ರಾಜ್ಯದಲ್ಲಿ ಕ್ರಾಂತಿವೀರ ಬ್ರಿಗೇಡ್‌ ಅಸ್ತಿತ್ವಕ್ಕೆ

KannadaprabhaNewsNetwork |  
Published : Feb 05, 2025, 12:31 AM IST
ಬ್ರಿಗೇಡ್‌ | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ ಚಾಮರಾಜಪೇಟೆಯಲ್ಲಿ ಹಸುವಿನ ಕೆಚ್ಚಲು ಕತ್ತರಿಸಿದರು. ಗೋವು ಕಡಿದು ಮಾಂಸ ಮಾರಾಟ ಮಾಡುತ್ತಾರೆ. ಗೋಮಾತೆಗೆ ಆಗಿರುವ ಅನ್ಯಾಯವನ್ನು ನೋಡಿ ಸುಮ್ಮನೆ ಕುಳಿತುಕೊಂಡರೆ ನಾವು ಇದ್ದೂ ಸತ್ತಂತೆ. ಗೋವನ್ನು ಕಡಿದರೆ ನಾವು ಅವರ ಕೈಯನ್ನೇ ಕಡಿಯುವಂತಾಗಬೇಕು. ಈ ನಿಟ್ಟಿನಲ್ಲಿ ಹಿಂದೂಗಳೆಲ್ಲ ಜಾಗೃತರಾಗಬೇಕಿದೆ. ಗೋ ರಕ್ಷಣೆ ಮಾಡುವ ಜೊತೆಗೆ ಹಿಂದು ಯುವತಿಯರ ಮೇಲಿನ ಅತ್ಯಾಚಾರ ತಡಗಟ್ಟಬೇಕಿದೆ ಎಂದು ಕ್ರಾಂತಿವೀರ ಬ್ರಿಗೇಡ್‌ನ ಸಂಸ್ಥಾಪಕ ಹಾಗೂ ಮಾಜಿ ಡಿಸಿಎಂ ಕೆ.ಎಸ್‌.ಈಶ್ವರಪ್ಪ ಹೇಳಿದರು.

ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ

ಚಾಮರಾಜಪೇಟೆಯಲ್ಲಿ ಹಸುವಿನ ಕೆಚ್ಚಲು ಕತ್ತರಿಸಿದರು. ಗೋವು ಕಡಿದು ಮಾಂಸ ಮಾರಾಟ ಮಾಡುತ್ತಾರೆ. ಗೋಮಾತೆಗೆ ಆಗಿರುವ ಅನ್ಯಾಯವನ್ನು ನೋಡಿ ಸುಮ್ಮನೆ ಕುಳಿತುಕೊಂಡರೆ ನಾವು ಇದ್ದೂ ಸತ್ತಂತೆ. ಗೋವನ್ನು ಕಡಿದರೆ ನಾವು ಅವರ ಕೈಯನ್ನೇ ಕಡಿಯುವಂತಾಗಬೇಕು. ಈ ನಿಟ್ಟಿನಲ್ಲಿ ಹಿಂದೂಗಳೆಲ್ಲ ಜಾಗೃತರಾಗಬೇಕಿದೆ. ಗೋ ರಕ್ಷಣೆ ಮಾಡುವ ಜೊತೆಗೆ ಹಿಂದು ಯುವತಿಯರ ಮೇಲಿನ ಅತ್ಯಾಚಾರ ತಡಗಟ್ಟಬೇಕಿದೆ ಎಂದು ಕ್ರಾಂತಿವೀರ ಬ್ರಿಗೇಡ್‌ನ ಸಂಸ್ಥಾಪಕ ಹಾಗೂ ಮಾಜಿ ಡಿಸಿಎಂ ಕೆ.ಎಸ್‌.ಈಶ್ವರಪ್ಪ ಹೇಳಿದರು.

ಪಟ್ಟಣದ ಗುರುಕೃಪಾ ವಿದ್ಯಾ ಸಂಸ್ಥೆಯ ಆವರಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕ್ರಾಂತಿವೀರ ಬ್ರಿಗೇಡ್ ಕರ್ನಾಟಕ ಸಂಘಟನೆಗೆ ಚಾಲನೆ ನೀಡಿ ಅವರು ಮಾತನಾಡಿದರು. ನಾವು ಕ್ರಾಂತಿವೀರ ಬ್ರಿಗೇಡ್ ಆರಂಭಿಸುವ ಉದ್ದೇಶ ದೇಶ, ಹಿಂದು ಧರ್ಮ ಸಂರಕ್ಷಣೆ, ಗೋ ಮಾತೆ ಸಂರಕ್ಷಣೆ ಸಂಕಲ್ಪವಿದೆ. ೧೦೦೮ ಸಾಧು-ಸಂತರ ಪಾದಪೂಜೆ, ಗೋ ಮಾತೆ ಪೂಜೆಯೊಂದಿಗೆ ಉದ್ಘಾಟಿಸಲಾಗಿದೆ. ಈ ಕಾರ್ಯಕ್ರಮಕ್ಕೆ ಬರಲು ಯಾರಿಗೂ ಒಂದು ಪೈಸೆ ನೀಡಿಲ್ಲ. ಹಿಂದುತ್ವ ಉಳಿಸಲು ಸ್ವಯಂಪ್ರೇರಿತರಾಗಿ ಜನಸ್ತೋಮ ಸೇರಿದೆ. ಸಾಧು-ಸಂತರ ಮಾರ್ಗದರ್ಶನದಲ್ಲಿ ರಾಜ್ಯದಲ್ಲಿ ನಮ್ಮ ಬ್ರಿಗೇಡ್ ಕಾರ್ಯನಿರ್ವಹಿಸಲಿದೆ ಎಂದು ತಿಳಿಸಿದರು.ಕನ್ಹೇರಿ ಮಠದ ಅದೃಶ್ಯಕಾಡಸಿದ್ದೇಶ್ವರ ಸ್ವಾಮೀಜಿ ಮಾತನಾಡಿ, ದೇಶದಲ್ಲಿ ಹಿಂದುಗಳ ಸಂಖ್ಯೆ ಶೇ.೫೦ಕ್ಕಿಂತ ಕಡಿಮೆಯಾದರೆ ದೇಶದಲ್ಲಿ ಸಂವಿಧಾನ, ಪ್ರಜಾತಂತ್ರ ವ್ಯವಸ್ಥೆ ಉಳಿಯಲು ಸಾಧ್ಯವಿಲ್ಲ. ಈಗಾಗಲೇ ದೇಶದ ೩೫೦ ಜಿಲ್ಲೆಗಳಲ್ಲಿ ಹೆಚ್ಚು ಹಿಂದುಗಳು ಮೈನಾರಿಟಿಯಲ್ಲಿ ಹೋಗಿದ್ದಾರೆ. ಶೇ.೫೧ ರಷ್ಟು ಮುಸ್ಲಿಂ ಧರ್ಮದವರೇ ಆದರೆ ಖಂಡಿತ ಹಿಂದುಗಳು ಬದುಕಲು ಸಾಧ್ಯವಿಲ್ಲ ಎಂದು ಎಚ್ಚರಿಸಿದರು.

ಜಗತ್ತಿನಲ್ಲಿ ಈಗಾಗಲೇ ಬಾಂಗ್ಲಾದೇಶ, ಅಪ್ಘಾನಿಸ್ತಾನ ದೇಶಗಳಲ್ಲಿ ಅನ್ಯಧರ್ಮದ ಪ್ರಾಬಲ್ಯ ನೋಡುತ್ತಿದ್ದೇವೆ. ಕೇರಳದಲ್ಲಿ ಕಿಟಕಿ ಬದಲಾಯಿಸಲು ಇಸ್ಲಾಂ ಧರ್ಮ ಸೇರಬೇಕಿದೆ. ಕಾಸರಗೋಡಿನಲ್ಲಿ ಹಿಂದುಗಳ ಮನೆ ಮುಂದೆಯೇ ಗೋವು ಕಡಿದು ಮಾಂಸ ಹಂಚುತ್ತಾರೆ. ಇದನ್ನು ತಪ್ಪಿಸಲು ಈಶ್ವರಪ್ಪ ಬ್ರಿಗೇಡ್‌ ಸ್ಥಾಪನೆ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಸಂಘಟನೆ ಹಿಂದು ಧರ್ಮ, ದೇಶ ಸಂರಕ್ಷಣೆ ಜೊತೆಗೆ ಸಂಸ್ಕೃತಿ ಸಂರಕ್ಷಣೆ ಮಾಡುವ ಮೂಲಕ ಸಾಮಾಜಿಕ ಕಾರ್ಯಗಳನ್ನು ಮಾಡಲಿ ಎಂದು ಶುಭ ಹಾರೈಸಿದರು.

ಇತ್ತೀಚೆಗೆ ದೇಶ, ಧರ್ಮ, ಹೃದಯಗಳಿಗೆ ದೊಡ್ಡ ಆಘಾತಗಳು ಉಂಟಾಗುತ್ತಿವೆ. ಸಾಂಸ್ಕೃತಿಕ ಚಳುವಳಿ ಆರಂಭಿಸಿ ಅವುಗಳನ್ನು ತಡೆಯಬೇಕಿದೆ. ಬ್ರಿಗೇಡ್ ಉದ್ದೇಶವನ್ನು ಈಶ್ವರಪ್ಪ ಸ್ಪಷ್ಟವಾಗಿ ಹೇಳಿದ್ದಾರೆ. ಶೇ.೮೦ರಷ್ಟು ಸಮಾಜಕ್ಕೆ, ಶೇ.೨೦ ರಷ್ಟು ರಾಜನೀತಿಜ್ಞನಾಗಿ ರಾಜಕಾರಣಿ ಇದ್ದರೆ ಉತ್ತಮ ರಾಜಕಾರಣಿಯಾಗಲು ಸಾಧ್ಯವಿದೆ. ಯಾರು ಜನಹಿತ ಮಾಡುತ್ತಾರೋ ಅವರು ಜನನಾಯಕರಾಗುತ್ತಾರೆ ಎಂದು ಹೇಳಿದರು.

ದೇಶದಲ್ಲಿ ಲವ್ ಜಿಹಾದ್, ಲ್ಯಾಂಡ್ ಜಿಹಾದ್ ಸೇರಿದಂತೆ ೨೦ ಪ್ರಕಾರದ ಜಿಹಾದ್‌ಗಳು ನಡೆಯುತ್ತಿವೆ. ಇವುಗಳನ್ನು ತಡೆಯಲು ಹಿಂದು ಬಾಂಧವರು ಒಂದಾಗಬೇಕಿದೆ. ಲವ್ ಜಿಹಾದ್‌ನಿಂದಾಗಿ ನೂರಾರು ಹಿಂದು ಯುವತಿಯರು ಕಾಣೆಯಾಗಿದ್ದಾರೆ. ಇದಕ್ಕೆ ಕಾರಣ ನಮ್ಮ ಯುವತಿಯರಿಗೆ ಧರ್ಮಬೋಧನೆ ಮಾಡಿಲ್ಲ. ಇದರಿಂದಾಗಿ ನಮ್ಮ ಮಕ್ಕಳಿಗೆ ಧರ್ಮ ಬೋಧನೆ ಮಾಡುವ ಅಗತ್ಯವಿದೆ. ಕನ್ಹೇರಿ ಮಠದಲ್ಲಿ ಹಿಂದು ಧರ್ಮದ ಸಂರಕ್ಷಣೆ, ಆಚರಣೆ, ಸಂಸ್ಕಾರದ ಕುರಿತು ಮೂರು ದಿನಗಳ ಕಾರ್ಯಕ್ರಮ ನಡೆಯಿತು. ಇಂದು ತುಷ್ಟೀಕರಣ ಚಳುವಳಿ ಆರಂಭವಾಗಿದೆ. ಇದು ಎಲ್ಲಿಗೆ ಹೋಗಿ ನಿಲ್ಲುತ್ತದೆ ಎಂದು ಗೊತ್ತಿಲ್ಲ. ಕ್ರಾಂತಿ ಮಾಡಲು ಎದೆಗಾರಿಕೆ, ಸಾಹಸ ಬೇಕು. ಈಶ್ವರಪ್ಪನವರು ಹಿಂದುತ್ವ ಉಳಿಸಲು, ದೇಶ ಕಟ್ಟುವ ಸಂಕಲ್ಪ ಮಾಡಿದ್ದಾರೆ. ಈ ಕ್ರಾಂತಿವೀರ ಬ್ರಿಗೇಡ್‌ ರಾಜ್ಯಕ್ಕೆ ಹೊಸ ದಿಶೆಯನ್ನು ತೋರಲಿದ್ದು, ಗ್ರಾಮಗಳಲ್ಲಿ ಸಂಘಟನೆಯ ಶಾಖೆಗಳಾಗಲಿ ಎಂದು ಆಶಿಸಿದರು.

ಕ್ರಾಂತಿವೀರ ಬ್ರಿಗೇಡ್ ಕಾರ್ಯಾಧ್ಯಕ್ಷ ಕಾಂತೇಶ ಈಶ್ವರಪ್ಪ ಮಾತನಾಡಿ, ಗೋ ಮಾತೆ ಸಂರಕ್ಷಣೆ, ಧರ್ಮ, ದೇಶದ ಸಂರಕ್ಷಣೆ ಸೇರಿದಂತೆ ಆರು ಅಂಶಗಳ ನಿರ್ಣಯ ಮಂಡಿಸಿದರು. ಈ ನಿರ್ಣಯಗಳಿಗೆ ಬ್ರಿಗೇಡ್ ರಾಜ್ಯಾಧ್ಯಕ್ಷ ಬಸವರಾಜ ಬಾಳಿಕಾಯಿ ಅವರು ಅನುಮೋದಿಸಿದರು.

ತಿಂಥಣಿಯ ಸಿದ್ದರಾಮಾನಂದಪೂರಿ ಸ್ವಾಮೀಜಿ, ಭಾಗ್ಯ ಚಡಚಣ, ಹುಲಜಂತಿಯ ಮಾಳಿಂಗರಾಯ, ಶಿವಪ್ರಕಾಶ ಶಿವಾಚಾರ್ಯ ಸ್ವಾಮೀಜಿ, ಚನ್ನಬಸವ ಸ್ವಾಮೀಜಿ, ಸಿದ್ದಲಿಂಗ ಸ್ವಾಮೀಜಿ, ಪರಮಾನಂದ ಸ್ವಾಮೀಜಿ ಸೇರಿದಂತೆ ವಿವಿಧ ಶ್ರೀಗಳು, ಶಿಲ್ಪಾ ಕುದರಗೊಂಡ, ರಾಜೇಶ್ವರಿ ಯರನಾಳ, ಬಸವರಾಜ ಬಾಗೇವಾಡಿ, ರೇವಣಸಿದ್ದ ಮಣ್ಣೂರ, ಗೋವಿಂದ ಕೊಪ್ಪದ, ರವಿ ನಾಯ್ಕೋಡಿ, ರಮೇಶ ಪೂಜಾರಿ, ಜಗದೀಶ ಆನಂದ ಶ್ರೀ, ಲಕ್ಷ್ಮಣ ಮುತ್ಯಾ, ಅಭಿನವ ಸಂಗನಬಸವ ಶ್ರೀ, ಕಲ್ಲಿನಾಥ ದೇವರು, ಆನಂದ ದೇವರು, ಮಾದುಲಿಂಗ ಮಹಾರಾಜರು, ಜಯಲಕ್ಷ್ಮೀ ಈಶ್ವರಪ್ಪ, ಕಲ್ಲು ಸೊನ್ನದ, ಬಸವರಾಜ್ ಬಿಜಾಪುರ, ಮುದಕಣ್ಣ ಹೊರ್ತಿ,ಅಮರೇಶ ಕಾಮನಕೇರಿ, ರಾಜು ಮುಳವಾಡ, ಸುನಿಲ ಜಮಖಂಡಿ ಸೇರಿ ಇತರರು ಇದ್ದರು. ಕವಲಗುಡ್ಡದ ಅಮೇಶ್ವರ ಸ್ವಾಮೀಜಿ ಸ್ವಾಗತಿಸಿದರು. ಡಿ.ಎಚ್.ಜೋಗಿ ನಿರೂಪಿಸಿದರು. ವೀರಣ್ಣ ಹಳಗೌಡರ ವಂದಿಸಿದರು.

ಡಿವೈಎಸ್ಪಿ ಬಲ್ಲಪ್ಪ ನಂದಗಾಂವಿ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ಮೆರವಣಿಗೆ ಸಾಗುವ ಸಂದರ್ಭದಲ್ಲಿ ಸುಗಮ ವಾಹನ ಸಂಚಾರಕ್ಕೆ ಪೊಲೀಸ್‌ರು ಕ್ರಮ ತೆಗೆದುಕೊಂಡರು.

------------

ಕೋಟ್‌

ಬೇರೆಯವರು ಜಾತಿ ಮಾಡುತ್ತಾರೆ ಅಂತಾ ನಾವು ಜಾತಿ ಮಾಡಿದರೆ ಸಣ್ಣವರಾಗುತ್ತೇವೆ. ಗೋವನ್ನು ಮಾತೆ ಎನ್ನುತ್ತೇವೆ. ಆದರೆ, ಗೋವಿನ ಪರಿಸ್ಥಿತಿ ಇಂದು ಹೇಗಾಗಿದೆ? ಇದರ ಜೊತೆಗೆ ವಕ್ಫ್‌ ವಿರುದ್ಧ ಹೋರಾಟ, ಮಠಗಳನ್ನು ಅಭಿವೃದ್ಧಿಪಡಿಸುವುದು ನಮ್ಮ ಬ್ರಿಗೇಡ್ ಉದ್ದೇಶಾಗಿದೆ. ಯಾವ ಜನ್ಮದಲ್ಲಿ ಪುಣ್ಯ ಮಾಡಿದ್ದೇನೋ ಗೊತ್ತಿಲ್ಲ. ಹಿಂದು ಧರ್ಮದ ಅಭಿವೃದ್ಧಿ, ಹಿಂದುತ್ವ ಉಳಿಸಿಕೊಳ್ಳಲು ಕ್ರಾಂತಿವೀರ ಬ್ರಿಗೇಡ್ ಕಾರ್ಯ ಮಾಡಲಿದೆ.

- ಕೆ.ಎಸ್‌.ಈಶ್ವರಪ್ಪ, ಬ್ರಿಗೇಡ್‌ ಸಂಚಾಲಕ

----------

ಬಾಕ್ಸ್‌....

ಅದ್ಧೂರಿ ಕುಂಭ ಮೆರವಣಿಗೆ

ರಾಜ್ಯದ ವಿವಿಧ ಜಿಲ್ಲೆಗಳಿಂದ ಸುಮಾರು 1008 ಸಾಧು-ಸಂತರ ಆಗಮಿಸಿದ್ದರು. ಈ ವೇಳೆ ಶ್ರೀಗಳ ಪಾದಪೂಜೆಯ ಮೂಲಕವೇ ಕ್ರಾಂತಿವೀರ ಬ್ರಿಗೇಡ್‌ಗೆ ಚಾಲನೆ ನೀಡಲಾಯಿತು. ಕಾರ್ಯಕ್ರಮದಲ್ಲಿ 1008 ದಂಪತಿಗಳು ಸ್ವಾಮೀಜಿಗಳು, ಸಾಧು-ಸಂತರ ಪಾದಪೂಜೆ ನೆರವೇರಿಸಿ ಭಕ್ತಿ ಸಮರ್ಪಿಸಿದರು. ಪಟ್ಟಣದ ಬಸವಜನ್ಮ ಸ್ಮಾರಕದ ಮುಂಭಾಗ ಬ್ರಿಗೇಡ್ ಉದ್ಘಾಟನೆ ಅಂಗವಾಗಿ 1008 ಕ್ಕೂ ಕುಂಭಹೊತ್ತ ಮಹಿಳೆಯರು 1008 ಸಾಧು-ಸಂತರನ್ನು ಸ್ವಾಗತಿಸಲಾಯಿತು. ನಂತರ ಮೆರವಣಿಗೆಗೆ ಚಾಲನೆ ನೀಡಲಾಯಿತು. ಬಸವಜನ್ಮ ಸ್ಮಾರಕದಿಂದ ಆರಂಭವಾದ ಕುಂಭ ಮೆರವಣಿಗೆಯು ಕಾರ್ಯಕ್ರಮದ ವೇದಿಕೆಗೆ ತಲುಪಿತು. ಮೆರವಣಿಗೆಯಲ್ಲಿ ಕುಂಭ ಹೊತ್ತ ಮಹಿಳೆಯರು ಕೇಸರಿ, ಹಳದಿ, ಕೆಂಪು ಸೀರೆಯಲ್ಲಿ ಗಮನ ಸೆಳೆದರು. ಅಲ್ಲದೇ, ಸಾರವಾಡದ ಗೊಂಬೆಗಳು, ಮಹಿಳೆಯರ ಡೊಳ್ಳು ಕುಣಿತ, ಕರಡಿ ಮಜಲು, ಡೊಳ್ಳಿನ ಮೇಳ ಸೇರಿದಂತೆ ವಿವಿಧ ವಾದ್ಯ-ಮೇಳಗಳು ಗಮನ ಸೆಳೆದವು.

----------

ಬಾಕ್ಸ್‌...1

ಈಶ್ವರಪ್ಪರನ್ನು ಬಿಜೆಪಿಗೆ ಮರು ಸೇರ್ಪಡೆ ಮಾಡಿಕೊಳ್ಳಿ

ಈಶ್ವರಪ್ಪನವರು ಮುಖ್ಯಮಂತ್ರಿಯಾಗಬೇಕಾಗಿತ್ತು. ಇದನ್ನು ಬಿಜೆಪಿಯವರು ತಪ್ಪಿಸಿದ್ದಾರೆ. ಅವರನ್ನು ಪಕ್ಷದಿಂದ ಹೊರಹಾಕಿದ್ದರಿಂದ ಪಕ್ಷವು ಮೂಲೆಗುಂಪಾಗಿ ಹೋಗುತ್ತಿದೆ. ಪಕ್ಷಕ್ಕಾಗಿ ದುಡಿದವರನ್ನು ಯಾವುದೇ ಪಕ್ಷವಾಗಲಿ ಅವರನ್ನು ಹೊರಗೆ ಹಾಕಬಾರದು. ಅವರನ್ನು ಪಕ್ಷಕ್ಕೆ ಮರು ಸೇರ್ಪಡೆ ಮಾಡಿಕೊಳ್ಳಬೇಕು ಎಂದು ಮಕಣಾಪುರದ ಸೋಮೇಶ್ವರ ಸ್ವಾಮೀಜಿ ಹೇಳಿದರು.

ಅವರನ್ನು ಕಡೆಗಣಿಸಿದ್ದಕ್ಕೆ ರಾಜ್ಯದಲ್ಲಿ ಬೆಜೆಪಿ ಅಧಿಕಾರ ಕಳೆದುಕೊಂಡು ಮೂಲೆಗುಂಪಾಗಿದೆ. ಅವರನ್ನು ಬಿಜೆಪಿಯೊಳಗೆ ಬಿಟ್ಟುಕೊಂಡು ಮಾರ್ಗದರ್ಶನ ಪಡೆಯಬೇಕು ಎಂದ ಅವರು, ದೇಶ ಸೇವೆಗೆ, ಈಶ ಸೇವೆಗೆ ಬ್ರಿಗೇಡ್ ಹೆಜ್ಜೆ ಇಡುತ್ತಿದೆ. ಸಾಧು-ಸಂತರ ಪಾದಪೂಜೆ ಈ ನೆಲದಲ್ಲಿ ನಡೆದಿದ್ದು ಐತಿಹಾಸಿಕ.ಮುಂಬರುವ ದಿನಗಳಲ್ಲಿ ಬ್ರಿಗೇಡ್ ಉತ್ತಮ ಕೆಲಸ ಮಾಡಲಿ ಎಂದು ಹಾರೈಸಿದರು.

------------

ಕೋಟ್‌....

ಈ ಬ್ರಿಗೇಡ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆಯುವಂತಾಗಲಿ. ಮುಂಬರುವ ದಿನಗಳಲ್ಲಿ ಈಶ್ವರಪ್ಪ ರಾಜ್ಯದ ಮುಖ್ಯಮಂತ್ರಿಯಾಗುತ್ತಾರೆ.

- ಚಂದ್ರಶೇಖರ ಸ್ವಾಮೀಜಿ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ