ಮೋದಿಗೆ ನಾಯ್ಡು, ನಿತೀಶ್ ಶನಿಯಂತೆ ಕಾಡೋದು ನಿಶ್ಚಿತ

KannadaprabhaNewsNetwork | Published : Jun 19, 2024 1:01 AM

ಸಾರಾಂಶ

ಲೋಕಸಭೆ ಚುನಾವಣೆಯಲ್ಲಿ 10-15 ಸೀಟು ಕಡಿಮೆ ಬಂದಿದ್ದರೂ ನರೇಂದ್ರ ಮೋದಿ ಮತ್ತೆ ಪ್ರಧಾನಿ ಆಗುತ್ತಿರಲಿಲ್ಲ. ಅವರಿಗೆ ಅದೃಷ್ಟವಿದ್ದು, ಮತ್ತೆ ಪ್ರಧಾನಿ ಆಗಿದ್ದಾರೆ. ಆದರೂ, ನಿತೀಶ್ ಕುಮಾರ ಹಾಗೂ ಚಂದ್ರಬಾಬು ನಾಯ್ಡು ಶನಿ ಕಾಡಿದಂತೆ ಕಾಡುವುದು ಸಹ ನಿಲ್ಲುವುದಿಲ್ಲ. ಈ ಇಬ್ಬರನ್ನೂ ಸಮಾಧಾನಪಡಿಸುವಷ್ಟರಲ್ಲೇ ಮೋದಿಗೆ ಸಾಕಾಗಿಹೋಗುತ್ತದೆ ಎಂದು ಶಾಸಕ, ಅಭಾವೀಮ ರಾಷ್ಟ್ರೀಯ ಅಧ್ಯಕ್ಷ ಡಾ.ಶಾಮನೂರು ಶಿವಶಂಕರಪ್ಪ ದಾವಣಗೆರೆಯಲ್ಲಿ ಹೇಳಿದ್ದಾರೆ.

- ಸಂಸದೆ ಡಾ.ಪ್ರಭಾ ಸನ್ಮಾನ ಕಾರ್ಯಕ್ರಮದಲ್ಲಿ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಹೇಳಿಕೆ

- - -

ಕನ್ನಡಪ್ರಭ ವಾರ್ತೆ, ದಾವಣಗೆರೆ

ಲೋಕಸಭೆ ಚುನಾವಣೆಯಲ್ಲಿ 10-15 ಸೀಟು ಕಡಿಮೆ ಬಂದಿದ್ದರೂ ನರೇಂದ್ರ ಮೋದಿ ಮತ್ತೆ ಪ್ರಧಾನಿ ಆಗುತ್ತಿರಲಿಲ್ಲ. ಅವರಿಗೆ ಅದೃಷ್ಟವಿದ್ದು, ಮತ್ತೆ ಪ್ರಧಾನಿ ಆಗಿದ್ದಾರೆ. ಆದರೂ, ನಿತೀಶ್ ಕುಮಾರ ಹಾಗೂ ಚಂದ್ರಬಾಬು ನಾಯ್ಡು ಶನಿ ಕಾಡಿದಂತೆ ಕಾಡುವುದು ಸಹ ನಿಲ್ಲುವುದಿಲ್ಲ. ಈ ಇಬ್ಬರನ್ನೂ ಸಮಾಧಾನಪಡಿಸುವಷ್ಟರಲ್ಲೇ ಮೋದಿಗೆ ಸಾಕಾಗಿಹೋಗುತ್ತದೆ ಎಂದು ಶಾಸಕ, ಅಭಾವೀಮ ರಾಷ್ಟ್ರೀಯ ಅಧ್ಯಕ್ಷ ಡಾ.ಶಾಮನೂರು ಶಿವಶಂಕರಪ್ಪ ಹೇಳಿದರು.

ನಗರದ ಬಾಪೂಜಿ ಎಂಬಿಎ ಕಾಲೇಜು ಸಭಾಂಗಣದಲ್ಲಿ ಮಂಗಳವಾರ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾ ಘಟಕದಿಂದ ನೂತನ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಅವರಿಗೆ ಅಭಿನಂದನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ನಾಯ್ಡು, ನಿತೀಶ್ ಸುಮ್ಮನಿರುವವರಲ್ಲ. ತಮಗೆ ಲೋಕಸಭೆ ಸ್ಪೀಕರ್ ಸ್ಥಾನ ಕೊಡುವಂತೆ, ಒಳ್ಳೆಯ ಖಾತೆಗಳನ್ನು ಕೊಡಿ, ಹಣ ಬರುವಂತಹ ಖಾತೆಗಳನ್ನೇ ಕೊಡಿ ಅಂತೆಲ್ಲಾ ಇರುತ್ತದೆ. ಇತರೆ ಪಕ್ಷಗಳನ್ನು ಹೊಂದಿಸಿಕೊಂಡು ಮೋದಿ ಆಳ್ವಿಕೆ ನಡೆಸುವುದು ಕಷ್ಟವಾಗುತ್ತದೆ. ಒಂದೇ ಸಲ ನಿರೀಕ್ಷೆಯೂ ಸಲ್ಲದು. ಭಾರತವು ಇಂದು ಆರ್ಥಿಕವಾಗಿ ಅತ್ಯಂತ ಬಲಿಷ್ಠ ರಾಷ್ಟ್ರವಾಗಿದೆ. ಯಾವುದೇ ಶತೃರಾಷ್ಟ್ರವೂ ಭಾರತದ ಮೇಲೆ ದಾಳಿ ಮಾಡುವಂತಹ ದುಸ್ಸಾಹಸ ಮಾಡುವುದಿಲ್ಲ. ಅಷ್ಟರಮಟ್ಟಿಗೆ ಎಲ್ಲಾ ವಿಚಾರದಲ್ಲೂ ದೇಶ ಸದೃಢವಾಗಿದೆ ಎಂದರು.

ಅಭಾವೀಮ ರಾಷ್ಟ್ರೀಯ ಉಪಾಧ್ಯಕ್ಷ, ಹಿರಿಯ ಕೈಗಾರಿಕೋದ್ಯಮಿ ಅಥಣಿ ಎಸ್.ವೀರಣ್ಣ ಮಾತನಾಡಿ, ಈ ಹಿಂದೆ ತಾವು ವಿಪ ಚುನಾವಣೆಗೆ ನಿಂತಾಗ ಆದ ಅನುಭವಗಳಿಂದಾಗಿ ರಾಜಕೀಯ ಸಹವಾಸವೇ ಸಾಕೆಂದು ಕೈಮುಗಿದು ಬಿಟ್ಟೆ. ದಾವಣಗೆರೆ, ಚಿತ್ರದುರ್ಗ, ಕೋಲಾರ, ತುಮಕೂರು ಒಳಗೊಂಡ ವಿಪ ಚುನಾವಣೆ ಅದು. ನನ್ನ ವಿರುದ್ಧ ಬಿಜೆಪಿಯ ದಿವಂಗತ ಮಲ್ಲಿಕಾರ್ಜುನಯ್ಯ ಸ್ಪರ್ಧಿಸಿ ಗೆದ್ದಿದ್ದರು ಎಂದರು.

ಚುನಾವಣೆ ವೇಳೆ ಯಾರೋ ಪುಣ್ಯಾತ್ಮ ಉರ್ದುವಿನಲ್ಲೂ ಕರಪತ್ರ ಮಾಡಿಸುವಂತೆ ಹೇಳಿದ್ದ. ಅದರಂತೆ ಮಾಡಿಸಿದ್ದೆವು ಸಹ. ನಂತರ ವೇದಿಕೆ ಮೇಲೆ ಆ ವ್ಯಕ್ತಿಗೆ ಹೇಗಿದೆ ಕರಪತ್ರವೆಂದು ಕೇಳಿದರೆ ಬಹುತ್ ಅಚ್ಛಾ ಹೈ ಸಾಹೇಬ್ ಅಂದು ಇಳಿದುಹೋದ. ಪಕ್ಕದಲ್ಲಿದ್ದ ಮತ್ತೊಬ್ಬರಿಗೆ ಕೇಳಿದಾಗ ಆತನಿಗೆ ಉರ್ದು ಓದುವುದಕ್ಕೆ ಬರುವುದಿಲ್ಲ ಎಂದು ಹೇಳಿದಾಗ ನಾವು ಕಕ್ಕಾಬಿಕ್ಕಿ. ಇಂತಹ ಸಾಕಷ್ಟು ಅನುಭವಗಳು ರಾಜಕೀಯಿಂದ ದೂರವಿರಲು ನಿರ್ಧರಿಸಿದೆ. ವೀರಶೈವ ಲಿಂಗಾಯತರಿಗೆ ಇಡೀ ವಿಶ್ವವನ್ನೇ ‍ಆಳುವ ಶಕ್ತಿ ಇದೆ. ಆದರೆ, ಅವರಲ್ಲಿ ಒಗ್ಗಟ್ಟೆಂಬುದೇ ಇಲ್ಲವೆಂಬ ಮಾಜಿ ಸಿಎಂ ದಿವಂಗತ ರಾಮಕೃಷ್ಣ ಹೆಗಡೆ ಮಾತು ಅರ್ಥಪೂರ್ಣವಾಗಿವೆ ಎಂದು ಅಥಣಿ ವೀರಣ್ಣ ತಿಳಿಸಿದರು.

ನೂತನ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಅವರನ್ನು ಮಹಾಸಭಾ ವತಿಯಿಂದ ಸನ್ಮಾನಿಸಲಾಯಿತು. ರಾಷ್ಟ್ರೀಯ ಉಪಾಧ್ಯಕ್ಷ ಅಣಬೇರು ರಾಜಣ್ಣ, ಹಿರಿಯ ಜವಳಿ ವರ್ತಕ, ಬಿ.ಎಸ್. ಚನ್ನಬಸಪ್ಪ ಅಂಡ್‌ ಸನ್ಸ್ ಮಾಲೀಕರಾದ ಬಿ.ಸಿ.ಉಮಾಪತಿ ಇತರರು ಇದ್ದರು.

- - - -18ಕೆಡಿವಿಜಿ9:

ದಾವಣಗೆರೆಯಲ್ಲಿ ಅಭಾವೀಮ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ರಾಷ್ಟ್ರೀಯ ಅಧ್ಯಕ್ಷ, ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಅವರಿಗೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ, ಅಥಣಿ ವೀರಣ್ಣ, ಅಣಬೇರು ರಾಜಣ್ಣ, ಬಿ.ಸಿ.ಉಮಾಪತಿ ಇತರರು ಸನ್ಮಾನಿಸಿದರು.

Share this article