ಗದಗ: ದೇಶದ ಅಭಿವೃದ್ಧಿಗೆ ಪೂರಕವಾದ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಾಸದಲ್ಲಿ ಶಾಲೆ, ಕಾಲೇಜು ಹಾಗೂ ಶಿಕ್ಷಕರ ಕಾರ್ಯ ಶ್ಲಾಘನೀಯ. ವಿದ್ಯಾರ್ಥಿಗಳು ಇಂದಿನ ಸಮಾಜದ ವಾಸ್ತವ ಅರಿತುಕೊಂಡು ಶಿಕ್ಷಕರಿಂದ ವಿದ್ಯೆ ಪಡೆಯುವುದರ ಜತೆಗೆ ಶರಣರ ಆದರ್ಶ ಪಾಲಿಸುತ್ತಾ ಸಾತ್ವಿಕ ನಡೆ-ನುಡಿಗಳ ಮೌಲಿಕ ವ್ಯಕ್ತಿತ್ವ ಹೊಂದಬೇಕೆಂದು ಮಾಜಿ ಸಹಕಾರ ಮತ್ತು ಅರಣ್ಯ ಖಾತೆ ಸಚಿವ ಎಸ್.ಎಸ್. ಪಾಟೀಲ ಹೇಳಿದರು.
ವಿಪ ಸದಸ್ಯ ಎಸ್.ವಿ. ಸಂಕನೂರ ಮಾತನಾಡಿ, ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಶ್ಲಾಘಿಸುತ್ತಾ ವ್ಯಕ್ತಿತ್ವ ಸರ್ವತೋಮುಖ ಬೆಳವಣಿಗೆಗೆ ಪಠ್ಯೇತರ ಚಟುವಟಿಕೆಗಳು ವಿದ್ಯೆಯಷ್ಟೇ ಮಹತ್ವದ್ದಾಗಿವೆ ಹಾಗೂ ಕೌಶಲ್ಯಾಧಾರಿತ ಜ್ಞಾನದ ಮೂಲಕ ಪ್ರತಿಯೊಬ್ಬರು ಜೀವನದ ಗುರಿ ತಲುಪಬೇಕೆಂದರು.
ಈ ವೇಳೆ ಅಧ್ಯಕ್ಷತೆ ವಹಿಸಿದ ಜ. ತೋಂಟದಾರ್ಯ ವಿದ್ಯಾಪೀಠದ ಕಾಯದರ್ಶಿ ಎಸ್.ಎಸ್. ಪಟ್ಟಣಶೆಟ್ಟರ ಮಾತನಾಡಿದರು. ಸ್ಥಾನಿಕ ಆಡಳಿತ ಮಂಡಳಿ ಸದಸ್ಯ ಅಮರೇಶ ಅಂಗಡಿ, ಶೇಖಣ್ಣ ಕಳಸಾಪೂರಶೆಟ್ಟರ್, ಈಶಣ್ಣ ಮುನವಳ್ಳಿ, ಸಿದ್ಧಲಿಂಗಯ್ಯ ಹಿರೇಮಠ ಇದ್ದರು.ಪದ್ಮಾವತಿ ಮುಕ್ಕಣ್ಣವರ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಪ್ರಾ ಎಂ.ಎ. ಬುರಡಿ ಸ್ವಾಗತಿಸಿದರು. ಪ್ರೊ. ಕೆ.ವಿ.ಬಾಗಲಕೋಟಿ ನಿರೂಪಿಸಿದರು. ಪ್ರೊ. ಆನಂದ ದೇಸಾಯಿಪಟ್ಟಿ ವಂದಿಸಿದರು.