ಕನ್ನಡಪ್ರಭ ವಾರ್ತೆ ಕೊಳ್ಳೇಗಾಲದಲಿತರೆಂದರೆ ಕಾಫಿ, ಟೀ ನೀಡುವುದಿಲ್ಲ, ದಲಿತ ಕಾಲೋನಿಗಳಲ್ಲಿ ಯುವಕರು ಗಾಂಜಾಕ್ಕೆ ದಾಸರಾಗುತ್ತಿದ್ದಾರೆ, ಬೈಕ್ ವ್ಹೀಲಿಂಗ್ ಮಾಡುವರನ್ನು ದಂಡಿಸಿ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸುತ್ತ ಅಕ್ರಮ ಗಾಂಜಾ, ಡ್ರಗ್ಸ್ ಮಾರಾಟಗಾರರ ವಿರುದ್ಧ ಕ್ರಮಕೈಗೊಳ್ಳಿ. ಕೆಲ ಬ್ಯಾಂಕ್ ಗಳಲ್ಲಿ ದಲಿತರಿಗೆ ನೀಡಬೇಕಾದ ಸಬ್ಸಿಡಿ ನೀಡುತ್ತಿಲ್ಲ ಎಂಬಿತ್ಯಾದಿ ದೂರುಗಳು ಎಸ್ಸಿ-ಎಸ್ಟಿ ಕುಂದು ಕೊರತೆ ಸಭೆಯಲ್ಲಿ ದಲಿತ ಮುಖಂಡರಿಂದ ಕೇಳಿ ಬಂದಿವೆ. ಡಿವೈಎಸ್ಪಿ ಕಚೇರಿಯಲ್ಲಿ ಬುಧವಾರ ಕರೆಯಲಾಗಿದ್ದ ಕೊಳ್ಳೇಗಾಲ ಉಪವಿಭಾಗ ಮಟ್ಟದ ಪರಿಶಿಷ್ಟಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕುಂದುಕೊರತೆ ಸಭೆಯಲ್ಲಿ ಅನೇಕ ದಲಿತ ಮುಖಂಡರು ತಮ್ಮ ಕಾಲೋನಿ ಹಾಗೂ ದಲಿತ ಸಮಾಜದ ಸಮಸ್ಯೆಗಳನ್ನು ಎಳೆ ಎಳೆಯಾಗಿ ಬಿಚ್ಚಿಟ್ಟರು. ಮಂಜುನಾಥ್ ಎಂಬವರು ಸಭೆಯಲ್ಲಿ ಕೈಗಾರಿಕೆ ಇಲಾಖೆ ಪಿಎಂಇಜಿಪಿ ಯೋಜನೆ ಅಡಿಯಲ್ಲಿ ಎಸ್ಸಿ, ಎಸ್ಟಿಗಳಿಗೆ ನೀಡಬೇಕಾದ ಶೇ.35ರಷ್ಟು ಸಬ್ಸಿಡಿ ಮಂಜೂರಾಗಿಲ್ಲ. ಈ ಕಾರಣಕ್ಕೆ ಬ್ಯಾಂಕ್ಗಳಿಂದ ದಲಿತರಿಗೆ ನೋಟಿಸ್ ಜಾರಿಯಾಗುತ್ತಿದ್ದು ಇದರಿಂದ ಮಾನಸಿಕವಾಗಿ ತೊಂದರೆಯಾಗುತ್ತಿದೆ. ಈ ಬಗ್ಗೆ ಕ್ರಮವಹಿಸಬೇಕು ಎಂದು ದೂರಿದರು.
ಮುಖಂಡರ ತರಾಟೆ
ಎಲ್ಲೊ ಕುಳಿತಿರುವ, ನಿಂತು ಮಾತನಾಡುವರನ್ನು ತಂದು ಕೂರಿಸಿ ಪೊಲೀಸ್ ಇಲಾಖೆ ಎಸ್ಸಿ, ಎಸ್ಟಿ ಕುಂದು ಕೊರತೆ ಸಭೆ ನಡೆಸಿ ಕೈತೊಳೆದುಕೊಳ್ಳುವ ಕೆಲಸ ಮಾಡುತ್ತಿದೆ. ದಲಿತ ಸಮಾಜದ ಮುಖಂಡರ ಸಭೆಗೆ ಆಹ್ವಾನ ನೀಡದೇ ತಾರತಮ್ಯ ನೀತಿ ಅನುಸರಿಸಲಾಗುತ್ತಿದೆ ಎಂದು ಸಭೆಯಲ್ಲಿ ಹಲವು ದಲಿತ ಮುಖಂಡರು ಅಸಮಾಧಾನ ಹೊರಹಾಕಿದರು. ಕೆಲ ಪೊಲೀಸ್ ಅಧಿಕಾರಿಗಳ ವರ್ತನೆಗೆ ಅಸಮಾಧಾನ ವ್ಯಕ್ತಪಡಿಸಿದರು.ಮಧುನಾಯಕ್ ಮಾತನಾಡಿ, ಪಟ್ಟಣ ಪೊಲೀಸ್ ಇಲಾಖೆ ನಡೆಸುವ ಎಸ್ಸಿ, ಎಸ್ಟಿ ಕುಂದುಕೊರತೆ ಸಭೆ ಮಾಹಿತಿ ಮುಖಂಡರಿಗೆ ಸಮರ್ಪಕವಾಗಿ ದೊರೆಯುತ್ತಿಲ್ಲ. ಬೆರಳೆಣಿಕೆ ಜನರು ಹಾಗೂ ಅಲ್ಲಿ ಇಲ್ಲಿ ನಿಂತಿರುವ ಸಾರ್ವಜನಿಕರನ್ನು ಕರೆತಂದು ಸಭೆ ನಡೆಸಿ ಕೈತೊಳೆದುಕೊಳ್ಳುವ ಪ್ರಕ್ರಿಯೆ ಕೈಗೊಳ್ಳಲಾಗುತ್ತಿದೆ ಎಂದು ತರಾಟೆ ತೆಗೆದುಕೊಂಡರು. ಸಭೆಯಲ್ಲಿ ಮಾಧ್ಯಮದವರಿಗೂ ಮಾಹಿತಿ ನೀಡದ್ದಕ್ಕೆ ಕೆಲ ಮುಖಂಡರು ಈ ತಾರತಮ್ಯ ನೀತಿ ಸರಿಯಲ್ಲ, ಸಭೆಯ ವಿಚಾರಗಳು ಮಾಧ್ಯಮದ ಮೂಲಕ ಇತರರಿಗೂ ತಿಳಿಯುವಂತಾಗಬೇಕು. ಇಂದಿನ ಸಭೆಯಲ್ಲಿ ಕೇವಲ 40-50 ಮಂದಿಯನ್ನು ಕರೆದು ಕೂರಿಸಿ ಸಭೆ ನಡೆಸುವುದು ಸರಿಯಲ್ಲ ಎಂದರು.ದಲಿತ ಸಮಾಜದ ಮೇಲಿನ ದೌರ್ಜನ್ಯ, ತಾರತಮ್ಯ ನೀತಿ ಸಹಿಸಲ್ಲ. ಈ ಬಗ್ಗೆ ಜಾಗೃತಿ ಮೂಡಿಸಲಾಗುವುದು, ಇಂದಿನ ಸಭೆಯಲ್ಲಿನ ಚರ್ಚೆಗಳನ್ನು ಆಲಿಸಿದ್ದು ಹಂತ ಹಂತವಾಗಿ ಕ್ರಮವಹಿಸಲಾಗುವುದು. ಮಾಧ್ಯಮದವರನ್ನು ಇಂದಿನ ಸಭೆಗೆ ಆಹ್ವಾನಿಸಿಲ್ಲ, ಮುಂದೆ ಈ ರೀತಿ ಆಗದಂತೆ ನೋಡಿಕೊಳ್ಳುತ್ತೇವೆ.
- ಧರ್ಮೇಂದ್ರ, ಡಿವೈಎಸ್ಪಿ ಕೊಳ್ಳೇಗಾಲ