ಉಪ್ಪಿನಂಗಡಿ: ಇಲ್ಲಿಗೆ ಸಮೀಪದ ಪೆರ್ನೆ, ಬಿಳಿಯೂರು ಗ್ರಾಮದ ಬಳಪು, ತುರ್ವೆರೆ ಗುರಿ, ಪೂ ಪಾಡಿಕಲ್ಲು, ಕುಂಕತೋಟ ಎಂಬಲ್ಲಿ ಕಾಡ್ಗಿಚ್ಚು ಉಂಟಾಗಿ ಭಾರಿ ಪ್ರಮಾಣದಲ್ಲಿ ಕಾಡಿನ ಸಂಪತ್ತು ಹಾನಿಗೀಡಾದ ಘಟನೆ ಗುರುವಾರ ಸಂಭವಿಸಿದೆ. ಪೆರ್ನೆ ಗ್ರಾಮದಲ್ಲಿ ವಿದ್ಯುತ್ ತಂತಿಯಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಕಾಣಿಸಿಕೊಂಡ ಬೆಂಕಿ ಕ್ಷಣ ಮಾತ್ರದಲ್ಲಿ ಪಸರಿಸಿ ಬಿಳಿಯೂರು, ಕೋಡಿಂಬಾಡಿ ಪ್ರದೇಶದ ನೆಡುತೋಪು ಪ್ರದೇಶವನ್ನು ಆವರಿಸಿತು. ಇದರಿಂದಾಗಿ ಈ ಪ್ರದೇಶದಲ್ಲಿದ್ದ ಸಾವಿರಾರು ಗೇರು ಮರಗಳು ಇನ್ನಿತರ ಕಾಡು ಮರಗಳು ಬೆಂಕಿಗಾಹುತಿಯಾಗಿ ಅಪಾರ ನಷ್ಠ ಸಂಭವಿಸಿದೆ.
ಬೆಂಕಿ ನಿಯಂತ್ರಣ ಕಾರ್ಯಾಚರಣೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳಾದ ಕಾಂತರಾಜು, ಸುಧೀರ್ ಹೆಗ್ಡೆ, ಉಲ್ಲಾಸ್ ಭಾಗವಹಿಸಿದ್ದರು. ಪುತ್ತೂರಿನ ಅಗ್ನಿಶಾಮಕ ದಳ ಬೆಂಕಿ ನಿಯಂತ್ರಿಸಲು ಶ್ರಮಿಸಿತು. ಕಾಡ್ಗಿಚ್ಚು ಪಸಹರಿಸಿದ ಸ್ಥಳದ ಬಳಿ ಜನವಸತಿ ಇದ್ದ ಕಾರಣ ಹೆಚ್ಚಿನ ಅನಾಹುತ ಆಗದಂತೆ ಸ್ಥಳೀಯರು ಮತ್ತು ಇಲಾಖಾಧಿಕಾರಿಗಳು ಕಾಳಜಿ ವಹಿಸಿ ಶ್ರಮಿಸಿದರು.