ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಆರ್ಥಿಕ ನಷ್ಟ

KannadaprabhaNewsNetwork |  
Published : Jan 27, 2026, 02:45 AM IST
26ಎಚ್ಎಸ್ಎನ್7ಎ : ತೆರೆದ ಜೀಪಿನಲ್ಲಿ ನಿಂತು ಸಚಿವರಾದ ಕೃಷ್ಣಭೈರೇಗೌಡ ಗೌರವ ವಂದನೆ ಸ್ವೀಕರಿಸಿದರು. | Kannada Prabha

ಸಾರಾಂಶ

ವೈವಿಧ್ಯತೆಯೇ ಭಾರತದ ನಿಜವಾದ ಶಕ್ತಿ. ಹಲವು ಭಾಷೆಗಳು, ಹಲವು ಸಂಸ್ಕೃತಿಗಳು ನಮ್ಮ ದೇಶದ ಅಸ್ತಿತ್ವ. ಆದರೆ ಕೇಂದ್ರ ಸರ್ಕಾರ ಒಂದೇ ಭಾಷೆ, ಒಂದೇ ಸಂಸ್ಕೃತಿ, ಒಂದೇ ಧರ್ಮವನ್ನು ಬಲವಂತವಾಗಿ ಹೇರಲು ಹೊರಟಿದೆ. ಇದು ಸಂವಿಧಾನದ ಆತ್ಮದ ಮೇಲೆಯೇ ನಡೆಯುತ್ತಿರುವ ದಾಳಿಯಾಗಿದೆ. ಹಿಂದಿ ಭಾಷೆಯನ್ನು ವ್ಯವಸ್ಥಿತವಾಗಿ ದೇಶದ ಮೇಲೆ ಹೇರಲಾಗುತ್ತಿದೆ ಎಂದು ಸಚಿವರಾದ ಕೃಷ್ಣ ಬೈರೇಗೌಡರು ತಮ್ಮ ಭಾಷಣದ ಬಹುತೇಕ ಹಂತಗಳಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಭಾರೀ ಟೀಕಾಪ್ರಹಾರ ನಡೆಸಿದರು.

ಕನ್ನಡಪ್ರಭ ವಾರ್ತೆ ಹಾಸನ

ನಗರದ ಹಾಕಿ ಮೈದಾನದಲ್ಲಿ ನಡೆದ 77ನೇ ಗಣರಾಜ್ಯೋತ್ಸವದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಕೃಷ್ಣ ಬೈರೇಗೌಡರು ತಮ್ಮ ಭಾಷಣದ ಬಹುತೇಕ ಹಂತಗಳಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಭಾರೀ ಟೀಕಾಪ್ರಹಾರ ನಡೆಸಿದರು. ಕೇಂದ್ರದಿಂದ ರಾಜ್ಯಕ್ಕೆ ಭಾರೀ ಅನ್ಯಾಯವಾಗುತ್ತಿದೆ. ಭಾರೀ ಆರ್ಥಿಕ ನಷ್ಟವಾಗುತ್ತಿದೆ ಎಂದು ಹರಿಹಾಯ್ದರು.

ಮೊದಲಿಗೆ ಜಿಲ್ಲಾ ಉಸ್ತುವಾರಿ ಹಾಗೂ ಕಂದಾಯ ಸಚಿವರಾದ ಕೃಷ್ಣಬೈರೇಗೌಡ ಅವರು ಮಹಾತ್ಮ ಗಾಂಧೀಜಿ ಹಾಗೂ ಅಂಬೇಡ್ಕರ್‌ ಭಾವಚಿತ್ರಕ್ಕೆ ಪುಷ್ಫನಮನ ಸಲ್ಲಿಸಿದ ನಂತರ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಗಣರಾಜ್ಯೋತ್ಸವ ಸಂದೇಶ ನೀಡಿದರು. ಕೇಂದ್ರದ ವಿರುದ್ಧ ನೇರ ಆರೋಪಗಳನ್ನು ಮಾಡಿದ ಅವರು, ವೈವಿಧ್ಯತೆಯೇ ಭಾರತದ ನಿಜವಾದ ಶಕ್ತಿ. ಹಲವು ಭಾಷೆಗಳು, ಹಲವು ಸಂಸ್ಕೃತಿಗಳು ನಮ್ಮ ದೇಶದ ಅಸ್ತಿತ್ವ. ಆದರೆ ಕೇಂದ್ರ ಸರ್ಕಾರ ಒಂದೇ ಭಾಷೆ, ಒಂದೇ ಸಂಸ್ಕೃತಿ, ಒಂದೇ ಧರ್ಮವನ್ನು ಬಲವಂತವಾಗಿ ಹೇರಲು ಹೊರಟಿದೆ. ಇದು ಸಂವಿಧಾನದ ಆತ್ಮದ ಮೇಲೆಯೇ ನಡೆಯುತ್ತಿರುವ ದಾಳಿಯಾಗಿದೆ. ಹಿಂದಿ ಭಾಷೆಯನ್ನು ವ್ಯವಸ್ಥಿತವಾಗಿ ದೇಶದ ಮೇಲೆ ಹೇರಲಾಗುತ್ತಿದೆ. ಈ ಹಿಂದೆ ಇದಕ್ಕೆ ದೇಶದಾದ್ಯಂತ ಭಾರೀ ಚಳವಳಿಗಳು ನಡೆದಿದ್ದವು. ಆದರೆ ಇಂದು ಮೌನವಾಗಿ, ಹಂತ ಹಂತವಾಗಿ ಈ ಹೇರಿಕೆ ನಡೆಯುತ್ತಿದೆ. ಇದು ಅಪಾಯಕಾರಿ ಪ್ರವೃತ್ತಿ ಎಂದು ಎಚ್ಚರಿಸಿದರು.

ಭಾಷೆ-ಸಂಸ್ಕೃತಿಯ ಜೊತೆಗೆ ಆರ್ಥಿಕ ದಾಳಿ:“ಇದು ಕೇವಲ ಭಾಷೆ ಮತ್ತು ಸಂಸ್ಕೃತಿಯ ಮೇಲಿನ ದಾಳಿ ಮಾತ್ರವಲ್ಲ. ರಾಜ್ಯಗಳ ಆರ್ಥಿಕ ಶಕ್ತಿಯ ಮೇಲಿನ ದಾಳಿಯೂ ಹೌದು” ಎಂದು ಸಚಿವರು ಹೇಳಿದರು.ಕರ್ನಾಟಕವನ್ನು ಕೇಂದ್ರ ಸರ್ಕಾರ ‘ಅಕ್ಷಯ ಪಾತ್ರೆ’ಯಂತೆ ಬಳಸಿಕೊಳ್ಳುತ್ತಿದೆ. ಕರ್ನಾಟಕದ ಆದಾಯದ ಮೇಲೆ ದೇಶದ ಆರ್ಥಿಕ ವ್ಯವಸ್ಥೆ ನಿಂತಿದೆ. ಆದರೆ ರಾಜ್ಯಕ್ಕೆ ಬರಬೇಕಾದ ನ್ಯಾಯಸಮ್ಮತ ಹಣವನ್ನು ನೀಡದೆ ಶಕ್ತಿ ಕುಂದಿಸುವ ಕೆಲಸ ನಡೆಯುತ್ತಿದೆ ಎಂದು ದೂರಿದರು.

ಕಳೆದ ಹಣಕಾಸು ಆಯೋಗದಲ್ಲಿ ಕರ್ನಾಟಕದ ತೆರಿಗೆ ಪಾಲನ್ನು ಶೇ.೨೩ರಷ್ಟು ಕಡಿತಗೊಳಿಸಲಾಗಿದೆ. ಇದರಿಂದ ರಾಜ್ಯ ಗಂಭೀರ ಆರ್ಥಿಕ ಸಂಕಷ್ಟಕ್ಕೆ ದೂಡಲ್ಪಟ್ಟಿದೆ. ೧೦ ವರ್ಷಗಳ ಹಿಂದೆ ಕರ್ನಾಟಕಕ್ಕೆ ಶೇ.೪.೭ರಷ್ಟು ತೆರಿಗೆ ಪಾಲು ಸಿಗುತ್ತಿತ್ತು. ಕನಿಷ್ಠ ಅಷ್ಟಾದರೂ ನೀಡಬೇಕು. ೪.೭ಕ್ಕಿಂತ ಹೆಚ್ಚು ಪಾಲು ನೀಡಿದರೆ ಮಾತ್ರ ಅದು ನ್ಯಾಯವಾಗುತ್ತದೆ ಎಂದರು.

ರಾಜ್ಯಕ್ಕೆ ಅನ್ಯಾಯವಾದರೆ ಅದು ದೇಶಕ್ಕೂ ಒಳ್ಳೆಯದಲ್ಲ. ರಾಜ್ಯಗಳ ಶಕ್ತಿ ಕುಂದಿಸಿ ದೇಶ ಪ್ರಗತಿ ಸಾಧಿಸಲು ಸಾಧ್ಯವಿಲ್ಲ. ದೇಶ ಶಕ್ತಿಯಾಗಬೇಕಾದರೆ ರಾಜ್ಯಗಳು ಶಕ್ತಿಯುತವಾಗಿರಬೇಕು. ರಾಜ್ಯಗಳನ್ನು ಕೈಮುಷ್ಟಿಯಲ್ಲಿ ಹಿಡಿದು ದೇಶವನ್ನು ಶಕ್ತಿಶಾಲಿ ಮಾಡಲಾಗದು. ಕರ್ನಾಟಕ ದೇಶಕ್ಕೆ ಅತ್ಯಧಿಕ ಆದಾಯ ಕೊಡುಗೆ ನೀಡುವ ರಾಜ್ಯಗಳಲ್ಲಿ ಅಗ್ರಸ್ಥಾನದಲ್ಲಿದೆ. ತಲಾ ಆದಾಯದಲ್ಲೂ ದೇಶದಲ್ಲೇ ನಂಬರ್ ೧ ಸ್ಥಾನದಲ್ಲಿರುವ ಪ್ರಗತಿಪರ ರಾಜ್ಯ ಇದು. ಕರ್ನಾಟಕ ಚಿನ್ನದ ಮೊಟ್ಟೆ ಇಡುವ ರಾಜ್ಯ. ಕನ್ನಡಿಗರ ಆದಾಯ ಹೆಚ್ಚಾದರೆ ದೇಶದ ಆದಾಯವೂ ಹೆಚ್ಚಾಗುತ್ತದೆ. ಆದರೆ ಪ್ರಗತಿ ಮಾಡಿದ ರಾಜ್ಯಗಳಿಗೆ ಕೇಂದ್ರ ಸರ್ಕಾರ ಶಿಕ್ಷೆ ನೀಡುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮಹಾತ್ಮ ಗಾಂಧಿ ನರೇಗಾ ಯೋಜನೆಯನ್ನು ದುರ್ಬಲಗೊಳಿಸಿ ಬಡವರ ಶಕ್ತಿ ಕುಂದಿಸಲಾಗುತ್ತಿದೆ. ಉದ್ಯೋಗ ಖಾತ್ರಿ ಯೋಜನೆ ಬಡವರಿಗೆ ಆಸರೆಯಾಗಿತ್ತು. ಅದನ್ನು ಕಿತ್ತೆಸೆಯುವ ಮೂಲಕ ಲಕ್ಷಾಂತರ ಕುಟುಂಬಗಳಿಗೆ ಅನ್ಯಾಯ ಮಾಡಲಾಗಿದೆ. ನರೇಗಾ ಯೋಜನೆಯನ್ನು ಪುನಃ ಬಲಪಡಿಸಬೇಕು ಎಂದು ಆಗ್ರಹಿಸಿದರು. ಭಾಷಣದ ಅಂತ್ಯದಲ್ಲಿ ಸಚಿವ ಕೃಷ್ಣಬೈರೇಗೌಡ ಮಾತನಾಡುತ್ತಾ.. ಗಣರಾಜ್ಯೋತ್ಸವದ ದಿನವಾದರೂ ಕೇಂದ್ರ ಸರ್ಕಾರಕ್ಕೆ ಈ ಅನ್ಯಾಯಗಳು ಮನವರಿಕೆ ಆಗಲಿ. ಸಂವಿಧಾನ ಉಳಿಯಬೇಕು, ರಾಜ್ಯಗಳ ಹಕ್ಕು ಉಳಿಯಬೇಕು, ಆಗಲೇ ದೇಶ ಬಲಿಷ್ಠವಾಗುತ್ತದೆ ಎಂದು ಹೇಳಿದರು.

ವಿವಿಧ ಪೊಲೀಸ್ ತುಕಡಿಗಳು, ಶಾಲಾ-ಕಾಲೇಜು ವಿದ್ಯಾರ್ಥಿಗಳಿಂದ ಶಿಸ್ತಿನ ಹಾಗೂ ಆಕರ್ಷಕ ಪಥಸಂಚಲನ ನಡೆಯಿತು. ಸಮಾಜದಲ್ಲಿ ಗಣನೀಯ ಸೇವೆ ಸಲ್ಲಿಸಿದವರನ್ನು ಗುರುತಿಸಿ ಸನ್ಮಾನಿಸುವ ಮೂಲಕ ಗೌರವಿಸಲಾಯಿತು. ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ನೂರಾರು ಸಾರ್ವಜನಿಕರು ಗಣರಾಜ್ಯೋತ್ಸವ ಸಂಭ್ರಮಕ್ಕೆ ಸಾಕ್ಷಿಯಾದರು. ಈ ವೇಳೆ ಸಂಸದ ಶ್ರೇಯಸ್ ಎಂ. ಪಟೇಲ್, ಶಾಸಕ ಎಚ್.ಪಿ. ಸ್ವರೂಪ್ ಪ್ರಕಾಶ್, ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ, ಜಿಲ್ಲಾ ಪಂಚಾಯತ್ ಸಿಇಒ ಬಿ.ಆರ್‌. ಪೂರ್ಣಿಮಾ, ಎಸ್ಪಿ ಶುಭಾನ್ವಿತ, ತಹಸೀಲ್ದಾರ್ ಗೀತಾ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಧನ್ಯೋಸ್ಮಿ ತಂಡದ ಸಾಧನೆಗಳ ಕಿರು ಹೊತ್ತಿಗೆ ಬಿಡುಗಡೆ
ಮಾಜಿ ಸೈನಿಕರು ಸೌಲಭ್ಯ ಪಡೆಯಲು ಸಂಘಟನೆ ಅಗತ್ಯ-ಪಾಟೀಲ