ಕನ್ನಡಪ್ರಭ ವಾರ್ತೆ ಮಂಡ್ಯ
ಅಶುಚಿತ್ವ, ತಾಜಾತನವಿಲ್ಲದ ಮಾಂಸ, ಹುಳುಗಳಿದ್ದ ಆಹಾರ ಪದಾರ್ಥಗಳು, ಕೃತಕ ಬಣ್ಣ, ಟೇಸ್ಟಿಂಗ್ ಪೌಡರ್, ನಿಷೇಧಿತ ಬಣ್ಣದ ಪುಡಿಗಳ ಬಳಕೆ, ಬೂಸ್ಟ್ ಹಿಡಿದ ಮಾಂಸ, ಫ್ರೀಜರ್ನಲ್ಲಿ ವಾರದಿಂದ ಇಟ್ಟಿರುವ ಕೋಳಿ ಮಾಂಸ, ಕುರಿ- ಮೇಕೆ ಕಾಲುಗಳು, ಮೀನುಗಳು, ಇಡ್ಲಿ ಬೇಯಿಸಲು ಪ್ಲಾಸ್ಟಿಕ್ ಬಳಕೆ, ಗುಣಮಟ್ಟವಿಲ್ಲದ ಆಹಾರ ವಿತರಣೆ ಮಾಡುತ್ತಿರುವುದು ದಾಳಿ ಸಮಯದಲ್ಲಿ ಕಂಡುಬಂದ ಹಿನ್ನೆಲೆಯಲ್ಲಿ ನಗರದ ಅಶೋಕನಗರದ ನ್ಯೂ ಗ್ರೀನ್ ಪ್ಯಾಲೇಸ್ ಹೋಟೆಲ್ ಬಂದ್ ಮಾಡಿಸಿದರು. ಸುಭಾಷ್ನಗರದಲ್ಲಿರುವ ಕರಾವಳಿ ಹೋಟೆಲ್ ಮತ್ತು ಪಟೇಲ್ ಹೋಟೆಲ್ಗಳಿಗೆ ೨೦೦೦ ರು.. ದಂಡ ವಿಧಿಸಿ ನೋಟಿಸ್ ನೀಡಿದರು.
ಯಾವುದೇ ಮುನ್ಸೂಚನೆ ನೀಡದೆ ಕರ್ನಾಟಕ ಆಹಾರ ಆಯೋಗದ ಅಧ್ಯಕ್ಷ ಡಾ.ಎಚ್.ಕೃಷ್ಣ ಅವರು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪ ನಿರ್ದೇಶಕ ಕೃಷ್ಣಕುಮಾರ್, ಆಹಾರ ಸುರಕ್ಷತಾ ಅಧಿಕಾರಿ ಡಾ.ಶಶಿ, ನಗರಸಭೆ ಆಯುಕ್ತೆ ಪಂಪಾಶ್ರೀ ಅವರೊಂದಿಗೆ ದಿಢೀರ್ ಭೇಟಿ, ಪರಿಶೀಲನೆ ನಡೆಸುವುದರೊಂದಿಗೆ ಎಂಎಸ್ಪಿಸಿ ಘಟಕದ ಸಿಬ್ಬಂದಿ ಹಾಗೂ ಹೋಟೆಲ್ ಮಾಲೀಕರಿಗೆ ಬಿಸಿ ಮುಟ್ಟಿಸಿದರು.ಕಳಪೆ ಗುಣಮಟ್ಟದ ಆಹಾರ ಪದಾರ್ಥಗಳು:
ಆಹಾರ ಸುರಕ್ಷತಾ ಅಧಿಕಾರಿಗಳು ಪ್ರತಿ ಮೂರು ತಿಂಗಳಿಗೊಮ್ಮೆ ಎಂಎಸ್ಪಿಸಿ ಘಟಕಗಳಿಗೆ ಭೇಟಿ ನೀಡಿ, ಆಹಾರ ಪದಾರ್ಥಗಳ ಗುಣಮಟ್ಟ ಪರಿಶೀಲನೆ ನಡೆಸಬೇಕಿತ್ತು. ಆದರೆ, ಕಳಪೆ ಗುಣಮಟ್ಟದ ಆಹಾರ ಪದಾರ್ಥಗಳು ಪೂರೈಕೆಯಾಗುತ್ತಿದ್ದರೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲದಿರುವ ಬಗ್ಗೆ ತರಾಟೆ ತೆಗೆದುಕೊಂಡರು. ಇನ್ನು ಮುಂದೆ ಪ್ರತಿ ಮೂರು ತಿಂಗಳಿಗೊಮ್ಮೆ ಆಹಾರ ಪದಾರ್ಥಗಳ ಗುಣಮಟ್ಟ ಪರಿಶೀಲನೆಯಾಗಲೇಬೇಕು. ಗುಣಮಟ್ಟದಿಂದ ಕೂಡಿದ ಆಹಾರ ಪದಾರ್ಥಗಳನ್ನು ಪೂರೈಸುವಂತೆ ಅಧಿಕಾರಿಗಳಿಗೆ ಸ್ಥಳದಲ್ಲೇ ಸೂಚನೆ ನೀಡಿದರು.
ನಂತರ ಸುಭಾಷ್ ನಗರದ ನಗರದ ನ್ಯೂ ಪಟೇಲ್ ಹೋಟೆಲ್, ಕರಾವಳಿ ಹೋಟೆಲ್ಗಳಿಗೆ ಭೇಟಿ ನೀಡಿದ ವೇಳೆ ಅಶುಚಿತ್ವ ತಾಂಡವವಾಡುತ್ತಿರುವುದು ಕಂಡುಬಂದಿತು. ಆಹಾರ ಪದಾರ್ಥಗಳಿಗೆ ಕೃತಕ ಬಣ್ಣ, ಟೇಸ್ಟಿಂಗ್ ಪೌಡರ್ ಬಳಸುತ್ತಿರುವುದು ಕಂಡುಬಂದಿತು. ಹೊಳಲು ವೃತ್ತದ ಗಾಯಿತ್ರಿ ಭವನ್ ಹೋಟೆಲ್ನಲ್ಲಿ ಬಳಸುವ ಆಹಾರ ಪದಾರ್ಥಗಳಲ್ಲಿ ಹುಳುಗಳು ಇರುವುದು ಕಂಡುಬಂದು ಎರಡು ಸಾವಿರ ರು. ದಂಡ ವಿಧಿಸಿದರು. ಅಲ್ಲಿಂದ ನ್ಯೂ ಗ್ರೀನ್ ಪ್ಯಾಲೇಸ್ ಡಾಬಾಗೆ ತೆರಳಿ ಅಲ್ಲಿನ ಅವ್ಯವಸ್ಥೆ ಕಂಡು ದಿಗ್ಭ್ರಾಂತರಾಗಿ ಎರಡು ಸಾವಿರ ರು. ದಂಡ ವಿಧಿಸಿ ಹೋಟೆಲ್ಗೆ ಬೀಗ ಹಾಕಿಸಿದರು.
ಪರವಾನಗಿ ನವೀಕರಿಸಿಲ್ಲ:
‘ಹೋಟೆಲ್ಗಳ ಮೇಲಿನ ದಿಢೀರ್ ದಾಳಿಗಳು ಇಲ್ಲಿಗೇ ನಿಲ್ಲುವುದಿಲ್ಲ. ಇನ್ಮುಂದೆ ದಾಳಿ ನಿರಂತರವಾಗಿರುತ್ತದೆ. ದುಡ್ಡು ಕೊಟ್ಟು ಊಟ ಮಾಡುವ ಗ್ರಾಹಕರಿಗೆ ಗುಣಮಟ್ಟದ ಆಹಾರ ನೀಡುವುದು ಹೋಟೆಲ್ ಮಾಲೀಕರ ಕರ್ತವ್ಯ. ಇದರ ಬಗ್ಗೆ ನಗರಸಭೆ ಹಾಗೂ ಆಹಾರ ಸುರಕ್ಷತಾ ಅಧಿಕಾರಿಗಳು ಆಗಾಗ ಭೇಟಿ ನೀಡಿ ಪರಿಶೀಲಿಸಬೇಕು. ಈಗ ಹೋಟೆಲ್ಗಳಿಗೆ ದಂಡ ಹಾಕಿ ನೋಟಿಸ್ ನೀಡಿ ಎಚ್ಚರಿಕೆ ನೀಡಿದ್ದೇವೆ. ಮತ್ತೆ ಅವ್ಯವಸ್ಥೆ, ಕಳಪೆ ಗುಣಮಟ್ಟದ ಆಹಾರ ಪೂರೈಸಿದರೆ ಬಂದ್ ಮಾಡಿಸುತ್ತೇನೆ.’