ಹಾವೇರಿ: ತಾಲೂಕಿನ ಮಣ್ಣೂರ ಗ್ರಾಮದ ವರದಾ ನದಿ ತೀರದಲ್ಲಿರುವ ಗದಿಗೇಶ್ವರ ಹಾಗೂ ವಿರೂಪಾಕ್ಷೇಶ್ವರ ತಪೋವನ ಮಠದ ಆವರಣದಲ್ಲಿ ಪಂಚ ಸಹಸ್ರ ಕಾರ್ತಿಕ ದೀಪೋತ್ಸವ ವಿಜೃಂಭಣೆಯಿಂದ ಜರುಗಿತು.
ನಂತರ ನಡೆದ ಪಂಚ ಸಹಸ್ರ ಕಾರ್ತಿಕ ದೀಪೋತ್ಸವಕ್ಕೆ ನೆಗಳೂರು ಗುರುಶಾಂತೇಶ್ವರ ಸಂಸ್ಥಾನ ಹಿರೇಮಠದ ಗುರುಶಾಂತೇಶ್ವರ ಶಿವಾಚಾರ್ಯ ಸ್ವಾಮೀಜಿ ಚಾಲನೆ ನೀಡಿದರು.
ಈ ವೇಳೆ ಮಾತನಾಡಿ, ಕಾರ್ತಿಕ ಮಾಸ ಬದುಕಿನ ಕತ್ತಲೆಯನ್ನು ತೊಲಗಿಸಿ ಹೊಸ ಬೆಳಕನ್ನು ನೀಡುವ ಮಾಸವಾಗಿದ್ದು, ಶ್ರದ್ಧಾಭಕ್ತಿಯಿಂದ ದೀಪ ಬೆಳಗುವ ಮೂಲಕ ಭಕ್ತಿ ಸಮರ್ಪಿಸಬೇಕು. ವರದಾ ನದಿ ತೀರದಲ್ಲಿರುವ ಗದಿಗೇಶ್ವರ ಹಾಗೂ ವಿರೂಪಾಕ್ಷೇಶ್ವರ ತಪೋವನ ಮಠ ಪುಣ್ಯ ಕ್ಷೇತ್ರವಾಗಿದ್ದು, ಗ್ರಾಮದ ಭಕ್ತಾದಿಗಳು ಜಾತಿ, ರಾಜಕೀಯ ವೈಷಮ್ಯ ಮರೆತು ಭಕ್ತಿ, ಧರ್ಮದ ಮಾರ್ಗದಲ್ಲಿ ನಡೆದು ಒಗ್ಗಟ್ಟಿನಿಂದ ಜೀವನ ಸಾಗಿದರೆ ಬದುಕಿನಲ್ಲಿ ಇನ್ನಷ್ಟು ನೆಮ್ಮದಿ, ಸಂತೋಷ ಕಾಣಬಹುದಾಗಿದೆ ಎಂದರು.ದೇಹವೆಂಬ ಕಾಲಿ ಚೀಲದಲ್ಲಿ ಕೆಟ್ಟ ವಿಚಾರಗಳಿಗೆ ಜಾಗ ನೀಡದೆ ಒಳ್ಳೆಯ ವಿಚಾರಗಳನ್ನು ತುಂಬಿಕೊಳ್ಳುವ ಮೂಲಕ ನೆಮ್ಮದಿಯ ಜೀವನವನ್ನು ನಿಮ್ಮದಾಗಿಸಿಕೊಳ್ಳಬೇಕು. ಈ ಕಾರ್ತಿಕೋತ್ಸವ ನಿಮ್ಮ ಬಾಳಿನಲ್ಲಿ ಹೊಸ ಬೆಳಕನ್ನು ನೀಡಲಿ, ಇನ್ನಷ್ಟು ಸುಖ, ಸಂತೋಷ, ನೆಮ್ಮದಿ ತರಲಿ ಎಂದು ಹಾರೈಸಿದರು.
ದೀಪೋತ್ಸವ ಕಾರ್ಯಕ್ರಮದ ನಂತರ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು. ಕೆಸರಳ್ಳಿಯ ಕಲ್ಮೇಶ್ವರ ಭಜನಾ ಸಂಘದವರು ವಿವಿಧ ಭಜನಾ ಪದಗಳನ್ನು ಹಾಡಿ ಭಜನಾ ಸೇವೆ ಸಲ್ಲಿಸಿದರು. ಹನುಂತಪ್ಪ ಕುರುಬಗೊಂಡ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಮಣ್ಣೂರು ಗ್ರಾಮದ ಹಿರಿಯರು, ಗಣ್ಯರು ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು.