ತಾಲೂಕು ದೈಹಿಕ ಶಿಕ್ಷಕರ ಸಂಘದಿಂದ ಶಿಕ್ಷಣ ಇಲಾಖೆ ಆಯುಕ್ತರಿಗೆ ಮನವಿ
ಕಳೆದ ಎರಡು ದಶಕಗಳಿಂದ ತಾಲೂಕಿನಾದ್ಯಂತ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ದೈಹಿಕ ಶಿಕ್ಷಕರು ತಮ್ಮ ಹಲವು ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಶಿಕ್ಷಣ ಇಲಾಖೆಯ ಆಯುಕ್ತರಿಗೆ ಲಿಖಿತ ಪತ್ರದ ಮೂಲಕ ಮನವಿ ನೀಡಿದ್ದಾರೆ.
ತಾಲೂಕು ದೈಹಿಕ ಶಿಕ್ಷಕರ ಸಂಘ ಗೌರವಾಧ್ಯಕ್ಷ ಕೆ.ಟಿ.ವೇಲೂರು ಮಾತನಾಡಿ. ಎಲ್ಲಾ ದೈಹಿಕ ಶಿಕ್ಷಕರನ್ನು ಸಹ ಶಿಕ್ಷಕರೆಂದು ಪರಿಗಣಿಸುವುದರ ಜೊತೆಗೆ ಇಲಾಖೆ ಬಡ್ತಿ, ಮುಂಬಡ್ತಿ ಹಾಗೂ ವಿವಿಧ ಶ್ರೇಣಿ ಹಾಗೂ ಸೇವೆಗಳಿಗೂ ಪರಿಗಣಿಸಬೇಕು, ಒಂದು ವೇಳೆ ನಿರ್ಲಕ್ಷ್ಯವಹಿಸಿದರೆ ದೈಹಿಕ ಶಿಕ್ಷಕರ ಸಂಘದ ವತಿಯಿಂದ ಪ್ರಸ್ತುತ ವರ್ಷದ ಇಲಾಖೆಯ ಕ್ರೀಡಾಕೂಟಗಳನ್ನು ಬಹಿಷ್ಕರಿಸುವ ಮೂಲಕ ಅನಿರ್ಧಿಷ್ಟಾವಧಿ ಮುಷ್ಕರ ನಡೆಸಲಾಗುವುದು ಎಂದರು.ತಾಲೂಕು ಅಧ್ಯಕ್ಷ ಸಿದ್ದಲಿಂಗಪ್ಪ ಮಾತನಾಡಿ, ತಾಲೂಕು ದೈಹಿಕ ಶಿಕ್ಷಕರ ಸಂಘ ತನ್ನದೇಯಾದ ವಿಶೇಷ ಕಾರ್ಯಚಟುವಟಿಕೆ ಹೊಂದಿದೆ. ಕಳೆದ ಹಲವಾರು ವರ್ಷಗಳಿಂದ ದೈಹಿಕ ಶಿಕ್ಷಕರ ಸಂಘ ಇಲಾಖೆಯಿಂದ ಯಾವುದೇ ಮೂಲಭೂತ ಸೌಲಭ್ಯವಿಲ್ಲದೆ ಕಾರ್ಯನಿರ್ವಹಿಸುತ್ತಿದೆ. ಶಿಕ್ಷಕರಂತೆಯೇ ವಿವಿಧ ಶಾಲೆಗಳಲ್ಲಿ ಬೆಳಗಿನಿಂದ ಸಂಜೆವರೆಗೂ ವಿದ್ಯಾರ್ಥಿಗಳಲ್ಲಿ ಶಿಸ್ತು ಮೂಡಿಸುವುಲ್ಲದೆ, ಅವರ ಕಲಿಕೆಗೂ ಪ್ರೋತ್ಸಾಹ ನೀಡಲಾಗುತ್ತಿದೆ. ಶಿಕ್ಷಣ ಇಲಾಖೆ ನಮ್ಮ ಸಮಸ್ಯೆಯ ಬಗ್ಗೆ ಗಂಭೀರ ಚಿಂತನೆ ನಡೆಸಬೇಕು ಎಂದರು.
ಈ ವೇಳೆ ಕಾರ್ಯದರ್ಶಿ ಎಸ್.ಶ್ರೀರಾಮನಾಯಕ, ಉಪಾಧ್ಯಕ್ಷ ಶ್ರೀನಿವಾಸ್, ಉಮೇಶ್, ಖಜಾಂಚಿ ಮರವಾಯಿ ಶ್ರೀನಿವಾಸ್, ಸದಸ್ಯರಾದ ಓಬಣ್ಣ, ತಿಪ್ಪೇ ರುದ್ರನಾಯಕ ಮುಂತಾದವರು ಇದ್ದರು.