ಕನ್ನಡಪ್ರಭ ವಾರ್ತೆ ವಿರಾಜಪೇಟೆ
ಪ್ರತಿಯೊಬ್ಬರು ಕಣ್ಣುಗಳ ಆರೋಗ್ಯದ ಕಡೆಗೆ ಗಮನಹರಿಸಬೇಕೆಂದು ವಿರಾಜಪೇಟೆಯ ಸೆಂಟ್ ಆನ್ಸ್ ಪದವಿ ಕಾಲೇಜಿನ ವ್ಯವಸ್ಥಾಪಕರು ಹಾಗೂ ಸಂತ ಅನ್ನಮ್ಮ ಪಿಯು ಕಾಲೇಜಿನ ಪ್ರಾಂಶುಪಾಲರಾದ ರೆ. ಫಾ. ಮದಲೈ ಮುತ್ತು ರವರು ಅಭಿಪ್ರಾಯಪಟ್ಟರು.ಅವರು ಕಾಲೇಜಿನ ಎನ್ಎಸ್ಎಸ್ ಘಟಕ ಹಾಗೂ ವಿರಾಜಪೇಟೆಯ ಡಾ. ಅಗರ್ವಾಲ್ಸ್ ಕ್ಲಿನಿಕ್ ನ ಸಹಯೋಗದಲ್ಲಿ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ವಿದ್ಯಾರ್ಥಿಗಳಿಗೆ ಉಚಿತ ಕಣ್ಣಿನ ತಪಾಸಣಾ ಶಿಬಿರ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿ ಮಾತನಾಡಿದರು. ಕಣ್ಣು ಮನುಷ್ಯನ ದೇಹದ ಪ್ರಮುಖ ಅಂಗವಾಗಿದ್ದು ಜೀವನದುದ್ದಕ್ಕೂ ಕಣ್ಣುಗಳ ಆರೋಗ್ಯದ ಕಡೆಗೆ ಗಮನ ಹರಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಕಣ್ಣುಗಳ ರಕ್ಷಣೆಗಾಗಿ ನಿಗದಿತ ಸಮಯದಲ್ಲಿ ತಜ್ಞ ವೈದ್ಯರನ್ನು ಭೇಟಿ ಮಾಡಿ ತಪಾಸಣೆ ಮಾಡಿಸುವುದರ ಮೂಲಕ ಕಣ್ಣಿನ ರಕ್ಷಣೆಯನ್ನು ಮಾಡಬಹುದಾಗಿದೆ. ವಿದ್ಯಾರ್ಥಿಗಳು ಮೊಬೈಲ್ ಗೀಳಿಗೆ ಬಲಿಯಾಗದೆ ಈ ಹಂತದಿಂದಲೇ ಕಣ್ಣಿನ ಆರೋಗ್ಯದ ಕಡೆಗೆ ಜಾಗೃತಿ ವಹಿಸಬೇಕು ಎಂದರು.
ಪದವಿ ಕಾಲೇಜಿನ ಪ್ರಾಂಶುಪಾಲರಾದ ತೃಪ್ತಿ ಬೋಪಣ್ಣ ರವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತಾ ಆರೋಗ್ಯದ ಜಾಗೃತಿ ಪ್ರತಿಯೊಬ್ಬರಲ್ಲೂ ಇರಬೇಕು. ಅಂತೆಯೇ ಕಣ್ಣುಗಳ ಆರೋಗ್ಯದ ಬಗ್ಗೆ ವಿದ್ಯಾರ್ಥಿಗಳು ತಾವು ಜಾಗೃತರಾಗುವುದರ ಜೊತೆಗೆ ಸಮಾಜವನ್ನು ಜಾಗೃತ ಗೊಳಿಸಿ ಎಂದರು. ಕಾಲೇಜಿನ ಎನ್ ಎಸ್ ಎಸ್ ಅಧಿಕಾರಿಗಳಾದ ಬಿ. ಎನ್.ಶಾಂತಿಭೂಷಣ್ ರವರು ಕಾರ್ಯಕ್ರಮದ ಸ್ವರೂಪದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು.ಈ ಸಂದರ್ಭದಲ್ಲಿ ಕಾಲೇಜಿನ ಐ ಕ್ಯೂ ಎ ಸಿ ಸಂಚಾಲಕಿ ಹೇಮ ಬಿ. ಡಿ., ವಿರಾಜಪೇಟೆ ಡಾ. ಅಗರ್ವಾಲ್ಸ್ ಕ್ಲಿನಿಕ್ ನ ವ್ಯವಸ್ಥಾಪಕರು ಹಾಗೂ ಆಪ್ಟೋ ಮೆಟ್ರಿಸ್ಟ್ ಅರ್ಜುನ್ ದೇವಯ್ಯ, ಮೈಸೂರು ಡಾ. ಅಗರ್ವಾಲ್ಸ್ ಆಸ್ಪತ್ರೆಯ ಆಪ್ಟೋ ಮೆಟ್ರಿಸ್ಟ್ ಗಳಾದ ಅನೈನಾ, ಆಲಿ ಮುಜಮಿಲ್ ರವರು ಉಪಸ್ಥಿತರಿದ್ದರು.
ಆಪ್ಟೋ ಮೆಟ್ರಿಸ್ಟ್ ರವರು ವಿದ್ಯಾರ್ಥಿಗಳಿಗೆ ಕಣ್ಣಿನ ತಪಾಸಣೆಯನ್ನು ನಡೆಸಿದರು. ತಪಾಸಣೆಯ ಬಳಿಕ ವಿದ್ಯಾರ್ಥಿಗಳಿಗೆ ಸ್ಥಳದಲ್ಲಿಯೇ ಸೂಕ್ತ ಸಲಹೆಗಳನ್ನು ನೀಡಿದರು. ಹೆಚ್ಚಿನ ಚಿಕಿತ್ಸೆಗೆ ಅವಶ್ಯಕವಿರುವ ವಿದ್ಯಾರ್ಥಿಗಳಿಗೆ ಮಾರ್ಗದರ್ಶನವನ್ನು ನೀಡಿದರು. ಮಾತ್ರವಲ್ಲದೆ ಕನ್ನಡಕ ಬಳಕೆ, ಓದುವಾಗ ಬಳಸುವ ಕನ್ನಡಕದ ಬಗ್ಗೆ ವಿವರಿಸಿದರು. ಕಣ್ಣಿನ ಪೊರೆ ಹಾಗೂ ನಿವಾರಣಾ ವಿಧಾನದ ಬಗ್ಗೆ ತಿಳಿಸಿದರು. ಪದವಿ ಕಾಲೇಜಿನ ಮುನ್ನುರಕ್ಕೂ ಅಧಿಕ ವಿದ್ಯಾರ್ಥಿಗಳು ಈ ಆರೋಗ್ಯ ತಪಾಸಣೆಯಲ್ಲಿ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಕಾಲೇಜಿನ ಎನ್ ಎಸ್ ಎಸ್ ಘಟಕದ ನಾಯಕರು ಉಪಸ್ಥಿತರಿದ್ದರು.