ಕನ್ನಡಪ್ರಭವಾರ್ತೆ ಸೋಮವಾರಪೇಟೆ

ಕೊಡಗಿನ ಜಾನಪದ ಕಲೆಗಳು ಅದರ ಶ್ರೀಮಂತ ಸಂಸ್ಕೃತಿ, ವೀರ ಪರಂಪರೆ ಮತ್ತು ಪ್ರಕೃತಿಯೊಂದಿಗಿನ ನಿಕಟ ಸಂಬಂಧವನ್ನು ಪ್ರತಿಬಿಂಬಿಸುತ್ತವೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಟಿ.ಪಿ. ರಮೇಶ್ ಹೇಳಿದರು. ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಮತ್ತು ತಾಲೂಕು ಘಟಕ ಹಾಗೂ ಸಾಂದಿಪನಿ ಆಂಗ್ಲಮಾದ್ಯಮ ಪ್ರೌಢಶಾಲೆ ಇವರ ಸಂಯುಕ್ತ ಆಶ್ರಯದಲ್ಲಿ ಶಾಲೆಯ ಸಭಾಂಗಣದಲ್ಲಿ 2025- 26 ನೇ ಸಾಲಿನ ದಿ. ಡಿ.ಜೆ. ಪದ್ಮನಾಭ ಅವರ ಸ್ಮರಣಾರ್ಥ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಕೊಡಗಿನಲ್ಲಿ ಜಾನಪದ ಕಲೆ ವಿಷಯ ಬಗ್ಗೆ ಅವರು ಮಾತನಾಡಿದರು.ಕೊಡಗಿನ ಜಾನಪದದಲ್ಲಿ ಬೋಳ್‌ಕಾಟ್, ಕೋಲಾಟ, ಉಮ್ಮತಾಟ್ ಮತ್ತು ಕತ್ತಿ ಆಟ್ ಪ್ರಮುಖ ನೃತ್ಯ ಪ್ರಕಾರಗಳಾಗಿವೆ. ಇವುಗಳನ್ನು ಸಾಂಪ್ರದಾಯಿಕ ಉಡುಗೆಯೊಂದಿಗೆ, ಡೋಲು ಮತ್ತು ಛತ್ರಿಗಳ ಲಯಕ್ಕೆ ಪ್ರದರ್ಶಿಸಲಾಗುತ್ತದೆ ಎಂದರು.ಕೊಡಗಿನ ಬೇರೆ ಬೇರೆ ಜನಾಂಗಗಳು ತಮ್ಮದೇ ಆದ ರೀತಿಯಲ್ಲಿ ಜನಪದ ಹಾಡು ಮತ್ತು ನೃತ್ಯಗಳ ಮೂಲಕ ಕೊಡಗಿನ ಸಂಸ್ಕೃತಿಗೆ ಕೊಡುಗೆ ನೀಡಿದ್ದಾರೆ. ಸೊಬಾನೇ ಹಾಡು, ಒಕ್ಕಲಿಗ ಜನಾಂಗದ ಸಿಡಿಯಾಟ್, ಸುಗ್ಗಿ ಕುಣಿತ, ಯರವ, ಮತ್ತು ಕುರುಬರ ಹಾಡು, ನೃತ್ಯಗಳು, ಹಲವಾರು ಜನಾಂಗಗಳು ಕೊಡಗಿನ ಸಾಂಸ್ಕೃತಿಕ ಲೋಕಕ್ಕೆ ಕೊಡುಗೆಗಳನ್ನು ನೀಡಿದೆ. ರಂಗಭೂಮಿ ಮತ್ತು ಜಾನಪದ, ಕೊಡಗಿನ ಸಾಂಸ್ಕೃತಿಕ ಲೋಕಕ್ಕೆ ತನ್ನದೇ ಆದ ಕೊಡುಗೆಗಳನ್ನು ನೀಡಿದೆ ಎಂದು ತಿಳಿಸಿದರು.ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೇಶವ ಕಾಮತ್ ಮಾತನಾಡಿ, ವಿದ್ಯಾರ್ಥಿಗಳ ಶೈಕ್ಷಣಿಕ ವಿಷಯಗಳನ್ನು ಅಭಿವೃದ್ಧಿಗೊಳಿಸುವ ಕಾರ್ಯಕ್ರಮಗಳನ್ನು ಸಾಹಿತ್ಯ ಪರಿಷತ್ ದತ್ತಿ ಕಾರ್ಯಕ್ರಮಗಳ ಮೂಲಕ ಜಿಲ್ಲೆಯಾದ್ಯಂತ ಹಮ್ಮಿಕೊಂಡಿದೆ ಎಂದರು.ಪರಿಷತ್ ತಾಲೂಕು ಅಧ್ಯಕ್ಷ ಎಸ್. ಡಿ.ವಿಜೇತ್ ಅಧ್ಯಕ್ಷತೆ ವಹಿಸಿದ್ದರು. ಸಾಂಧಿಪನಿ ಶಾಲೆಯ ವ್ಯವಸ್ಥಾಪಕಿ ಹರಿಣಿ, ಪ್ರಭಾರ ಮುಖ್ಯೋಪಾಧ್ಯಾಯನಿ ಮಹದೇವಮ್ಮ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಸಂಘಟನಾ ಕಾರ್ಯದರ್ಶಿ ವಿವೇಕ್ ರೈ, ತಾಲೂಕು ಗೌರವ ಕಾರ್ಯದರ್ಶಿ ಎ.ಪಿ. ವೀರರಾಜ್, ಗೌರವ ಖಜಾಂಚಿ ಕೆ.ಪಿ. ದಿನೇಶ್, ನಂಗಾರು ಕೀರ್ತಿ ಪ್ರಸಾದ್, ಸಂಘಟನಾ ಕಾರ್ಯದರ್ಶಿ ವಸಂತಿ ರವೀಂದ್ರ ಇದ್ದರು.ಪ್ರೌಢಶಾಲಾ ವಿದ್ಯಾರ್ಥಿಗಳು ನಾಡಗೀತೆಯನ್ನು ಹಾಡಿದರು. ವಿದ್ಯಾರ್ಥಿಗಳಿಗೆ ನಡೆದ ವಿವಿಧ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.