ಕನ್ನಡಪ್ರಭ ವಾರ್ತೆ ಮೈಸೂರು
ಆಯೋಜಕರು ಒಂದು ನೂರು ಮಂದಿಯ ನಿರೀಕ್ಷೆಯಲ್ಲಿದ್ದರು. ಆದರೆ ನಗರದ ವಿವಿಧ ಶಾಲೆಗಳ ವಿದ್ಯಾರ್ಥಿಗಳು ತಂಡೋಪತಂಡವಾಗಿ ಬಂದು ಉತ್ಸಾಹದಿಂದ ಪಾಲ್ಗೊಂಡರು. ಹೀಗಾಗಿ ಶ್ರೀ ಕಲಾನಿಕೇತನ ಕಲಾ ಶಾಲೆಯ ಜೊತೆಗೆ ಪಕ್ಕದಲ್ಲಿರುವ ದಿವ್ಯರೂಪಾ ಕಲ್ಯಾಣ ಮಂಟಪದಲ್ಲಿಯೂ ವಿದ್ಯಾರ್ಥಿಗಳ ಚಿತ್ರರಚನೆಗೆ ಸ್ಥಳ ಮಾಡಿಕೊಡಬೇಕಾಗಿ ಬಂದಿತು.
ಅಲೆಯನ್ಸ್ ಕ್ಲಬ್ ಅಂತಾರಾಷ್ಟ್ರೀಯ ಕಾರ್ಯದರ್ಶಿ ನಾಗರಾಜ ವಿ.ಬೈರಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನಾವು ಮುಂದಿನ ಪೀಳಿಗೆಗೆ ಪರಿಶುದ್ಧ ವಾತಾವರಣ ಬಿಟ್ಟುಕೊಡಬೇಕೆ ಹೊರತು ಕಲುಷಿತ ವಾತಾವರಣವನ್ನಲ್ಲ. ಪೋಷಕರು ಮಕ್ಕಳಿಗೆ ಹಣ, ಆಸ್ತಿ, ಅಂತಸ್ತು ಒದಗಿಸುವುದಕ್ಕಿಂತ ಪರಿಸರ ಸಂರಕ್ಷಣೆಯ ಬಗ್ಗೆ ಅರಿವು ಮೂಡಿಸಬೇಕು ಎಂದು ಕರೆ ನೀಡಿದರು.ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಲೆಯನ್ಸ್ ಕ್ಲಬ್ ಆರಂಭವಾಗಿ 16 ವರ್ಷಗಳಾಗಿದ್ದು, ಇದೇ ಮೊದಲ ಬಾರಿಗೆ ಮಕ್ಕಳಿಗೆ ಪರಿಸರ ಕುರಿತು ಚಿತ್ರಕಲಾ ಸ್ಪರ್ಧೆ ಏರ್ಪಡಿಸಲಾಗಿದೆ. ರಾಜ್ಯದ ಮೈಸೂರು, ಬೆಂಗಳೂರು, ಉಡುಪಿ, ಮಂಡ್ಯ ಸೇರಿದಂತೆ 5 ಜಿಲ್ಲೆಗಳು, ದೇಶದ 45 ಜಿಲ್ಲೆಗಳು ವಿಶ್ವದ 28 ದೇಶಗಳಲ್ಲಿ ಸ್ಪರ್ಧೆ ನಡೆಯುತ್ತಿದೆ. ಸುಮಾರು 15 ಸಾವಿರ ಮಕ್ಕಳು ಭಾಗವಹಿಸುತ್ತಿದ್ದಾರೆ. ಗೆದ್ದವರಿಗೆ ಎರಡು ವಿಭಾಗಗಳಲ್ಲಿ ತಲಾ ಏಳು ಬಹುಮಾನಗಳನ್ನು ನೀಡಲಾಗುವುದು. ಭಾಗವಹಿಸಿದ್ದ ಎಲ್ಲರಿಗೂ ಪ್ರಮಾಣಪತ್ರ ನೀಡಲಾಗುವುದು. ಇಲ್ಲಿ ವಿಜೇತರಾದವರನ್ನು ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆ ಎಲ್ಲಿಯೇ ನಡೆದರೂ ಅಲೆಯನ್ಸ್ ಕ್ಲಬ್ ವತಿಯಿಂದಲೇ ಮಕ್ಕಳನ್ನು ಪೋಷಕರ ಜೊತೆ ಕಳುಹಿಸಿಕೊಡಲಾಗುವುದು ಎಂದರು.
ನಂತರ ನಡೆದ ಸಮಾರೋಪದಲ್ಲಿ ವಿಜೇತರಿಗೆ ಕ್ರಮವಾಗಿ ಐದು, ಮೂರು, ಎರಡು, ಒಂದು ಸಾವಿರ ರು.ಗಳ ಮೊದಲ ನಾಲ್ಕು ಬಹುಮಾನ, ಐದು ನೂರು ರೂ.ಗಳ ನಾಲ್ಕು ಸಮಾಧಾನಕರ ಬಹುಮಾನಗಳನ್ನು ನೀಡಲಾಯಿತು.