ಜಾನಪದ ಕಲೆಯು ಈ ನೆಲದ ಮಣ್ಣಿನ ತಾಯಿಬೇರಾಗಿದ್ದು, ನಿರ್ದಿಷ್ಟ ಸಮುದಾಯದ ಸಂಪ್ರದಾಯ, ಸಂಸ್ಕೃತಿ, ನಂಬಿಕೆಗಳು ಮತ್ತು ಮೌಕಿಕ ಸಂಪ್ರದಾಯಗಳನ್ನು ಒಳಗೊಂಡಿರುವ ಜಾನಪದ ಕಲೆ ತಲೆಮಾರಿನಿಂದ ತಲೆಮಾರಿಗೆ ತಲುಪಿಸಬೇಕಾಗಿದೆ ಎಂದು ಬೆಂಗಳೂರಿನ ಕರ್ನಾಟಕ ರಾಜ್ಯ ಸಹಕಾರ ತೋಟಗಾರಿಕಾ ಮಹಾಮಂಡಳದ ಅಧ್ಯಕ್ಷ ಡಾ.ಬಿ.ಡಿ.ಭೂಕಾಂತ್ ತಿಳಿಸಿದರು.
ಕನ್ನಡಪ್ರಭ ವಾರ್ತೆ ಶಿಕಾರಿಪುರ
ಜಾನಪದ ಕಲೆಯು ಈ ನೆಲದ ಮಣ್ಣಿನ ತಾಯಿಬೇರಾಗಿದ್ದು, ನಿರ್ದಿಷ್ಟ ಸಮುದಾಯದ ಸಂಪ್ರದಾಯ, ಸಂಸ್ಕೃತಿ, ನಂಬಿಕೆಗಳು ಮತ್ತು ಮೌಕಿಕ ಸಂಪ್ರದಾಯಗಳನ್ನು ಒಳಗೊಂಡಿರುವ ಜಾನಪದ ಕಲೆ ತಲೆಮಾರಿನಿಂದ ತಲೆಮಾರಿಗೆ ತಲುಪಿಸಬೇಕಾಗಿದೆ ಎಂದು ಬೆಂಗಳೂರಿನ ಕರ್ನಾಟಕ ರಾಜ್ಯ ಸಹಕಾರ ತೋಟಗಾರಿಕಾ ಮಹಾಮಂಡಳದ ಅಧ್ಯಕ್ಷ ಡಾ.ಬಿ.ಡಿ.ಭೂಕಾಂತ್ ತಿಳಿಸಿದರು.
ಪಟ್ಟಣದ ಶಾಂತಿನಗರದಲ್ಲಿನ ಕಂತೆ ಸಿದ್ದೇಶ್ವರ ಸಭಾಂಗಣದಲ್ಲಿ ನಡೆದ ಕರ್ನಾಟಕ ರಾಜ್ಯ ಜಾನಪದ ಕಲಾವಿದರ ಸಹಕಾರ ಸಂಘದ 5ನೇ ವರ್ಷದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಮಾತನಾಡಿದರು.
ಜಾನಪದ ಕಲೆಗಳು ಈ ನಾಡಿನ ನೆಲದ ಮಣ್ಣಿನ ತಾಯಿಬೇರುಗಳಾಗಿದ್ದು,ಹಾಡು,ಕುಣಿತ,ಕಥೆಗಳು,ಸಂಗೀತ, ನಾಟಕ, ಶೋಭಾನೆ ಪದಗಳು,ಡೊಳ್ಳು,ಭಜನೆ,ವೀರಗಾಸೆ, ನೃತ್ಯ ಸಹಿತ ವಿವಿಧ ಪ್ರಕಾರ ಹೊಂದಿರುವ ಜಾನಪದ ಕಲೆಗಳು ಪೀಳಿಗೆಯಿಂದ ಪೀಳಿಗೆಗೆ, ಬಾಯಿಂದ ಬಾಯಿ ಮೂಲಕ ಪ್ರತಿಯೊಬ್ಬರನ್ನು ತಲುಪುತ್ತಿದೆ ಎಂದ ಅವರು ಇತ್ತೀಚಿನ ವರ್ಷದಲ್ಲಿ ಜಾನಪದ ಕಲೆಗಳು ನಶಿಸುವ ಹಂತ ತಲುಪಿದ್ದು ಇದರಿಂದ ಈ ನೆಲದ ಸಂಸ್ಕೃತಿ ಕಣ್ಮರೆಯಾಗುವ ಅಪಾಯವಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಈ ದಿಸೆಯಲ್ಲಿ ಜಾನಪದ ಕಲೆಗಳನ್ನು ಉಳಿಸಿ ಬೆಳೆಸಲು ಕಲಾವಿದರನ್ನು ಗುರುತಿಸಿ ಪ್ರೋತ್ಸಾಹಿಸುವುದು ತುರ್ತು ಅಗತ್ಯವಾಗಿದ್ದು ಆ ಮೂಲಕ ಮುಂದಿನ ಪೀಳಿಗೆಗೆ ತಲುಪಿಸಬೇಕಾಗಿದೆ ಎಂದು ಅಭಿಪ್ರಾಯಪಟ್ಟ ಅವರು ಜಾನಪದ ಕಲಾವಿದರ ಸಂಘ ಶಿಕಾರಿಪುರದಲ್ಲಿ ಅಸ್ಥಿತ್ವಗಳಿಸಿ ಕಲಾವಿದರನ್ನು ಒಗ್ಗೂಡಿಸುವ ಮಹತ್ಕಾರ್ಯ ಹೆಮ್ಮೆಯ ಸಂಗತಿಯಾಗಿದೆ ಎಂದು ತಿಳಿಸಿದರು.
ಸಂಘದ ವತಿಯಿಂದ ಪ್ರತಿ ಶನಿವಾರ, ಭಾನುವಾರ ಶ್ರೀ ಕಂತೆ ಸಿದ್ದೇಶ್ವರ ಸಭಾಂಗಣ ಶಾಂತಿನಗರದಲ್ಲಿ ಭರತನಾಟ್ಯ ತರಬೇತಿಯನ್ನು ನೀಡಲಾಗುವುದು ಎಂದು ಉಪಾಧ್ಯಕ್ಷ ಪರಶುರಾಮ್ ಚೌಟಗಿ ತಿಳಿಸಿದರು.
ಡಿಸಿಸಿ ಬ್ಯಾಂಕ್ ನಿರ್ದೇಶಕ ಡಿ.ಎಲ್ ಬಸವರಾಜ್, ಸಂಘದ ಅಧ್ಯಕ್ಷ ಜಿ.ಎಂ.ನಾಗರಾಜ್, ಸಂಘದ ನಿರ್ದೇಶಕರು, ಪ್ರಭಾರ ಕಾರ್ಯದರ್ಶಿ ಯಶೋಧ ದೇವೇಂದ್ರಪ್ಪ ಮತ್ತಿತರರು ಹಾಕರಿದ್ದರು. ಕಳೆದ ವರ್ಷದ ಮಹಾಸಭೆಯ ನಡಾವಳಿಯನ್ನು ಮಲ್ಲಿಕಾರ್ಜುನಚಾರ್ ವಾಚಿಸಿದರು.
ಲಕ್ಷ್ಮಿ ಪಳನಿ ಕುಮಾರ್ ವಾರ್ಷಿಕ ವರದಿಯನ್ನು ಪರಿಶೀಲಿಸಿ ಅಂಗೀಕರಿಸಿದರು. ವಾರ್ಷಿಕ ಬಜೆಟ್ ಅನುಮೋದನೆಯನ್ನು ಎನ್.ಬಿ.ವೀರನಗೌಡ ಮಂಡಿಸಿದರು.
ಲಕ್ಷ್ಮಿ ಪಳನಿ ಕುಮಾರ್ ಹಾಗೂ ಪ್ರಭಾ ವೆಂಕಟೇಶ್ ಪ್ರಾರ್ಥಿಸಿ, ಧನಂಜಯ ಸ್ವಾಗತಿಸಿ, ವೀರನಗೌಡ ನಿರೂಪಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.