ಕನ್ನಡಪ್ರಭ ವಾರ್ತೆ ಬೇಲೂರು ಜನರ ಬಹುದಿನಗಳ ಬೇಡಿಕೆಯಾದ 8 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ 61 ಕೆರೆಗಳಿಗೆ ನೀರು ತುಂಬಿಸುವ ಹೆಬ್ಬಾಳ ಏತ ನೀರಾವರಿ ಯೋಜನೆ ಜಾರಿಗೆ ತರುವಲ್ಲಿ ಶಾಸಕ ಎಚ್ ಕೆ ಸುರೇಶ್ ವಿಫಲರಾಗಿದ್ದು, ತಮ್ಮ ಕೈಯಲ್ಲಿ ಆಗಲ್ಲ ಎಂದು ಹೇಳಿದರೆ ತಾವು ಹೋರಾಟ ಮಾಡಿ ಅನುಮೋದನೆ ತರಲು ಸಿದ್ದ ಎಂದು ಮಾಜಿ ಸಚಿವ ಬಿ.ಶಿವರಾಂ ಸವಾಲು ಹಾಕಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಶಾಸಕರಿಗೆ ಇನ್ನೂ ಸುಮಾರು ಒಂದೂವರೆ ವರ್ಷಗಳ ಅವಧಿ ಇದೆ. ಈ ಅವಧಿಯೊಳಗೆ ಹೆಬ್ಬಾಳ ಏತ ನೀರಾವರಿ ಯೋಜನೆಯನ್ನು ಜಾರಿಗೆ ತಂದು ತೋರಿಸಲಿ. ಅದರ ಶ್ರೇಯಸ್ಸು ಶಾಸಕರಿಗೆ ಸಲ್ಲಲಿ. ಆದರೆ ಸಾಧ್ಯವಾಗದಿದ್ದರೆ ನಾನು ಜನರ ಪರವಾಗಿ ಹೋರಾಟ ನಡೆಸಿ ಈ ಯೋಜನೆಯನ್ನು ಮಾಡಿ ತೋರಿಸುತ್ತೇನೆ. ಇದನ್ನು ನಾನು ಸವಾಲಾಗಿ ಸ್ವೀಕರಿಸಲು ಸಿದ್ಧನಿದ್ದೇನೆ. ಜನರಿಗೆ ಕಣ್ಣೊರೆಸುವ ಕೆಲಸ ಬೇಡ. ಹೆಬ್ಬಾಳ ಭಾಗದಲ್ಲಿ ಕಾರ್ಯಕ್ರಮಗಳಿಗೆ ಹೋಗಿ ಗುದ್ದಲಿಪೂಜೆ ಮಾಡಿ ಅಭಿವೃದ್ಧಿ ಮಾಡುತ್ತೇನೆ ಎಂದು ಹೇಳುವುದರಿಂದ ಮಾತ್ರ ಜನರ ಸಮಸ್ಯೆ ಬಗೆಹರಿಯುವುದಿಲ್ಲ. ಜನರಿಗೆ ಬೇಕಾಗಿರುವುದು ಶಾಶ್ವತ ನೀರಿನ ಸೌಲಭ್ಯ. ಕೇವಲ ಆಶ್ವಾಸನೆ ನೀಡುವುದಲ್ಲ, ಯೋಜನೆ ಅನುಷ್ಠಾನವಾಗಬೇಕು ಎಂದು ಹೇಳಿದರು.ಶಾಸಕರಿಂದ ರಿಯಲ್ ಎಸ್ಟೇಟ್ ವ್ಯವಹಾರ:
ನಾನು ಯಾರ ಅಭಿವೃದ್ಧಿ ಕೆಲಸಕ್ಕೂ ಅಡ್ಡಿಯಾಗಲು ಬಂದಿಲ್ಲ. ಕ್ಷೇತ್ರಕ್ಕೆ ಒಳ್ಳೆಯ ಕೆಲಸವಾಗಬೇಕು ಎಂಬುದು ನನ್ನ ಉದ್ದೇಶ. ಶಾಸಕರು ಉತ್ತಮ ಕೆಲಸ ಮಾಡಿದರೆ ಅದನ್ನು ಸ್ವಾಗತಿಸುತ್ತೇನೆ. ಆದರೆ ಜನರ ಮೂಲಭೂತ ಸಮಸ್ಯೆಗಳ ಬಗ್ಗೆ ಪ್ರಶ್ನಿಸಿದಾಗ ಅದನ್ನು ರಾಜಕೀಯ ವಿರೋಧವೆಂದು ಬಿಂಬಿಸುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.ಪತ್ರಿಕಾಗೋಷ್ಠಿಯಲ್ಲಿ ಕಿಸಾನ್ ಘಟಕದ ತಾಲೂಕು ಅಧ್ಯಕ್ಷ ಕುಮಾರ್, ಬಿಕ್ಕೋಡು ಹೋಬಳಿ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ, ಕಾಂಗ್ರೆಸ್ ಮುಖಂಡರಾದ ನಾಗೇಶ್, ರಘು ಹಾಜರಿದ್ದರು.