ಕನ್ನಡಪ್ರಭ ವಾರ್ತೆ ಉಡುಪಿ
ಪುತ್ತಿಗೆ ಮಠದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರ ವಿಶ್ವ ಗೀತಾ ಪರ್ಯಾಯೋತ್ಸವಕ್ಕೆ ಅನೇಕ ಮಂದಿ ವಿದೇಶಿ ಅತಿಥಿಗಳು ಆಗಮಿಸುವ ನಿರೀಕ್ಷೆ ಇದ್ದು, ಈಗಾಗಲೇ ಕೆಲವು ಗಣ್ಯರು ಭೇಟಿ ನಿಗದಿಯಾಗಿದೆ.ಮುಖ್ಯವಾಗಿ ಅಮೆರಿಕಾದ ಡಾ. ವಿಲಿಯಂ ಎಫ್. ವೆಂಡ್ಲಿ, ಜಪಾನ್ನ ರೆವರೆಂಡ್ ಕೊಶೂ ನಿವಾನೊ ಮತ್ತು ಆಸ್ಟ್ರೇಲಿಯಾದ ಮಾಜಿ ಸಚಿವ ಡ್ಯೂಕ್ ಡನೇಲನ್ ಅವರು ಪರ್ಯಾಯ ಮಹೋತ್ಸವಕ್ಕೆ ಆಗಮನ ಖಾತರಿಪಡಿಸಿದ್ದಾರೆ.
ಡಾ.ವೆಂಡ್ಲಿ ಅವರು ಪ್ರಸ್ತುತ ವರ್ಲ್ಡ್ ರಿಲಿಜಿಯನ್ ಮತ್ತು ಸ್ಪಿರಿಚಿಯಾಲಿಟಿ ಸಂಸ್ಥೆಯ ಉಪಾಧ್ಯಕ್ಷರಾಗಿದ್ದು, ಇದಕ್ಕೆ ಮೊದಲು 100ಕ್ಕೂ ಹೆಚ್ಚು ದೇಶಗಳಲ್ಲಿ ಕಾರ್ಯವೆಸಗುತ್ತಿರುವ ಬಹುಧರ್ಮಗಳ ಸಂಘಟನೆ ರಿಲಿಜಿಯನ್ಸ್ ಫಾರ್ ಪೀಸ್ ಸಂಸ್ಥೆಯ 27 ವರ್ಷಗಳ ಕಾಲ ಮಹಾಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ. ಸಿಯರಾ ಲಿಯೋನ ಅಂತರ್ ಧಾರ್ಮಿಕ ಸಮಿತಿ, ಎಚ್ಐವಿಯಿಂದ ನಿರ್ಗತಿಕರಾದ ಆಫ್ರಿಕನ್ ಮಕ್ಕಳ ನೆರವಿಗಾಗಿ ಸ್ಥಾಪಿಸಲ್ಪಟ್ಟ ಹೋಪ್ ಫಾರ್ ಆಫ್ರಿಕನ್ ಚಿಲ್ಡನ್ ಸಂಸ್ಥೆಯ ಸಹಸಂಸ್ಥಾಪಕರಾಗಿರುವ ಅವರು ಹಲವಾರು ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಿದ್ದಾರೆ.ಜಪಾನ್ ಅಧ್ಯಕ್ಷ ನಿಚಿಕೊ ನಿವಾನೊ ಅವರ ಪ್ರಥಮ ಪುತ್ರಿ ಕೊಶೂ ನಿವಾನೊ ಜಪಾನಿನ ಜನಸಾಮಾನ್ಯರ ದೊಡ್ಡ ಚಳುವಳಿಯಾಗಿರುವ ರಿಸ್ಕೊ ಕೊಸೀ ಕ್ಯಾಯ ನಿಯೋಜಿತ ಅಧ್ಯಕ್ಷೆಯಾಗಿದ್ದಾರೆ. ರಿಲಿಜನ್ಸ್ ಫಾರ್ ಪೀಸ್ ಮತ್ತು ದಿ ಕಿಂಗ್ ಅಬ್ದುಲ್ಲಾ ಬಿನ್ ಅಬ್ದುಲ್ಲ ಜೀಜ್ ಇಂಟರ್ನ್ಯಾಶನಲ್ ಸೆಂಟರ್ ಫಾರ್ ಇಂಟರ್ ರಿಲಿಜಿಯನ್ ಅಂಡ್ ಇಂಟರ್ ಕಲ್ಚರಲ್ ಡಯಲಾಗ್ (ಕೆ.ಎ.ಐ.ಸಿ.ಐ.ಐ.ಡಿ)ನಂಥ ಹಲವಾರು ಸಂಘಟನೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ‘ದಿ ಬುದ್ದ ಇನ್ ಎವೆರಿವನ್ಸ್ ಹಾರ್ಟ್’ ಎಂಬ ಕೃತಿ ರಚಿಸಿದ್ದಾರೆ.
ಲ್ಯೂಕ್ ಡನೇಲನ್ ಅಸ್ಟ್ರೇಲಿಯದ ವಿಕ್ಟೋರಿಯಾದ ಮಾಜಿ ಸಚಿವ. ವಿಕ್ಟೋರಿಯಾ ಪ್ರಾಂತ್ಯದ ಬಹುಸಾಂಸ್ಕೃತಿಕ ನಗರ ಮೆಟ್ರೋನಲ್ಲಿ ಶ್ರೀಕೃಷ್ಣ ವೃಂದಾವನ ದೇವಾಲಯ ಸ್ಥಾಪಿಸಿರುವ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಭಕ್ತಾಭಿಮಾನಿಯಾಗಿದ್ದಾರೆ. ಅವರು ಅಸ್ಟ್ರೇಲಿಯಾದ ಅನಿವಾಸಿ ಭಾರತೀಯರಿಗೆ ವಿಶೇಷ ಪ್ರೋತ್ಸಾಹ ನೀಡುತ್ತಿದ್ದಾರೆ.