ಕನ್ನಡಪ್ರಭ ವಾರ್ತೆ ಪಾವಗಡ
ತಾಲೂಕಿನ ರಂಗಸಮುದ್ರ ಗ್ರಾಪಂ ವ್ಯಾಪ್ತಿಯ ಕಾರನಾಗನಹಟ್ಟಿ ಗ್ರಾಮದ ನಾಗಪ್ಪ ಎನ್ನುವರು ವ್ಯವಸಾಯದಿಂದ ಜೀವನ ಸಾಗಿಸುತ್ತಿದ್ದು ತಮಗೆ ಸೇರಿದ್ದ ಗ್ರಾಮ ಹೊರವಲಯದ ಬೆಟ್ಟದ ತಪ್ಪಲಿನ ಜಮೀನಿನಲ್ಲಿ ಶೆಡ್ ಹಾಕಿಕೊಂಡು ಸೀಮೆ ಹಸು ಸಾಕಾಣಿಕೆ ಹಾಗೂ ಇತರೆ ಕೃಷಿ ಕೆಲಸದಲ್ಲಿ ನಿರತರಾಗಿ ಅಲ್ಲಿಯೆ ವಾಸವಾಗಿದ್ದರು. ಮಧ್ಯಾಹ್ನ ಕೀಡಿಗೇಡಿಗಳು ಬೆಟ್ಟಕ್ಕೆ ಬೆಂಕಿ ಹಚ್ಚಿ ಪರಾರಿಯಾಗಿದ್ದು ಇದರ ಪರಿಣಾಮ ಬೆಟ್ಟದ ತಪ್ಪಲಿನಲ್ಲಿ ಶೆಡ್ಗೆ ಬೆಂಕಿ ವ್ಯಾಪಿಸಿ ಸಿಮೆಂಟ್ ಮೇಲ್ಛಾವಣಿಯ ಶೆಡ್ ಪೂರಾ ಸುಟ್ಟುಹೋಗಿದೆ.
ಇದರಲ್ಲಿದ್ದ ಮೂರು ಸೀಮೆ ಹಸುಗಳ ಪೈಕಿ ಸುಮಾರು 60 ಸಾವಿರ ಮೌಲ್ಯದ ಸೀಮೆ ಹಸು ಸುಟ್ಟು ಹೋಗಿದ್ದು ಉಳಿದ ಎರಡು ಸೀಮೆ ಹಸುಗಳ ಸ್ಥಿತಿ ಗಂಭೀರವಾಗಿದೆ. ಇದರ ಜತೆ ಪಕ್ಕದಲ್ಲಿಯೆ ಸೀಮೆ ಹಸುಗಳ ಮೇವಿಗೆ ಸಂಗ್ರಹಿಸಿದ್ದ ತಲಾ 6 ರಂತೆ 12 ಲೋಡ್ಗಳಷ್ಟು ಕಡಲೇ ಬಳಿ ಹಾಗೂ ಭತ್ತದ ಹುಲ್ಲು ಸಂಪೂರ್ಣ ಸುಟ್ಟು ಭಸ್ಮವಾಗಿದೆ. ಅಲ್ಲದೇ ಶೆಡ್ನಲ್ಲಿ ಸಂಗ್ರಹಿಸಿದ್ದ 10 ಚೀಲ ಕಡಲೇಕಾಯಿ ಹಾಗೂ 15 ಚೀಲ ಭತ್ತ ಮೊಟ್ಟೆಗಳು ಸುಟ್ಟುಹೋಗಿವೆ. ಬೆಂಕಿ ವ್ಯಾಪಿಸಿದ ವಿಷಯ ತಿಳಿಯುತ್ತಿದ್ದಂತೆ ತಕ್ಷಣ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸುವಲ್ಲಿ ನಿರತರಾದ ವೇಳೆ ರೈತ ಬಡನಾಗಪ್ಪನ ಕೈಕಾಲು ಹಾಗೂ ದೇಹದ ಇತರೆ ಭಾಗಗಳು ಸುಟ್ಟುಹೋಗಿದ್ದು ಗಾಯಗಳಿಂದ ನರಳುತ್ತಿದ್ದ ಈತನನ್ನು ಕೂಡಲೇ ತುರ್ತುವಾಹನದಲ್ಲಿ ಕರೆ ತುಂದು ಪಾವಗಡ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.ಇನ್ನೂ ಬೆಂಕಿ ಎತ್ತರಕ್ಕೆ ವ್ಯಾಪಿಸಿ ಉರಿಯುತ್ತಿರುವ ವೇಳೆ ಸ್ಥಳೀಯ ಸಾರ್ವಜನಿಕರು ಸ್ಥಳಕ್ಕೆ ದಾವಿಸಿ ಸೊಪ್ಪು ಹಾಗೂ ಇತರೆ ಮಣ್ಣು ಸುರಿಯುವ ಮೂಲಕ ಬೆಂಕಿ ನಿಂದಿಸಿದ್ದಾರೆ. ಈ ವೇಳೆ ಅನೇಕ ಭಾರಿ ಆಗ್ನಿಶಾಮಕ ದಳದ ಕಚೇರಿಗೆ ಕರೆ ಮಾಡಿದ್ದು ಆಗ್ನಿಶಾಮಕ ದಳ ವಾಹನ ಬರುವ ಹೊತ್ತಿಗೆ ಗ್ರಾಮಸ್ಥರೆ ಬೆಂಕಿ ನಂದಿಸಿ ಬಾರಿ ಅನಾಹುತವನ್ನು ತಡೆಗಟ್ಟಿದ್ದಾರೆ. ಬೆಂಕಿ ನಂದಿಸಿದ ಬಳಿಕ ಅಗ್ನಿ ಶಾಮಕ ದಳದ ವಾಹನ ಸ್ಥಳಕ್ಕೆ ಅಗಮಿಸಿ ನಂದಿ ಹೋಗಿದ್ದ ಸ್ಥಳಕ್ಕೆ ನೀರು ಹಾಯಿಸಿ ವಾಪಸ್ಸಾಗಿರುವುದಾಗಿ ಗ್ರಾಮಸ್ಥರು ಆರೋಪಿಸಿದ್ದಾರೆ.
ಘಟನೆ ಕುರಿತು ಶಾಸಕ ಎಚ್.ವಿ.ವೆಂಕಟೇಶ್ ತೀವ್ರ ಕಳವಳ ವ್ಯಕ್ತಪಡಿಸಿದ್ದು ಬೆಂಕಿಯಿಂದ ನಷ್ಟಕ್ಕೀಡಾದ ಹಸು, ಹುಲ್ಲು ಬಣವೆ ಹಾಗೂ ಇತರೆ ಸಾಮಗ್ರಿಗಳ ಕುರಿತು ವರದಿ ಪಡೆದು ಪರಿಹಾರ ಕಲ್ಪಿಸಿಕೊಡುವಂತೆ ತಹಸೀಲ್ದಾರ್ ವರದರಾಜು ಹಾಗೂ ಪಶು ಆರೋಗ್ಯಧಿಕಾರಿಗಳಿಗೆ ಅದೇಶಿಸಿದ್ದಾರೆ.
ಫೋಟೋ 11ಪಿವಿಡಿ3.11ಪಿವಿಡಿ4.11ಪಿವಿಡಿ5