ಮಲೆ ಮಹದೇಶ್ವರ ಪಾದಯಾತ್ರಿಗಳಿಗೆ ಅನ್ನದಾಸೋಹ

KannadaprabhaNewsNetwork |  
Published : Feb 12, 2026, 01:30 AM IST
ಕೆ ಕೆ ಪಿ ಸುದ್ದಿ 01: | Kannada Prabha

ಸಾರಾಂಶ

ಪ್ರತಿ ವರ್ಷದಂತೆ ಈ ಬಾರಿಯೂ ನಾವು ಸುಮಾರು ಐವತ್ತು ಸಾವಿರ ಭಕ್ತ ಮಹಾಶಯರಿಗೆ ಅನ್ನದಾನ ಹಮ್ಮಿಕೊಂಡಿದ್ದು, ಜೊತೆಗೆ ಕಳೆದ ಎರಡು ವರ್ಷಗಳ ಹಿಂದೆ ನಡೆದ ಕಹಿ ಘಟನೆ ಮರುಕಳಿಸದಂತೆ ಉಪಮುಖ್ಯಮಂತ್ರಿ ಡಿ. ಕೆ.ಶಿವಕುಮಾರ್ ರವರು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಭಕ್ತಾದಿಗಳ ಸುರಕ್ಷತೆಗೆ ಒತ್ತು ಕೊಡುವಂತೆ ಮನವಿ ಮಾಡಿದ್ದಾರೆ.

ಕನ್ನಡಪ್ರಭ ವಾರ್ತೆ ಕನಕಪುರ

ಮಹಾ ಶಿವರಾತ್ರಿ ಪ್ರಯುಕ್ತ ನಾಡಿನ ಪುರಾಣ ಪ್ರಸಿದ್ಧ ಮಲೆ ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆಯಲ್ಲಿ ಹೊರಟಿರುವ ಸಾವಿರಾರು ಭಕ್ತಾದಿಗಳಿಗೆ ತಾಲೂಕಿನ ಮಲೆ ಮಹದೇಶ್ವರ ಬಳಗದ ವತಿಯಿಂದ ಪ್ರತಿವರ್ಷದಂತೆ ಅನ್ನದಾನ ಏರ್ಪಡಿಸಲಾಗಿತ್ತು.

ತಾಲೂಕಿನ ಏಳಗಳ್ಳಿ ಮುದ್ದಮ್ಮ ತಾಯಿ ದೇವಾಲಯದಿಂದ ಸಂಗಮ ಬಳಿ ಕಾವೇರಿ ನದಿಯನ್ನು ದಾಟಿ ಸಾಗುವ ಪಾದಯಾತ್ರಿಗಳಿಗೆ ಬೊಮ್ಮಸಂದ್ರ ಬಳಿಯ ಕಾವೇರಿ ನದಿ ತೀರದಲ್ಲಿ ಏರ್ಪಡಿಸಿದ್ದ ಈ ಅನ್ನ ದಾಸೋಹ ಕಾರ್ಯಕ್ರಮಕ್ಕೆ ಆದಿ ಚುಂಚನಗಿರಿ ಶಾಖಾ ಮಠದ ಶ್ರೀ ಅನ್ನದಾನೇಶ್ವರ ಸ್ವಾಮೀಜಿ ಚಾಲನೆ ನೀಡಿ ಶುಭ ಹಾರೈಸಿದರು.

ಭಕ್ತರು ತಮ್ಮ ಹರಕೆ ತೀರಿಸಲು ಅನಾದಿಕಾಲದಿಂದ ಈ ಮಾರ್ಗದಲ್ಲಿ ಪಾದಯಾತ್ರೆ ಮೂಲಕ ಮಹದೇಶ್ವರ ಬೆಟ್ಟಕ್ಕೆ ತಲುಪುವ ಪ್ರತೀತಿಯಿದ್ದು, ರಾಜ್ಯ ಸರ್ಕಾರ ಭಕ್ತಾದಿಗಳ ಅನುಕೂಲ ಹಾಗೂ ಸುರಕ್ಷತೆಗಾಗಿ ಹಲವು ಮುಂಜಾಗೃತಾ ಕ್ರಮ ಗಳನ್ನು ತೆಗೆದುಕೊಳ್ಳುವುದರ ಜೊತೆಗೆ ಸಮಾಜ ಸೇವಕರು ಪಾದಯಾತ್ರೆಯಲ್ಲಿ ಬರುವಂಥ ಭಕ್ತಾದಿಗಳಿಗೆ ಹಸಿವು, ಬಾಯಾರಿಕೆ ನೀಗಿಸುವಂತಹ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಕಾರ್ಯ. ಮಲೆ ಮಹದೇಶ್ವರ ಅವರೆಲ್ಲರಿಗೂ ಒಳಿತು ಮಾಡಲಿ ಎಂದು ಹಾರೈಸಿದರು.

ಸಮಾಜ ಸೇವಕ ಹೆಗ್ಗನೂರು ಜಗದೀಶ್ ಮಾತನಾಡಿ, ನಮ್ಮ ಬಳಗದಿಂದ ಸುಮಾರು ಇಪ್ಪತ್ತು ವರ್ಷಗಳಿಂದ ಈ ಕಾರ್ಯವನ್ನು ನಮ್ಮ ಜನಪ್ರಿಯ ನಾಯಕ ಡಿ.ಕೆ. ಶಿವಕುಮಾರ್, ಡಿ.ಕೆ. ಸುರೇಶ್ ರವರ ಮಾರ್ಗದರ್ಶನದಲ್ಲಿ ಮಾಡಿಕೊಂಡು ಬರುತ್ತಿದ್ದು, ರಾಜ್ಯದ ನಾನಾ ಭಾಗಗಳಿಂದ ಮಹದೇಶ್ವರ ಸ್ವಾಮಿಯ ಭಕ್ತಾದಿಗಳು ಈ ಮಾರ್ಗದಲ್ಲಿ ಪಾದಯಾತ್ರೆ ಕೈಗೊಳ್ಳುವ ಸಮಯದಲ್ಲಿ ಅವರಿಗೆ ಯಾವುದೇ ತೊಂದರೆ ಆಗದಂತೆ ಊಟ, ನೀರು, ಮಜ್ಜಿಗೆ ಜೊತೆಗೆ ಕೆಲ ನೋವು ನಿವಾರಕ ಮಾತ್ರೆಗಳನ್ನು ಸಹ ನೀಡಲಾಗುತ್ತಿದೆ, ರಾತ್ರಿ ಕೊಳತ್ತೂರು ಮಹದೇವ ಸ್ವಾಮಿ ತಂಡದವರಿಂದ ಹರಿ ಕಥೆಯನ್ನು ಆಯೋಜಿಸಿದ್ದು ನಮ್ಮೆಲ್ಲಾ ಸ್ನೇಹಿತರ ಸಹಕಾರದಿಂದ ಈ ಕಾರ್ಯವನ್ನು ನಡೆಸಿಕೊಂಡು ಬರುತ್ತಿರುವುದಾಗಿ ತಿಳಿಸಿದರು.

ಮುಖಂಡ ಏಳಗಳ್ಳಿ ರವಿ ಮಾತನಾಡಿ, ಪ್ರತಿ ವರ್ಷದಂತೆ ಈ ಬಾರಿಯೂ ನಾವು ಸುಮಾರು ಐವತ್ತು ಸಾವಿರ ಭಕ್ತ ಮಹಾಶಯರಿಗೆ ಅನ್ನದಾನ ಹಮ್ಮಿಕೊಂಡಿದ್ದು, ಜೊತೆಗೆ ಕಳೆದ ಎರಡು ವರ್ಷಗಳ ಹಿಂದೆ ನಡೆದ ಕಹಿ ಘಟನೆ ಮರುಕಳಿಸದಂತೆ ಉಪಮುಖ್ಯಮಂತ್ರಿ ಡಿ. ಕೆ.ಶಿವಕುಮಾರ್ ರವರು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಭಕ್ತಾದಿಗಳ ಸುರಕ್ಷತೆಗೆ ಒತ್ತು ಕೊಡುವಂತೆ ಮನವಿ ಮಾಡಿದ್ದಾರೆ. ಜಿಲ್ಲಾಡಳಿತ ಕೂಡ ಸಕಲ ಸಿದ್ಧತೆ ಮಾಡಿಕೊಂಡಿದ್ದು, ಯಾರಿಗಾದರೂ ತೊಂದರೆ ಆದರೆ ಈ ಬಾರಿ ತುರ್ತು ಕ್ಷಣದಲ್ಲಿ ಏರ್ ಲಿಪ್ಟ್ ಮೂಲಕ ಅವರನ್ನು ಆಸ್ಪತ್ರೆಗೆ ರವಾನಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.

ತಾಲೂಕಿನ ಕೆಲ ಭಕ್ತಾದಿಗಳು ಡಿ.ಕೆ. ಶಿವಕುಮಾರ್ ರವರು ಮುಖ್ಯಮಂತ್ರಿಯಾಗಲಿ ಎಂದು ಕೈಯಲ್ಲಿ ಡಿಕೆಶಿ ಭಾವಚಿತ್ರ ಹಿಡಿದು ಪಾದಯಾತ್ರೆ ಮಾಡಿದ್ದು ವಿಶೇಷವಾಗಿತ್ತು. ಸಮಾಜ ಸೇವಕರಾದ ಮಹದೇವ್ ನಾಯಕ್, ಜೋಗ ಮಾನಹೊಸಹಳ್ಳಿ ಪ್ರತಾಪ್, ಕುರು ಪೇಟೆ ಮಂಜು, ಸಾತನೂರು ನಾಗರಾಜು, ಮುತ್ತುರಾಜ್, ಕುಮಾರ್

ಸೇರಿದಂತೆ ಹಲವರು ಈ ವೇಳೆ ಉಪಸ್ಥಿತರಿದ್ದರು.

---------

ಕೆ ಕೆ ಪಿ ಸುದ್ದಿ 01(1) : ಮಲೆ ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ಕೈಗೊಂಡರುವ

ಭಕ್ತಾದಿಗಳಿಗೆ ಅನ್ನದಾನ ಹಮ್ಮಿಕೊಂಡಿರುವುದು.

ಕೆ ಕೆ ಪಿ ಸುದ್ದಿ 1(2) : ನದಿ ತೀರದಲ್ಲಿ ವಿಶ್ರಾಂತಿ ಪಡೆಯುತ್ತಿರುವ ಭಕ್ತಾದಿಗಳು.

ಕೆ ಕೆ ಪಿ ಸುದ್ದಿ 01(3) : ಡಿಕೆಶಿ ಮುಖ್ಯಮಂತ್ರಿಯಾಗಲೆಂದು ಭಾವಚಿತ್ರ ಹಿಡಿದು ಪಾದಯಾತ್ರೆ ಕೈಗೊಂಡಿರುವ ಭಕ್ತರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕುಡಿಯುವ ನೀರಿಗೆ ತೊಂದರೆಯಾಗದಂತೆ ಕ್ರಮ ವಹಿಸಿ: ಚಲುವರಾಯಸ್ವಾಮಿ
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಿದ್ದೇವೆ