ಕನ್ನಡಪ್ರಭ ವಾರ್ತೆ ಮೂಡಲಗಿ
ರಾಜ್ಯದ ಗ್ರಾಮೀಣಾಭಿವೃದ್ಧಿ ವ್ಯವಸ್ಥೆಯ ಬೆನ್ನೆಲುಬಾಗಿರುವ ಗ್ರಾಮ ಪಂಚಾಯಿತಿಗಳು ಆರ್ಥಿಕ ಮತ್ತು ಆಡಳಿತಾತ್ಮಕ ಬಿಕ್ಕಟ್ಟನ್ನು ಎದುರಿಸುತ್ತಿವೆ. ರಾಜ್ಯದ 5,950 ಗ್ರಾಮ ಪಂಚಾಯಿತಿಗಳ ಕಾರ್ಯನಿರ್ವಹಣೆಯು ಅನುದಾನದ ಕೊರತೆಯಿಂದಾಗಿ ಸಂಪೂರ್ಣ ಸ್ಥಗಿತಗೊಳ್ಳುವ ಹಂತಕ್ಕೆ ತಲುಪಿದೆ ಎಂದು ರಾಜ್ಯದ ಪಿಡಿಒಗಳು ತಮ್ಮ ಗೂಗಲ್ ಮೀಟ್ ಸಭೆಯಲ್ಲಿ ಅಳಲು ತೋಡಿಕೊಂಡಿದ್ದಾರೆ.
ಗ್ರಾಮ ಪಂಚಾಯತಿಗಳು ತಮ್ಮ ದೈನಂದಿನ ಅನಿವಾರ್ಯ ವೆಚ್ಚಗಳಿಗಾಗಿ 15ನೇ ಹಣಕಾಸು ಯೋಜನೆಯಡಿಯ ಟೈಡ್ ಮತ್ತು ಅನ್-ಟೈಡ್ ಅನುದಾನವನ್ನೇ ಅವಲಂಬಿಸಿವೆ. ಕಳೆದ ಒಂದು ವರ್ಷದಿಂದ ಈ ಅನುದಾನವು ಸಮರ್ಪಕವಾಗಿ ಬಿಡುಗಡೆಯಾಗದ ಕಾರಣ, ಪಂಚಾಯಿತಿಗಳಲ್ಲಿ ಕುಡಿಯುವ ನೀರಿನ ಮೋಟಾರ್ ರಿಪೇರಿ, ಪೈಪ್ಲೈನ್ ಅಳವಡಿಕೆ ಮತ್ತು ಬೀದಿ ದೀಪಗಳ ನಿರ್ವಹಣೆಗೆ ಹಣವಿಲ್ಲದೆ ಆಡಳಿತ ಯಂತ್ರ ಸ್ತಬ್ಧಗೊಂಡಿದೆ.ರಾಜ್ಯದ ಸುಮಾರು ಶೇ.70 ಗ್ರಾಮ ಪಂಚಾಯಿತಿಗಳು ಕಳೆದ ಒಂದು ವರ್ಷದಿಂದ ಕನಿಷ್ಠ ₹ 5 ಲಕ್ಷದಿಂದ ₹ 20 ಲಕ್ಷವರೆಗೆ ಬಾಕಿ ಬಿಲ್ಗಳನ್ನು ಹೊಂದಿವೆ. ಸಾರ್ವಜನಿಕ ಹಿತದೃಷ್ಟಿಯಿಂದ ಪಿಡಿಒಗಳು ಸ್ಥಳೀಯ ಏಜೆನ್ಸಿಗಳಿಂದ ಸಾಲದ ರೂಪದಲ್ಲಿ ಸಾಮಗ್ರಿಗಳನ್ನು ಪಡೆದು ಸೇವೆ ನೀಡಿದ್ದಾರೆ. ಆದರೆ, ಈಗ ಹಳೆಯ ಬಾಕಿ ಪಾವತಿಯಾಗದ ಕಾರಣ, ಯಾವುದೇ ಏಜೆನ್ಸಿಗಳು ಹೊಸ ಸಾಮಗ್ರಿಗಳನ್ನು ನೀಡಲು ಮುಂದೆ ಬರುತ್ತಿಲ್ಲ. ಇದು ಹಳ್ಳಿಗಳಲ್ಲಿ ಮೂಲಭೂತ ಸೌಕರ್ಯಗಳ ನಿರ್ವಹಣೆಗೆ ದೊಡ್ಡ ಅಡ್ಡಿಯಾಗಿದೆ.
ತುರ್ತು ಬೇಡಿಕೆಗಳು: ಬಾಕಿ ಇರುವ ಕುಡಿಯುವ ನೀರಿನ ಸಾಮಗ್ರಿಗಳ ವೆಚ್ಚ ಮತ್ತು ಸ್ವಚ್ಛತಾ ಬಿಲ್ ಭರಿಸಲು ತಕ್ಷಣವೇ ಪರ್ಯಾಯ ವಿಶೇಷ ಅನುದಾನ ಬಿಡುಗಡೆ ಮಾಡಬೇಕು, ಅನುದಾನ ವಿಳಂಬವಾದ ಅವಧಿಯಲ್ಲಿ ಸಾರ್ವಜನಿಕ ಸೇವೆಗಾಗಿ ನಿರ್ವಹಿಸಲಾದ ತುರ್ತು ವೆಚ್ಚಗಳನ್ನು ಪಾವತಿಸಲು ಕೆಟಿಪಿಪಿ ಕಾಯ್ದೆಯ ಸೆಕ್ಷನ್ 4(ಇ) ಈ ಒಂದು ಅವಧಿಗೆ ಮಾತ್ರ ವಿಶೇಷ ವಿನಾಯಿತಿ ನೀಡಿ ಇಲಾಖೆಯಿಂದ ಸ್ಪಷ್ಟ ಮಾರ್ಗಸೂಚಿ ಹೊರಡಿಸಬೇಕು. ಅಧಿಕೃತವಾಗಿ ಸಾಮಗ್ರಿ ಪಡೆದು ಕೆಲಸ ನಿರ್ವಹಿಸಿದ ಅಧಿಕಾರಿಗಳ ಮೇಲೆ ಯಾವುದೇ ಕಾನೂನಾತ್ಮಕ ದೂರುಗಳು ಅಥವಾ ಆಡಿಟ್ ಆಕ್ಷೇಪಣೆಗಳು ಬರದಂತೆ ಇಲಾಖೆ ಪೂರ್ಣ ರಕ್ಷಣೆ ನೀಡುವುದು ಸೇರಿದಂತೆ ಹಲವಾರು ಕ್ರಮ ಕೈಗೋಳಬೇಕೆಂದು ಮನವಿಯಲ್ಲಿ ತಿಳಿಸಿದ್ದಾರೆ.