ಕೊಟ್ಟೂರು: ಪಟ್ಟಣದ ಹ್ಯಾಳ್ಯ ರಸ್ತೆಯಲ್ಲಿನ ಶ್ರೀ ಮಹದೇವ ಇಂಟರ್ ನ್ಯಾಷನಲ್ ಸ್ಕೂಲ್ ನವರು ಶನಿವಾರ ಏರ್ಪಡಿಸಿದ್ದ ಆಹಾರ ಪರ್ವ ಜನಾಕರ್ಷಣೆ ಪಡೆಯುವಲ್ಲಿ ಯಶಸ್ವಿಯಾಗಿತು.
ಆಹಾರ ಪರ್ವ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಸಮಾಜ ಸೇವಕಿಯಾರಾದ ವಾಣಿ ನೇಮರಾಜ ನಾಯ್ಕ್, ಗೀತಾ ಹರ್ಷವರ್ಧನ್, ಗಿರಿಜಾ ಮಂಜುನಾಥ, ಗಾಯತ್ರಿ ಅಶೋಕ ಅವರನ್ನು ಅದ್ಧೂರಿಯಾಗಿ ಸಾಂಪ್ರದಾಯಿಕ ಗ್ರಾಮೀಣ ಸೊಗಡಿನ ಸ್ವಾಗತದೊಂದಿಗೆ ಶಾಲೆಯವರು ಬರಮಾಡಿಕೊಂಡರು.
ಸ್ಕೂಲಿನ ಒಳಾವರಣದಲ್ಲಿ ಗ್ಯಾಸ್ ಒಲೆಯಲ್ಲಿ ತಯಾರು ಮಾಡಿದ ಆಹಾರ ಪದಾರ್ಥಗಳ ಪ್ರದರ್ಶನ ಇದ್ದರೆ ಹೊರ ಆವರಣದಲ್ಲಿ ಪಾಕ ದರ್ಪಣ, ಸಂಸ್ಕೃತಿ ಕುಟೀರ, ತೋಟದ ಮನೆ, ಆರೋಗ್ಯ ಬೋಗಿ, ಹಳ್ಳಿ ಮನೆ, ಮೂಡಲ ಮನೆ, ಸವಿರುಚಿ ಕುಟೀರ ಮತ್ತಿತರ ಮಳಿಗೆಗಳಲ್ಲಿ ಹಳೆಯ ಕಾಲದ ಕಟ್ಟಿಗಿಗಳ ಒಲೆಗಳಲ್ಲಿ ಬಿಸಿ ಬಿಸಿಯಾಗಿ ತಯಾರು ಮಾಡಿದ ಜೋಳದ ರೊಟ್ಟಿ, ಪಲ್ಯಗಳು, ಉದ್ದು, ರಾಗಿ, ಸಜ್ಜೆ, ಮೆತ್ತೆ, ಕಡ್ಲಿಹಿಟ್ಟು, ಶೇಂಗಾ ಪುಡಿ, ಅಗಸೆ ಪುಡಿ, ಮಸಾಲ ಮಜ್ಜಿಗೆ ಮತ್ತಿತರ ಆಹಾರ ಪದಾರ್ಥಗಳನ್ನು ಪ್ರದರ್ಶಿಸಲಾಯಿತು.ಡಾ.ಅನುಪಮಾ, ಸವಿತಾ ಪಾಟೀಲ್, ಸವಿತಾ ಬಸವರಾಜ್, ಪ್ರೀತಿ ವೀರೇಶ್, ನೇತ್ರಾವತಿ, ಟಿ. ಮಮತಾ ತಯಾರಿಸಿದ ದೇಶೀಯ ಆಹಾರ ಪದಾರ್ಥಗಳು ಭೇಟಿ ನೀಡಿದ ಪ್ರತಿಯೊಬ್ಬರ ನಾಲಿಗೆ ರುಚಿ ಹೆಚ್ಚಿಸಿ ಮೆಚ್ಚುವಂತೆ ಮಾಡಿತು. ಒಟ್ಟಾರೆಯಾಗಿ ಪ್ರಥಮ ಬಾರಿಗೆ ಆಯೋಜಿಸಿದ್ದ ಆಹಾರ ಪರ್ವ ಪ್ರತಿವರ್ಷ ಆಯೋಜಿಸುವಂತೆ ಪ್ರೇರೇಪಣೆ ನೀಡಿತು.
ಕಾರ್ಯಕ್ರಮದ ನಂತರ ರೈತರಾದ ಎನ್. ಭರಮ್ಮಣ್ಣ, ಶ್ರೀಧರ ಒಡೆಯರ್, ಪರಶಪ್ಪ ಕೋಡಿಹಳ್ಳಿ, ಶಂಕರ ದೇಶಮುಖ್, ಅತಿಥಿಗಳಾದ ವಾಣಿ ನೇಮರಾಜ್ ನಾಯ್ಕ್, ಗೀತಾ ಹರ್ಷವರ್ಧನ್, ಗಿರಿಜಾ ಮಂಜುನಾಥ ಗಾಯತ್ರಿ ಅಶೋಕ ಅವರನ್ನು ಸನ್ಮಾನಿಸಲಾಯಿತು.