಮುಗಿಸುವಂತೆ ಶಾಸಕ ಸಲಗರ ಒತ್ತಾಯ

ಕನ್ನಡಪ್ರಭ ವಾರ್ತೆ ಬಸವಕಲ್ಯಾಣಕೋಂಗಳಿ ಏತ ನೀರಾವರಿ ಯೋಜನೆಯಿಂದ ಬಸವಕಲ್ಯಾಣ ತಾಲೂಕಿನ 18 ಕೆರೆಗಳನ್ನು ತುಂಬಿಸುವ ಯೋಜನೆ ಮತ್ತು ರೈತರ ಹೊಲಗಳಿಗೆ ನೀರುಣಿಸುವ ಕಾಮಗಾರಿ ಶೀಘ್ರ ಮುಗಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕೆಂದು ಶಾಸಕ ಶರಣು ಸಲಗರ ಸರ್ಕಾರಕ್ಕೆ ಆಗ್ರಹಿಸಿದರು.

ಬೆಳಗಾವಿ ಅಧಿವೇಶನದಲ್ಲಿ ಉತ್ತರ ಕರ್ನಾಟಕ ಕುರಿತಾಗಿ ಮಾತನಾಡಿದ ಅವರು, ಕೋಂಗಳಿ ಏತ ನೀರಾವರಿ ಯೋಜನೆಯು 306 ಕೋಟಿ ರು. ವೆಚ್ಚದ್ದಾಗಿದ್ದು, 2018ರ ಮಾರ್ಚ 26ರಂದು ಮಂಗಳೂರಿನ ಓಸಿಯನ್‌ ಗುತ್ತಿಗೆದಾರರಿಗೆ ಕಾರ್ಯಾದೇಶ ನೀಡಲಾಗಿದೆ. ಆದರೆ ಅವರು ಇನ್ನೂ ಈ ಕಾಮಗಾರಿ ಪೂರ್ಣಗೊಳಿಸಿಲ್ಲ, ಹೀಗಾಗಿ ಬಸವಕಲ್ಯಾಣ ತಾಲೂಕಿನಲ್ಲಿ ಬರಗಾಲ ಇದ್ದ ಕಾರಣ ರೈತರು ಸಂಕಷ್ಟದಲ್ಲಿದ್ದಾರೆ ಎಂದು ತಿಳಿಸಿದ್ದಾರೆ.

ಆದ್ದರಿಂದ ಸರ್ಕಾರ ಇತ್ತ ಗಮನ ಹರಿಸಿ ಕಾಮಗಾರಿ ಪೂರ್ಣಗೊಳಿಸಿ, 18 ಕೆರೆಗಳಿಗೆ ನೀರು ತುಂಬಿಸಿ ಹಾಗೂ ರೈತರ ಹೊಲಗಳಿಗೆ ನೀರು ಹರಿಸಲು ಕ್ರಮ ಕೈಗೊಳ್ಳಬೇಕು ಎಂದು ಸಭಾಧ್ಯಕ್ಷರ ಮೂಲಕ ಸರ್ಕಾರಕ್ಕೆ ಮನವಿ ಮಾಡಿದರು.

ಬಸವಕಲ್ಯಾಣ ತಾಲೂಕು ಆಸ್ಪತ್ರೆಯಲ್ಲಿ ಕಳೆದ ಏಪ್ರಿಲ್‌ನಿಂದ ನವೆಂಬರ್‌ ವರೆಗೆ 1800 ಹೆರಿಗೆಗಳಾಗಿವೆ. ಇದರಲ್ಲಿ ಕೇವಲ 207 ಸಿಜೇರಿಯನ್‌ ಆಗಿವೆ. ಆದರೆ ಇದೇ ಸಂದರ್ಭದಲ್ಲಿ ನಗರದ ವಿವಿಧ ಖಾಸಗಿ ಆಸ್ಪತ್ರೆಗಳಲ್ಲಿ 940 ಹೆರಿಗೆಗಳಾಗಿದ್ದು, ಇದರಲ್ಲಿ 608 ಸಿಜೇರಿಯನ್ ಆಗಿವೆ. ಸರ್ಕಾರಿ ಆಸ್ಪತ್ರೆಯಲ್ಲಿ ಸಾಮಾನ್ಯ ಹೆರಿಗೆಗಳಾದರೆ, ಖಾಸಗಿ ಆಸ್ಪತ್ರೆಗಳಲ್ಲಿ ಅದು ಹೇಗೆ ಸಿಜೇರಿಯನ್ ಆಗುತ್ತಿವೆ ಎಂಬುವದನ್ನು ಪರಿಶೀಲಿಸಬೇಕು ಎಂದು ಆರೋಗ್ಯ ಇಲಾಖೆಯ ಸಚಿವರಲ್ಲಿ ಮನವಿ ಮಾಡಿದರು.

ಖಾಸಗಿ ಆಸ್ಪತ್ರೆಯ ವೈದ್ಯರು ಕೇವಲ ಹಣ ಗಳಿಸಲು ಮುಂದಾಗುತ್ತಿದ್ದಾರೆ. ಬಡವರ, ರೈತರ ಹೆಣ್ಮಕ್ಕಳ ಹೊಟ್ಟೆ ಹರಿದು ಹಣ ಗಳಿಕೆಗೆ ಮುಂದಾಗಿದ್ದಾರೆ. ಈ ಕುರಿತು ಗಮನಹರಿಸಿ ಕ್ರಮ ಕೈಗೊಂಡು ಬಡವರ, ರೈತರಿಗೆ ನ್ಯಾಯ ಒದಗಿಸಿಕೊಡಬೇಕು ಎಂದು ಮನವಿ ಮಾಡಿದರು.

ವಿಶ್ವಗುರು ಬಸವಣ್ಣನವರ ಕ್ಷೇತ್ರದಿಂದ ಎರಡು ಬಾರಿ ಶಾಸಕನಾಗಿ ವಿಧಾನ ಸಭೆಗೆ ಬಂದಿದ್ದೇನೆ. ಕ್ಷೇತ್ರದಲ್ಲಿ ಸರ್ಕಾರದಿಂದ ಇನ್ನೂ ಅನೇಕ ಅಭಿವೃದ್ಧಿ ಕೆಲಸಗಳು ಆಗಬೇಕಾಗಿದೆ ಎಂದು ಶರಣು ಸಲಗರ ತಿಳಿಸಿದರು.

Share this article