ಉತ್ತರ ಕರ್ನಾಟಕ ಭಾಗದಲ್ಲಿ ಮೊದಲ ಪಿಂಚಣಿ ಅದಾಲತ್‌

KannadaprabhaNewsNetwork |  
Published : Nov 27, 2025, 02:00 AM IST
ಹುಬ್ಬಳ್ಳಿಯ ಬಿಎಸ್‌ಎನ್‌ಎಲ್ ಕಚೇರಿಯ ಸಂಚಾರ್‌ ಸದನದಲ್ಲಿ ಬುಧವಾರ ಪಿಂಚಣಿದಾರರ ಅದಾಲತ್‌ ಹಮ್ಮಿಕೊಳ್ಳಲಾಯಿತು. | Kannada Prabha

ಸಾರಾಂಶ

ಬೆಂಗಳೂರಿಗೆ ಸೀಮಿತವಾಗಿದ್ದ ಈ ಪಿಂಚಣಿದಾರರ ಆದಾಲತ್‌ ಮೊದಲ ಬಾರಿಗೆ ಉತ್ತರ ಕರ್ನಾಟಕ ಭಾಗದಲ್ಲಿ ಆಯೋಜಿಸಲಾಗಿದೆ. ಈ ಅದಾಲತ್‌ನಿಂದಾಗಿ ಧಾರವಾಡ, ಗದಗ, ಹಾವೇರಿ ಜಿಲ್ಲೆಯ ಬಿಎಸ್‌ಎನ್‌ಎಲ್‌ ಪಿಂಚಣಿದಾರರ ಸಮಸ್ಯೆಗಳ ತೀವ್ರಗತಿಯಲ್ಲಿ ಪರಿಹರಿಸಲು ಸಹಕಾರಿಯಾಗಲಿದೆ.

ಹುಬ್ಬಳ್ಳಿ:

ದೂರಸಂಪರ್ಕ ಇಲಾಖೆಯ ಅಡಿ ಪ್ರತಿ ಮೂರು ತಿಂಗಳಿಗೊಮ್ಮೆ ಸಂವಹನ ಖಾತೆಗಳ ನಿಯಂತ್ರಕ (ಸಿಸಿಎ) ನೇತೃತ್ವದಲ್ಲಿ ಬೆಂಗಳೂರಿನಲ್ಲಿ ನಡೆಸಲಾಗುತ್ತಿದ್ದ ಬಿಎಸ್‌ಎನ್‌ಎಲ್‌ ಪಿಂಚಣಿದಾರರ ಅದಾಲತ್‌ ಮೊದಲ ಬಾರಿಗೆ ಹುಬ್ಬಳ್ಳಿಯಲ್ಲಿ ನಡೆಯಿತು.

ಇಲ್ಲಿನ ಸ್ಟೇಷನ್‌ ರಸ್ತೆಯಲ್ಲಿರುವ ಬಿಎಸ್‌ಎನ್‌ಎಲ್ ಕಚೇರಿಯ ಸಂಚಾರ್‌ ಸದನದಲ್ಲಿ ಬುಧವಾರ ಹಮ್ಮಿಕೊಳ್ಳಲಾಗಿದ್ದ ಈ ಅದಾಲತ್‌ನಲ್ಲಿ ನೂರಾರು ಬಿಎಸ್‌ಎನ್‌ಎಲ್‌ ಪಿಂಚಣಿದಾರರು ಪಾಲ್ಗೊಂಡು ಹಲವು ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡರು.

ಈ ವೇಳೆ ಮಾತನಾಡಿದ ಬಿಎಸ್‌ಎನ್‌ಎಲ್‌ನ ಸಂವಹನ ಖಾತೆಗಳ ನಿಯಂತ್ರಕ(ಸಿಸಿಎ) ಅಧಿಕಾರಿ ಸುನೀಲ್ ಜಾರ್ಜ್, ಬೆಂಗಳೂರಿಗೆ ಸೀಮಿತವಾಗಿದ್ದ ಈ ಪಿಂಚಣಿದಾರರ ಆದಾಲತ್‌ ಮೊದಲ ಬಾರಿಗೆ ಉತ್ತರ ಕರ್ನಾಟಕ ಭಾಗದಲ್ಲಿ ಆಯೋಜಿಸಲಾಗಿದೆ. ಈ ಅದಾಲತ್‌ನಿಂದಾಗಿ ಧಾರವಾಡ, ಗದಗ, ಹಾವೇರಿ ಜಿಲ್ಲೆಯ ಬಿಎಸ್‌ಎನ್‌ಎಲ್‌ ಪಿಂಚಣಿದಾರರ ಸಮಸ್ಯೆಗಳ ತೀವ್ರಗತಿಯಲ್ಲಿ ಪರಿಹರಿಸಲು ಸಹಕಾರಿಯಾಗಲಿದೆ. ರಾಜ್ಯದಲ್ಲಿ ಒಟ್ಟು 60 ಸಾವಿರಕ್ಕೂ ಅಧಿಕ ಹಾಗೂ ಈ ಭಾಗ (ಧಾರವಾಡ, ಗದಗ, ಹಾವೇರಿ)ದಲ್ಲಿ ಒಟ್ಟು 2 ಸಾವಿರಕ್ಕೂ ಅಧಿಕ ಪಿಂಚಣಿದಾರರಿದ್ದಾರೆ. ಈ ಭಾಗದವರು ಬೆಂಗಳೂರಿಗೆ ಆಗಮಿಸಿ ಪಿಂಚಣಿ ಅದಾಲತ್‌ನಲ್ಲಿ ಪಾಲ್ಗೊಳ್ಳಲು ಸಮಸ್ಯೆಯಾಗುತ್ತಿತ್ತು. ಈ ಸಮಸ್ಯೆ ಅರಿತು ಈ ಬಾರಿ ಮೊದಲ ಬಾರಿಗೆ 42ನೇ ಪಿಂಚಣಿ ಅದಾಲತ್‌ನ್ನು ಹುಬ್ಬಳ್ಳಿಯಲ್ಲಿ ಆಯೋಜಿಸಲಾಗಿದೆ. ಮುಂದಿನ ದಿನಗಳಲ್ಲಿ ದಾವಣಗೆರಿ, ಬೆಳಗಾವಿ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಆಯೋಜಿಸಲು ನಿರ್ಧರಿಸಲಾಗಿದೆ ಎಂದು ಮಾಹಿತಿ ನೀಡಿದರು.

ಸೈಬರ್‌ ವಂಚನೆ ಕುರಿತು ಜಾಗೃತಿ:

ಸಿಸಿಎ ಅಧಿಕಾರಿ ಅಭಿಲಾಷ ಮಾತನಾಡಿ, ಸೈಬರ್‌ ವಂಚಕರಿಗೆ ಹೆಚ್ಚಾಗಿ ನಿವೃತ್ತರೆ ಬಲಿಯಾಗುತ್ತಿದ್ದಾರೆ. ಈ ಕುರಿತು ಪಿಂಚಣಿದಾರರಿಗೆ ಜಾಗೃತಿ ಮೂಡಿಸುವ ಕಾರ್ಯಾಗಾರ ಆಯೋಜಿಸುವ ಕಾರ್ಯವಾಗಬೇಕು. ಈ ಕುರಿತು ಪಿಂಚಣಿದಾರರ ಸಂಘ-ಸಂಸ್ಥೆಗಳು ಹೆಚ್ಚಿನ ಆಸಕ್ತಿ ವಹಿಸಿ ಕಾರ್ಯಾಗಾರ ನಡೆಸುವ ಮೂಲಕ ಜಾಗೃತಿ ಮೂಡಿಸಬೇಕು. ಇದಕ್ಕೆ ಬೇಕಾದ ಸಹಕಾರ ನೀಡಲಾಗುವುದು ಎಂದರು.

ಈ ವೇಳೆ ಹಲವು ಪಿಂಚಣಿದಾರರು ತಮಗೆ ಆಗಿರುವ ಸಮಸ್ಯೆಗಳ ಕುರಿತು ಅದಾಲತ್‌ನಲ್ಲಿ ಮಾಹಿತಿ ನೀಡಿ ಸಮಸ್ಯೆ ಪರಿಹರಿಸಿಕೊಂಡರು. ಅಧಿಕಾರಿಗಳಾದ ಪ್ರಭಾಮಣಿ, ಅಪ್ಪಾಸ್ವಾಮಿ, ಎನ್‌. ಪ್ರಕಾಶ, ಪಂಚಣಿದಾರರಾದ ಎನ್‌.ಕೆ. ಗಂದಿಗವಾಡ, ಎಸ್‌.ಎಲ್‌. ಪೂಜಾರ, ಎಂ.ಎನ್. ಘೋರ್ಪಡೆ, ವಿ.ಎಸ್. ಸೊಪ್ಪಿನಮಠ ಸೇರಿದಂತೆ ಹುಬ್ಬಳ್ಳಿ-ಧಾರವಾಡ, ಗದಗ, ಹಾವೇರಿಯ ಬಿಎಸ್‌ಎನ್‌ಎಲ್‌ನ ಪಿಂಚಣಿದಾರರು ಪಾಲ್ಗೊಂಡಿದ್ದರು.

PREV

Recommended Stories

ಡಿಕೆಶಿ ಭೇಟಿಯಾದ್ರೂ ಸಿದ್ದುಗೇ ನಮ್ಮ ಬೆಂಬಲ: ಜಾರಕಿಹೊಳಿ
2028ಕ್ಕೆ ಕಾಂಗ್ರೆಸ್‌ ಅಧಿಕಾರಕ್ಕೆ ತರಲು ಸತೀಶ್‌ ಜತೆ ಚರ್ಚೆ : ಡಿಕೆ