ಕನ್ನಡಪ್ರಭ ವಾರ್ತೆ ಕೆ.ಆರ್. ನಗರ
ಎಂಡಿಎ ಮಾಜಿ ಅಧ್ಯಕ್ಷ ಹಾಗೂ ಉಪ್ಪಾರ ಸಮಾಜದ ಮುಖಂಡ ಎಚ್.ಎನ್. ವಿಜಯ್ ಅವರ 50ನೇ ವರ್ಷದ ಜನ್ಮ ದಿನಾಚರಣೆಯನ್ನು ಜುಲೈ 16ರಂದು ಅರ್ಥ ಪೂರ್ಣವಾಗಿ ಆಚರಿಸಲು ಅಭಿಮಾನಿಗಳು ತೀರ್ಮಾನಿಸಿದ್ದಾರೆ ಎಂದು ಶಾಸಕ ಜಿ.ಟಿ. ದೇವೇಗೌಡ ಹೇಳಿದರು.ಕಳೆದ ಎರಡು ದಶಕಗಳಿಂದ ಸಮಾಜಮುಖಿ ಕೆಲಸಗಳನ್ನು ಮಾಡಿಕೊಂಡು ಬರುತ್ತಿರುವ ನಮ್ಮೆಲ್ಲರ ನೆಚ್ಚಿನ ನಾಯಕನಾಗಿರುವ, ಸದಾ ಜಾತ್ಯಾತೀತ ಮತ್ತು ಪಕ್ಷಾತೀತಾ ರಾಜಕಾರಣ ಮಾಡಿಕೊಂಡು ಬರುತ್ತಿದ್ದು ಇಂತಹಾ ನಾಯಕರ ಸಂತಾನ ಹೆಚ್ಚಬೇಕೆಂದು ಸಾಲಿಗ್ರಾಮ ತಾಲೂಕಿನ ಹರದನಹಳ್ಳಿ ಗ್ರಾಮದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಹಲವು ರಾಜಕೀಯ ನಾಯಕರು ಮತ್ತು ಹಣ ಉಳ್ಳವರು ತಮ್ಮ ಜನ್ಮ ದಿನಾಚರಣೆಯನ್ನು ಆಡಂಬರದಿಂದ ಮಾಡಿಕೊಳ್ಳುತ್ತಾರೆ. ಆದರೆ ಎಚ್.ಎನ್. ವಿಜಯ್ ತಮ್ಮ ಜನ್ಮ ದಿನವನ್ನು ಹಲವು ಸೇವಾ ಕಾರ್ಯಗಳ ಜತೆಗೆ ಸಮಾಜದಲ್ಲಿ ನೊಂದವರು ಮತ್ತು ಪ್ರತಿಭಾವಂತವರಿಗೆ ಪುರಸ್ಕರಿಸಿ ಗೌರವಿಸುವುದರ ಮೂಲಕ ಆಚರಿಸಿಕೊಳ್ಳುತ್ತಿರುವುದು ಪ್ರಶಂಸನೀಯ ಎಂದರು.50 ವರ್ಷಗಳ ಸಾರ್ಥಕ ಜೀವನ ನಡೆಸಿರುವ ಎಚ್.ಎನ್. ವಿಜಯ್ ತಮ್ಮ ಜೀವನದುದ್ದಕ್ಕೂ ಸಮಾಜ ಮುಖಿ ಕಾರ್ಯಗಳ ಜತೆಗೆ ಸಾವಿರಾರು ಮಂದಿಗೆ ಉದ್ಯೋಗ ನೀಡುವ ಮೂಲಕ ಅವರ ಜೀವನಕ್ಕೆ ದಾರಿ ದೀಪವಾಗಿದ್ದು ನಮ್ಮ ನಡುವೆ ಇಂತಹವರು ಇರುವುದು ನಮ್ಮ ಸುಕೃತ ಎಂದು ಕೊಂಡಾಡಿದರು.
ಅವರ ಜನ್ಮ ದಿನದಂದು 51 ಮಂದಿ ಸ್ವಾಮೀಜಿಗಳಿಗೆ ಭಗೀರಥ ಪೀಠದ ಪರಮೋಚ್ಚ ಗುರುಗಳಾದ ಪ್ರಸನ್ನಾನಂದ ಪುರಿ ಶ್ರೀಗಳ ಸಾನಿದ್ಯದಲ್ಲಿ ಗೌರವ ಸಲ್ಲಿಸಲಿದ್ದು ಇದರೊಂದಿಗೆ ಗರ್ಭೀಣಿಯರಿಗೆ ಬಾಗಿನ ನೀಡಲಾಗುತ್ತದೆ ಎಂದು ಅವರು ಪ್ರಕಟಿಸಿದರು.ಸಾಲಿಗ್ರಾಮ ಮತ್ತು ಕೆ.ಆರ್. ನಗರ ತಾಲೂಕಿನ ಎಲ್ಲಾ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ಮಾಡುವುದರೊಂದಿಗೆ ಹಳೆ ಮೈಸೂರು ಪ್ರಾಂತ್ಯದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಕರೆಯಿಸಿ ಅವರನ್ನು ಗೌರವಿಸುವ ಕೆಲಸ ಮಾಡಲಾಗುತ್ತದೆ ಎಂದು ಅವರು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಎಚ್.ಎನ್. ವಿಜಯ್ ಅವರ ಜನ್ಮ ದಿನಾಚರಣೆಯಲ್ಲಿ 20 ಸಾವಿರ ಮಂದಿಗೆ ಮತ್ತು ಅಭಿಮಾನಿಗಳಿಗೆ ಮಾಂಸಹಾರ ಮತ್ತು ಸಸ್ಯಹಾರದ ಭೋಜನದ ವ್ಯವಸ್ಥೆ ಮಾಡಲಾಗಿದ್ದು, ಕಾರ್ಯಕ್ರಮಕ್ಕೆ ಎಲ್ಲಾ ಸಮಾಜದ ಮುಖಂಡರು ಮತ್ತು ಸರ್ವಪಕ್ಷಗಳ ಗಣ್ಯರು ಆಗಮಿಸಿ ಅವರನ್ನು ಆರ್ಶೀವಾದ ಮಾಡಬೇಕು ಎಂದು ಅವರು ಕೋರಿದರು.ಎಂಡಿಎ ಮಾಜಿ ಅಧ್ಯಕ್ಷ ಎಚ್.ಎನ್. ವಿಜಯ್ ಮಾತನಾಡಿ, 50 ವಸಂತಗಳನ್ನು ಪೋರೈಸಿರುವ ನನ್ನ ಜನ್ಮ ದಿನಾಚರಣೆಯನ್ನು ಹುಟ್ಟೂರಿನ ಜನರು ಮತ್ತು ಅಭಿಮಾನಿಗಳು ಅತ್ಯಂತ ಅರ್ಥ ಪೂರ್ಣವಾಗಿ ಆಚರಿಸುತ್ತಿದ್ದು ಈ ಕಾರ್ಯಕ್ರಮದಲ್ಲಿ ನಾಡಿನ ವಿವಿಧ ಮಠಾಧೀಶರು, ರಾಜಕಾರಣಿಗಳು ಹಾಗೂ ನನ್ನ ನಲ್ಮೆಯ ಒಡನಾಡಿಗಳು ಭಾಗವಿಸುತ್ತಿದ್ದು ಪಕ್ಷಾತೀತವಾಗಿ ಆಗಮಿಸಿ ಆಶೀರ್ವದಿಸಬೇಕು ಎಂದು ಅವರು ಮನವಿ ಮಾಡಿದರು.
ಮೈಮುಲ್ ಮಾಜಿ ಅಧ್ಯಕ್ಷ ಎ.ಟಿ. ಸೋಮಶೇಖರ್, ಎಪಿಎಂಸಿ ಮಾಜಿ ಅಧ್ಯಕ್ಷ ಕುಪ್ಪಳ್ಳಿ ಸೋಮು, ಹರದನಹಳ್ಳಿ ಮಾಜಿ ಅಧ್ಯಕ್ಷರಾದ ದೀಪು, ಮಂಜುಳಾ, ಸದಸ್ಯರಾದ ಜಯರಾಮು, ಮುಖಂಡರಾದ ರಾಜೀವ್, ನಂದೀಶ್, ತಿಮ್ಮೇಗೌಡ, ಹೇಮಂತ್, ನಿಂಗಪ್ಪ, ದೇವೇಗೌಡ, ಮುದ್ದಗುಪ್ಪೆ ಕುಮಾರ್ ಮೊದಲಾದವರು ಇದ್ದರು.