ಮಾಜಿ ಸಿಎಂ ಎಸ್.ಎಂ . ಕೃಷ್ಣ ನಿಧನ: ಕೊಪ್ಪಳ ವಿಶ್ವವಿದ್ಯಾಲಯದಲ್ಲಿ ಶೋಕಾಚರಣೆ

KannadaprabhaNewsNetwork | Published : Dec 11, 2024 12:47 AM

ಸಾರಾಂಶ

ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ನಿಧನದ ಹಿನ್ನೆಲೆ ಕೊಪ್ಪಳ ವಿಶ್ವವಿದ್ಯಾಲಯದಲ್ಲಿ ಮಂಗಳವಾರ ಶೋಕಾಚರಣೆ ಮಾಡಲಾಯಿತು.

ಕೊಪ್ಪಳ:

ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ನಿಧನದ ಹಿನ್ನೆಲೆ ಕೊಪ್ಪಳ ವಿಶ್ವವಿದ್ಯಾಲಯದಲ್ಲಿ ಮಂಗಳವಾರ ಶೋಕಾಚರಣೆ ಮಾಡಲಾಯಿತು.

ಕುಲಸಚಿವ ಪ್ರೊ. ಕೆ.ವಿ.ಪ್ರಸಾದ್ ಮಾತನಾಡಿ, ಕರ್ನಾಟಕದ ಕೀರ್ತಿ ಪತಾಕೆಯನ್ನು ಆಧುನಿಕ ಕಾಲ ಘಟ್ಟದಲ್ಲಿ ಜಗತ್ತಿನ ಮೂಲೆ ಮೂಲೆಗೂ ಹಬ್ಬಿಸಿದ್ದ ಕೀರ್ತಿ, ಹೆಮ್ಮೆ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರಿಗೆ ಸಲ್ಲಬೇಕಿದೆ ಎಂದರು.

ಎಸ್.ಎಂ. ಕೃಷ್ಣ ರಾಜ್ಯದಲ್ಲಿ ಹಲವಾರು ಅಭಿವೃದ್ಧಿ ಕೆಲಸ ಮಾಡಿ ಜಾಗತಿಕ ಮಟ್ಟದಲ್ಲಿ, ಕನ್ನಡ ನಾಡು ಗುರುತಿಸಿಕೊಳ್ಳಲು ಕೊಡುಗೆ ನೀಡಿದ್ದಾರೆ ಎಂದು ಸಹಾಯಕ ಪ್ರಾಧ್ಯಾಪಕ ಚಾಂದ್ ಬಾಷಾ ಸಂತಾಪ ಸೂಚಿಸಿದರು.

ಕಾರ್ಯಕ್ರಮದಲ್ಲಿ ಸ್ನಾತಕೋತ್ತರ ಕೇಂದ್ರದ ನಿರ್ದೇಶಕ ಪ್ರಕಾಶ ಯಳವಟ್ಟಿ ಮತ್ತು ಪ್ರವೀಣ ಪೊಲೀಸ್ ಪಾಟೀಲ್, ಜಗದೀಶ್, ಕುಮಾರ ನಾಯಕ್, ಅಯ್ಯಪ್ಪ, ಸಂತೋಷ ಕುಮಾರ, ಪಾರ್ವತಿ, ಬಾಷಾ ವಿರೂಪಾಕ್ಷ, ಪಾಪಣ್ಣ, ಶ್ರೀಕಂತ್, ಸುಧಾಕರ್, ಗೀತಾ ಪಾಟೀಲ್ ಸೇರಿದಂತೆ ವಿದ್ಯಾರ್ಥಿಗಳು ಇದ್ದರು.ಎಸ್.ಎಂ . ಕೃಷ್ಣ ನಿಧನಕ್ಕೆ ಸಚಿವ ತಂಗಡಗಿ ಸಂತಾಪ:

ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರ ನಿಧನಕ್ಕೆ ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ‌ ಶಿವರಾಜ್ ತಂಗಡಗಿ ಸಂತಾಪ ವ್ಯಕ್ತಪಡಿಸಿದ್ದಾರೆ.ಈ ಕುರಿತು ಪ್ರಕಟಣೆ ನೀಡಿರುವ ಅವರು, ಎಸ್.ಎಂ. ಕೃಷ್ಣ‌ ಅವರ ಅಗಲಿಕೆ‌ ತೀವ್ರ ನೋವು ತರಿಸಿದ್ದು, ದೇಶ ಒಬ್ಬ ಧೀಮಂತ ನಾಯಕನನ್ನು ಕಳೆದುಕೊಂಡಿದೆ. ರಾಜ್ಯದ ಉಪ ಮುಖ್ಯಮಂತ್ರಿ, ಮುಖ್ಯಮಂತ್ರಿ, ಸ್ಪೀಕರ್‌ ಆಗಿ, ಕೇಂದ್ರ ಸಚಿವ ಹಾಗೂ ರಾಜ್ಯಪಾಲರಾಗಿ ಎಸ್.ಎಂ. ಕೃಷ್ಣ ನೀಡಿರುವ ಕೊಡುಗೆ ಅಪಾರವಾದದ್ದು. ಕರ್ನಾಟಕ ‌ಅಭಿವೃದ್ಧಿಯ ವಿಚಾರದಲ್ಲಿ ತಮ್ಮದೇ‌ ಆದ ದೂರದೃಷ್ಟಿ ಹೊಂದಿದ್ದರು. ಬೆಂಗಳೂರಿನ ಅಭಿವೃದ್ಧಿಯಲ್ಲಿ ಮಹತ್ತರ ಕೊಡುಗೆ ನೀಡಿದ್ದ ಎಸ್.ಎಂ. ಕೃಷ್ಣ‌ ಅವರಿಂದಲೇ ಬೆಂಗಳೂರಿಗೆ ವಿಶ್ವಮಟ್ಟದಲ್ಲಿ ಸಿಲಿಕಾನ್ ಸಿಟಿ, ಐಟಿ- ಬಿಟಿ ಸಿಟಿ ಎಂಬ ಹೆಸರು ಬಂದಿತ್ತು. ತಮ್ಮ ಅನನ್ಯವಾದ ಕೊಡುಗೆಗೆ ಪದ್ಮವಿಭೂಷಣ ಪ್ರಶಸ್ತಿಗೆ ಭಾಜನರಾಗಿದ್ದರು. ಅವರ ಬದುಕು ಎಲ್ಲರಿಗೂ ಸ್ಪೂರ್ತಿ ಎಂದು ಸಚಿವರು ಕಂಬನಿ ಮಿಡಿದಿದ್ದಾರೆ.

Share this article