ಉಮ್ಮಚಗಿ ಶಾಲೆಯಲ್ಲಿ ಕುಡಿಯುವ ನೀರಿನ ಘಟಕ ಉದ್ಘಾಟನೆ
ಸಮಾಜದಲ್ಲಿ ದಾನ, ಸಹಾಯ ಮಾಡಿದ ವ್ಯಕ್ತಿ ಮತ್ತು ಫಲಾನುಭವಿಗಳಿಗೆ ಆನಂದ ಉಂಟಾಗುತ್ತದೆ. ಉಳ್ಳವರು ನೀಡುವುದರಿಂದ ಶ್ರೇಷ್ಠ ಸಮಾಜ ಮತ್ತು ಉತ್ತಮ ಸೌಕರ್ಯಗಳನ್ನು ಸೃಷ್ಟಿಸಿಕೊಡಲು ಸಾಧ್ಯ. ಅನ್ನ, ಆಶ್ರಯ, ಅಕ್ಷರ ಇವು ಜಗತ್ತಿನ ಅತ್ಯಂತ ಶ್ರೇಷ್ಠದಾನವಾಗಿದೆ. ಶಾಲೆಗೆ ನೀಡಿದ ಸಹಾಯ ತಮಗೆ ಸಂತೋಷ ನೀಡುತ್ತದೆ ಎಂದು ಅನಂತಮೂರ್ತಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಅನಂತಮೂರ್ತಿ ಹೆಗಡೆ ಹೇಳಿದರು.
ಸ.ಹಿ.ಪ್ರಾ. ಶಾಲೆ ಉಮ್ಮಚಗಿಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕದ ಉದ್ಘಾಟನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಎಸ್ಡಿಎಂಸಿ ಪರವಾಗಿ ಶ್ರೀಯುತರನ್ನು ಸನ್ಮಾನಿಸಲಾಯಿತು.ಮುಖ್ಯ ಅತಿಥಿಗಳಾಗಿದ್ದ ಕುಂದರಗಿ ಗ್ರಾಪಂ ಸದಸ್ಯ ಗಣೇಶ ಹೆಗಡೆ ಧಾತ್ರಿ ಫೌಂಡೇಶನ್ನಿಂದ ಪಡೆದ ನೋಟ್ ಪುಸ್ತಕ ವಿತರಿಸಿ ಮಾತನಾಡಿ, ಪಾಲಕರು ಸರ್ಕಾರಿ ಶಾಲೆಗೆ ಶಿಕ್ಷಣಕ್ಕಾಗಿ ತಮ್ಮ ಮಕ್ಕಳನ್ನು ಸೇರಿಸಬೇಕು. ಸರ್ಕಾರಿ ಶಾಲೆಯನ್ನು ತಮ್ಮ ಜವಾಬ್ದಾರಿ ಎಂದು ತಿಳಿದು ಶಾಲೆಯ ಬಲವರ್ಧನೆಗೆ ಸಹಕರಿಸಬೇಕು ಎಂದರು.
ಸಾನಿಧ್ಯ ಪ್ರಾರ್ಥನಾ ನೃತ್ಯ ನೆರವೇರಿಸಿದಳು. ಮುಖ್ಯಾಧ್ಯಾಪಕಿ ಚಿತ್ರಾ ನೇರಳಕಟ್ಟೆ ಸ್ವಾಗತಿಸಿದರು. ಜ್ಯೋತಿ ಎಂ.ಡಿ. ನಿರ್ವಹಿಸಿದರು. ಸಿ.ಆರ್.ಪಿ. ವಿಷ್ಣು ಭಟ್ಟ ವಂದಿಸಿದರು.