ಕನ್ನಡಪ್ರಭ ವಾರ್ತೆ ರಾಯಚೂರು
ಕಳೆದ ಜು.14 ರಂದು ಮಾಜಿ ಸಚಿವ ಕೆ.ಶಿವನಗೌಡ ನಾಯಕ ಅವರ ಜನ್ಮದಿನ ಪ್ರಯುಕ್ತ ಅಭಿಮಾನಿಗಳು ನವಿಲು ಗರಿಯಿಂದ ತಯಾರಿಸಿದ ದೊಡ್ಡದಾದ ಹಾರವನ್ನು ತಂದು ಹಾಕಿದ್ದಾರೆ. ಈ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ಗೊಂಡಿದೆ. ನವಿಲು ಗರಿಯಿಂದ ತಯಾರಿಸಿದ ಹಾರವನ್ನು ಸಾರ್ವಜನಿಕವಾಗಿ ಧರಿಸಿ ವೈಭವದ ಕಾರ್ಯಕ್ರಮದಲ್ಲಿ ಭಾಗಿಯಾಗಿರುವ ಅವರ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆ, 1972ರ ಉಲ್ಲಂಘನೆಯ ಹಿನ್ನೆಲೆಯಲ್ಲಿ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಸಾಮಾಜಿಕ ಕಾರ್ಯಕರ್ತ ದಿನೇಶ ಕಲ್ಲಹಳ್ಳಿ ಅವರು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವಜ್ಯಜೀವಿ) ಮತ್ತು ಮುಖ್ಯ ವನ್ಯಜೀವಿ ಪರಿಪಾಲಕರು ಅವರಿಗೆ ಮಿಂಚಂಚೆ ಮುಖಾಂತರ ದೂರನ್ನು ದಾಖಲಿಸಿದ್ದಾರೆ.
ನವಿಲು ಗರಿಯ ಮಾರಾಟಕ್ಕೆ ಕರ್ನಾಟಕದಲ್ಲಿ ಯಾವುದೇ ವಿಧದ ಕಾನೂನುಬದ್ಧ ಅನುಮತಿ ಇಲ್ಲ. ನವಿಲು ಎಂಬುದು ಭಾರತದ ರಾಷ್ಟ್ರೀಯ ಪಕ್ಷಿಯಾಗಿದ್ದು, ವನ್ಯಜೀವಿ ಸಂರಕ್ಷಣಾ ಕಾಯ್ದೆ, 1972ರ ಅನುಷ್ಠಾನ I ಅಡಿಯಲ್ಲಿ ಬಂದಿರುತ್ತದೆ. ಈ ಕಾಯ್ದೆಯ ಪ್ರಕಾರ, ನವಿಲು ಅಥವಾ ಅದರ ಯಾವುದೇ ಅಂಗ (ಹಕ್ಕಿ, ಗರಿ, ಚರ್ಮ, ಇತ್ಯಾದಿ) ನೈಜವಾಗಿಯಾದರೂ ಅಥವಾ ಶಿಲ್ಪದ ರೂಪದಲ್ಲಾದರೂ ಸಂಗ್ರಹಿಸುವುದು, ಮಾರಾಟ ಮಾಡುವುದು ಅಥವಾ ಸಾರ್ವಜನಿಕ ಪ್ರದರ್ಶನಕ್ಕೆ ಉಪಯೋಗಿಸುವುದೆಲ್ಲವೂ ಗಂಭೀರ ಅಪರಾಧವಾಗಿದೆ. ವನ್ಯಜೀವಿ ಸಂರಕ್ಷಣಾ ಕಾಯ್ದೆ, 1972 ಸೆಕ್ಷನ್ 49B: ವನ್ಯಜೀವಿಯ ಭಾಗಗಳ ಮಾರಾಟ ಅಥವಾ ವ್ಯಾಪಾರವು ನಿಷಿದ್ಧ. ಯಾವುದೇ ವ್ಯಕ್ತಿ ಅಥವಾ ಅಂಗಡಿ ನವಿಲು ಗರಿಯನ್ನು ಮಾರಾಟ ಮಾಡುತ್ತಿದ್ದರೆ, ಅದು ಸ್ಪಷ್ಟವಾದ ಕಾನೂನು ಉಲ್ಲಂಘನೆಯಾಗಿರುತ್ತದೆ ಎಂದು ದೂರುದಾರರು ಆಪಾದಿಸಿದ್ದಾರೆ.ಅಜಾಗೃಕತೆ, ಇಲಾಖೆಗೆ ಹಸ್ತಾಂತರ: ನವಿಲು ಗರಿ ಹಾರ ಧರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಕೆ.ಶಿವನಗೌಡ ನಾಯಕ ಪ್ರತಿಕ್ರಿಯಿಸಿದ್ದು, ಅಜಾಗೃಕತೆಯಿಂದ ಹಾರ ಹಾಕಿಸಿಕೊಂಡಿದ್ದು, ಅದನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸಲಾಗುವುದು ಎಂದು ತಿಳಿಸಿದ್ದಾರೆ.