ಕನ್ನಡಪ್ರಭ ವಾರ್ತೆ ಬೆಳಗಾವಿ
ಬೆಳಗಾವಿ ಪ್ರಾಂತೀಯ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಸೌಹಾರ್ದ ಸಹಕಾರಿ ದಿನಾಚರಣೆ ನಿಮಿತ್ತ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ಸಹಕಾರ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಸಹಕಾರ ಸಂಘ/ಸೌಹಾರ್ದ ಸಹಕಾರಿ ಸಂಘಗಳನ್ನು ರಚಿಸುವುದು ಪ್ರತಿಯೊಬ್ಬ ಪ್ರಜೆಯ ಹಕ್ಕು ಆಗಿದೆ. ಆದ್ದರಿಂದ ಸಹಕಾರ ಇಲಾಖೆಯ ಮತ್ತು ಸಂಯುಕ್ತ ಸಹಕಾರಿಯ ಅಧಿಕಾರಿಗಳು ಜನರಿಗೆ ಸಹಕಾರ/ಸೌಹಾರ್ದ ಕಾಯ್ದೆ ಮತ್ತು ನಿಯಮಗಳ ಬಗ್ಗೆ ತಿಳುವಳಿಕೆ ನೀಡುವುದು ಕರ್ತವ್ಯವಾಗಿದೆ ಎಂದರು.
ಹಿರಿಯ ಸಹಕಾರಿ ಶಾಂತಿನಾಥ ನಾಯಕ ಮಾತನಾಡಿ, ಸಹಕಾರ ಸಂಘವು ಕೇವಲ ಒಂದು ವ್ಯಾಪಾರ ಸಂಸ್ಥೆಯಲ್ಲ, ಅದು ಸದಸ್ಯರ ಆರ್ಥಿಕ ಹಿತಾಸಕ್ತಿಯನ್ನು ಕಾಯುವ ಒಂದು ಪ್ರಜಾಪ್ರಭುತ್ವದ ವ್ಯವಸ್ಥೆ, ಕಾಯ್ದೆಯ ಪ್ರಕಾರ, ಸಂಘದ ಆರ್ಥಿಕ ಶಿಸ್ತನ್ನು ಕಾಪಾಡುವುದು ಆಡಳಿತ ಮಂಡಳಿಯ ಪ್ರಾಥಮಿಕ ಕರ್ತವ್ಯವಾಗಿದೆ. ಸಕಾಲಕ್ಕೆ ಲೆಕ್ಕಪರಿಶೋಧನೆ ಮಾಡದಿದ್ದರೆ ಅಥವಾ ಸಹಕಾರಿ ಕಾಯ್ದೆಯನ್ನು ಉಲ್ಲಂಘಿಸಿದರೆ ಕಾನೂನು ಕ್ರಮಗಳನ್ನು ಜರುಗಿಸಲು ಅವಕಾಶವಿದೆ. ನಿರ್ದೇಶಕರು ಕಾಯ್ದೆಯನ್ನು ಪಾಲಿಸಿದಾಗ ಮಾತ್ರ ಸದಸ್ಯರ ಷೇರು ಹಣ ಮತ್ತು ಠೇವಣಿಗೆ ರಕ್ಷಣೆ ಸಿಗುತ್ತದೆ. ಲೆಕ್ಕ ಪರಿಶೋಧನೆಯು ಸಂಘದ ಆರೋಗ್ಯ ತಪಾಸಣೆ ಇದ್ದಂತೆ. ಇದು ಪಾರದರ್ಶಕತೆಯನ್ನು ಹೆಚ್ಚಿಸಿ, ಸದಸ್ಯರಲ್ಲಿ ವಿಶ್ವಾಸ ಮೂಡಿಸುತ್ತದೆ ಎಂದು ತಿಳಿಸಿದರು.ಪ್ರಾಂತೀಯ ವ್ಯವಸ್ಥಾಪಕ ಬಸವರಾಜ ಹೊಂಗಲ ಮಾತನಾಡಿ, ಸೌಹಾರ್ದ ಸಹಕಾರಿ ಕಾಯ್ದೆಯು 25 ವರ್ಷಗಳು ಪೂರ್ಣಗೊಂಡು ರಜತ ಮಹೋತ್ಸವ ಆಚರಣೆ ಮಾಡಲಾಗಿದೆ. ಈ ಸೌಹಾರ್ದ ಕಾಯ್ದೆಯಲ್ಲಿ ಕಾರ್ಯನಿರ್ವಹಣೆ ಮಾಡುತ್ತಿರುವ ಸಹಕಾರ ಸಂಘಗಳನ್ನು ಅಭಿವೃದ್ಧಿಪಡಿಸಿ ಉಳಿಸಿಕೊಂಡು ಹೋಗುವುದು ಎಲ್ಲರ ಕರ್ತವ್ಯವಾಗಿದೆ. ರಾಜ್ಯದಲ್ಲಿ ಕೆಲವು ಸಹಕಾರ ಸಂಘಗಳಲ್ಲಿ ತಮ್ಮ ವೈಯಕ್ತಿಕ ಉದ್ದೇಶಕ್ಕಾಗಿ ಸಹಕಾರಿ ಕ್ಷೇತ್ರಕ್ಕೆ ಧಕ್ಕೆ ಉಂಟು ಮಾಡಿರುವುದಕ್ಕೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದು ಸಹಕಾರ ಚಳವಳಿಯ ಉಳಿವಿಗೆ ಅನಿವಾರ್ಯವಾಗಿದೆ ಎಂದು ತಿಳಿಸಿದರು.
ಈ ವೇಳೆ ಹಿರಿಯ ಸಹಕಾರಿಗಳಾದ ರಾಘವೇಂದ್ರ ಪಾಟೀಲ, ಸಂಯುಕ್ತ ಸಹಕಾರಿಯ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಹಾಗೂ ಇತರರು ಇದ್ದರು.