ನರೇಗಲ್ಲ: ವಾಹನ ಸವಾರರು ಸಾರಿಗೆ ನಿಯಮಗಳನ್ನು ಪಾಲಿಸಬೇಕು. ಅಪಘಾತಗಳಿಂದ, ಜೀವ ಹಾನಿಯಾಗುವುದರಿಂದ ಸುರಕ್ಷಿತವಾಗಿರಬಹುದು ಎಂದು ರೋಣ ಶಾಸಕ, ಕರ್ನಾಟಕ ರಾಜ್ಯ ಮಿನರಲ್ಸ್ ಕಾರ್ಪೊರೇಷನ್ ಲಿಮಿಟೆಡ್ ಅಧ್ಯಕ್ಷ ಜಿ.ಎಸ್. ಪಾಟೀಲ ಹೇಳಿದರು.
ವಾಹನ ಸವಾರರು ಪಟ್ಟಣದಲ್ಲಿ ಬೇಕಾಬಿಟ್ಟಿಯಾಗಿ ಓಡಾಡಬಾರದು. ದ್ವಿ-ಚಕ್ರ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು. ಕಾರು ಚಾಲಕರು ಸೀಟ್ ಬೆಲ್ಟ್ಗಳನ್ನು ಹಾಕಿಕೊಂಡು ಓಡಾಡಬೇಕು. ಇದರಿಂದ ನಿಮ್ಮ ಕುಟುಂಬದವರು ನೆಮ್ಮದಿಯಿಂದ ಇರಲು ಸಹಾಯಕವಾಗುತ್ತದೆ ಎಂದು ಹೇಳಿದರು.
ಜಿಲ್ಲಾ ಪೊಲೀಸ್ ಅಧೀಕ್ಷಕ ಬಿ.ಎಸ್. ನೇಮಗೌಡ ಮಾತನಾಡಿ, ಸುಮ್ಮನೆ ಯಾರನ್ನೂ ಶಿಕ್ಷಿಸಲು ಈ ಕ್ಯಾಮೆರಾವನ್ನು ಅಳವಡಿಸಿಲ್ಲ. ವಾಹನವೆಂದ ಮೇಲೆ ಅಪಘಾತಗಳು ಸರ್ವೇ ಸಾಮಾನ್ಯ. ಈ ಅಪಘಾತಗಳು ಹೇಗಾಯಿತು? ಯಾರು ಮಾಡಿದರು? ಎಂಬುದನ್ನು ತಿಳಿಯುವುದಕ್ಕಾಗಿ, ಅಪರಾಧಿಗಳನ್ನು ಪತ್ತೆ ಹಚ್ಚುವುದಕ್ಕಾಗಿ ಕ್ಯಾಮೆರಾವನ್ನು ಅಳವಡಿಸಲಾಗಿದೆ. ಇದಕ್ಕಾಗಿ ಯಾರೂ ಭಯ ಪಡಬೇಕಿಲ್ಲ. ಹಾಗೆಂದು ವಾಹನ ಸವಾರರು ಹೆಲ್ಮೆಟ್ ಇಲ್ಲದೆ ಓಡಾಡಿದರೆ, ಸೀಟ್ ಬೆಲ್ಟ್ ಇಲ್ಲದೆ ಕಾರು ಚಾಲನೆ ಮಾಡಿದರೆ ದಂಡ ಕಟ್ಟಿಟ್ಟ ಬುತ್ತಿ. ನಿಮ್ಮ ಅನುಕೂಲಕ್ಕಾಗಿ ಸಾರಿಗೆ ಇಲಾಖೆ ಮತ್ತು ಪೊಲೀಸ್ ಇಲಾಖೆಗಳು ಜಂಟಿಯಾಗಿ ಮಾಡಿರುವ ಈ ಹೊಸ ವ್ಯವಸ್ಥೆಗೆ ನೀವೆಲ್ಲರೂ ಹೊಂದಿಕೊಳ್ಳಲೇಬೇಕೆಂದು ತಿಳಿಸಿದರು.ಶಂಕರಗೌಡ ಪಾಟೀಲ, ಅಂದಾನಗೌಡ ಮಲ್ಲನಗೌಡ್ರ, ಶಹರ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಶಿವನಗೌಡ ಪಾಟೀಲ, ನಿಂಗನಗೌಡ ಲಕ್ಕನಗೌಡ್ರ, ಬಾಳಪ್ಪ ಸೋಮಗೊಂಡ, ಕಳಕನಗೌಡ ಪಾಟೀಲ, ನಿವೃತ್ತ ಶಿಕ್ಷಕ ಎ.ಎ. ನವಲಗುಂದ, ಅಲ್ಲಾಭಕ್ಷಿ ನದಾಫ್, ಶೇಕಪ್ಪ ಕೆಂಗಾರ, ಶೇಕಪ್ಪ ಜುಟ್ಲ, ನಿವೃತ್ತ ಶಿಕ್ಷಕ ಎಂ.ಎಸ್. ದಢೇಸೂರಮಠ ಹಾಗೂ ನಾಗರಿಕರು, ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಇದ್ದರು.