ಹೊಸದುರ್ಗ: ತಾಲೂಕಿನ ಶ್ರೀರಾಂಪುರದಲ್ಲಿನ ಹೊಸದುರ್ಗ ಮುಖ್ಯ ರಸ್ತೆಯಲ್ಲಿರುವ ಗ್ಯಾಸ್ ಸಿಲಿಂಡರ್ ಗೋಡೌನ್, ಕಂಚೀಪುರ ಗ್ರಾಮದಲ್ಲಿ ಸಿಲಿಂಡರ್ ಸ್ಫೋಟಗೊಂಡು 2 ಗುಡಿಸಲು ಭಸ್ಮ ಹಾಗೂ ಪೆಟ್ರೋಲ್ ಬಂಕ್ ಬಳಿಯ ತೆಂಗಿನ ತೋಟದಲ್ಲಿ ಬೆಂಕಿ ತಗುಲಿ ಶನಿವಾರ ಮಧ್ಯಾಹ್ನ ಏಕಕಾಲದಲ್ಲಿ ಮೂರು ದುರ್ಘಟನೆ ಸಂಭವಿಸಿದೆ.
ಕಳೆದ ಫೆಬ್ರವರಿ ತಿಂಗಳಲ್ಲಿ 40 ಅಗ್ನಿ ಅವಘಡಗಳು ವರದಿಯಾಗಿದ್ದು ಕೇವಲ 20 ಅವಘಡಗಳ ಸ್ಥಳಗಳಿಗೆ ಹೋಗಲು ಸಾಧ್ಯವಾಗಿದೆ. ಈ ತಿಂಗಳ 2 ದಿನದಲ್ಲಿಯೇ 8 ಅವಘಡಗಳು ಸಂಭವಿಸಿದ್ದು ಕೇವಲ 3 ಸ್ಥಳಗಳಿಗೆ ಭೇಟಿ ನೀಡಲು ಸಾಧ್ಯವಾಗಿದೆ. ಕಚೇರಿಯಲ್ಲಿ ಸಿಬ್ಬಂದಿಗಳಿದ್ದರೂ ವಾಹನವಿಲ್ಲ ಏನು ಮಾಡಲಿ ಎನ್ನುತ್ತಾರೆ ಹೊಸದುರ್ಗ ಅಗ್ನಿಶಾಮದ ಠಾಣೆಯ ಪ್ರಭಾರ ಠಾಣಾಧಿಕಾರಿ ಗುಡುಗನಹಟ್ಟಿ.
ಈ ಮೊದಲು ಹೊಸದುರ್ಗದಲ್ಲಿ 2 ವಾಹನಗಳಿದ್ದವು ಆದರೆ ಸರ್ಕಾರದ ನಿರ್ದೇಶನದಂತೆ ಹಳೆಯ ವಾಹನ ಸ್ಕ್ರಾಪ್ ಎಂದು ನಿಲ್ಲಿಸಲಾಗಿದೆ. ಹಾಗಾಗಿ ಈಗಿರುವುದು ಒಂದೇ ವಾಹನವಾದ್ದರಿಂದ ಎಲ್ಲಾ ಸ್ಥಳಗಳಿಗೂ ಭೇಟಿ ನೀಡಲು ಸಾಧ್ಯವಾಗುತ್ತಿಲ್ಲ. ಇನ್ನೊಂದು ವಾಹನ ಠಾಣೆಗೆ ನೀಡಿದರೆ ಸಾರ್ವಜನಿಕರ ಕೋರಿಕೆಗೆ ತಕ್ಕಂತೆ ಸ್ಪಂದಿಸಲು ಸಾಧ್ಯ ಎನ್ನುತ್ತಾರೆ ಸಿಬ್ಬಂದಿ.