ಕಾರ್ಯಕರ್ತರು, ಹಿತೈಷಿಗಳಿಂದ ಹುಟ್ಟುಹಬ್ಬ ವಿಜೃಂಭಣೆ । ನೆಚ್ಚಿನ ನಾಯಕನ ‘ಕೈ’ ಬಲಪಡಿಸಲು ಮುಖಂಡರ ಅಭಯ ಕನ್ನಡಪ್ರಭ ವಾರ್ತೆ ಹನೂರು
ಪಟ್ಟಣದ ಕಾಂಗ್ರೆಸ್ ಕಚೇರಿಗೆ ಆಗಮಿಸಿದ ಮಾಜಿ ಶಾಸಕ ಆರ್. ನರೇಂದ್ರರವರನ್ನು ಪಕ್ಷದ ಮುಖಂಡರು, ಕಾರ್ಯಕರ್ತರು, ಹಿತೈಷಿಗಳು ಶಾಲು, ಹಾರ, ಪೇಟ ತೋಡಿಸಿ, ಕೇಕ್ ಕತ್ತರಿಸುವ ಮೂಲಕ ವಿಶೇಷವಾಗಿ ಆಚರಣೆ ಮಾಡಿದರು.
ಪಟ್ಟಣ ಪಂಚಾಯಿತಿ ಸದಸ್ಯ ಗಿರೀಶ್ ಮಾತನಾಡಿ, ನಮ್ಮ ನಾಯಕ ಆರ್. ನರೇಂದ್ರ ಅವರು ಕಳೆದ 15 ವರ್ಷಗಳಲ್ಲಿ ಸತತ ಮೂರು ಬಾರಿ ಶಾಸಕರಾಗಿ ಹನೂರು ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಹಗಲಿರುಳು ಶ್ರಮಿಸಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪರಾಭವಗೊಂಡರೂ ಕ್ಷೇತ್ರದ ಕಾರ್ಯಕರ್ತರು, ಮುಖಂಡರ ಜೊತೆ ನಿರಂತರ ಸಂಪರ್ಕದಲ್ಲಿರುವುದರಿಂದ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಹನೂರು ವಿಧಾನಸಭಾ ಕ್ಷೇತ್ರದಿಂದ 37 ಸಾವಿರ ಮತಗಳ ಮುನ್ನಡೆ ಕೊಟ್ಟಿದ್ದೇವೆ. ಅವರಿಗೆ ದೇವರು ಆರೋಗ್ಯ ಭಾಗ್ಯ ನೀಡಲಿ ಎಂದು ಶುಭ ಕೋರಿದರು.ರಾಮಪುರ ಬ್ಲಾಕ್ ಪರಿಶಿಷ್ಟ ಜಾತಿ ವಿಭಾಗದ ಅಧ್ಯಕ್ಷ ರಾಮಲಿಂಗಂ ಮಾತನಾಡಿ, ಮಾಜಿ ಶಾಸಕ ಆರ್. ನರೇಂದ್ರರವರು ಕ್ಷೇತ್ರದ ಎಲ್ಲಾ ಸಮಾಜದವರನ್ನು ಒಗ್ಗೂಡಿಸಿಕೊಂಡು, ಕುಟುಂಬದ ಸದಸ್ಯರು ಎಂದುಕೊಂಡು ಎಲ್ಲರಿಗೂ ಎಲ್ಲ ರೀತಿಯ ಅವಕಾಶ ಕಲ್ಪಿಸಿ ಕೊಟ್ಟಿದ್ದಾರೆ. ಇವರ ಮಾರ್ಗದರ್ಶನದಲ್ಲಿ ಮುಂದಿನ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯಿತಿ ಚುನಾವಣೆಯನ್ನು ಎದುರಿಸಲು ಈಗಿನಿಂದಲೇ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದೇವೆ. ಲೋಕಸಭಾ ಚುನಾವಣೆಯಲ್ಲಿ ಮಾರ್ಟಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ 6 ಸಾವಿರ ಮತಗಳ ಮುನ್ನಡೆ ನೀಡಿದ್ದೇವೆ. ಮುಂದಿನ ಚುನಾವಣೆಯವರೆಗೆ ಇನ್ನಷ್ಟು ಸಂಘಟನೆ ಮಾಡಿ ನಮ್ಮ ನಾಯಕರಾದ ಆರ್. ನರೇಂದ್ರ ರವರ ಕೈ ಬಲಪಡಿಸುತ್ತೇವೆ ಎಂದು ತಿಳಿಸಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಇಗ್ನೇಶಿ ಮತ್ತು ಸದಸ್ಯ ಸುರೇಶ್, ಪಟ್ಟಣ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಮಾದೇಶ್, ಹನೂರು ಬ್ಲಾಕ್ ಕಾರ್ಯದರ್ಶಿ ಮಾದೇಶ್, ಮುಖಂಡರಾದ ಎಲ್ ರಾಜೇಂದ್ರ,, ಚಿಕ್ಕ ತಮ್ಮಯ್ಯ, ರಮೇಶ್ ನಾಯ್ಡು, ರವೀಂದ್ರ, ನವೀನ್ ನಟರಾಜು, ರಾಜು, ರಾಯಪ್ಪ, ಯುವ ಮುಖಂಡರಾದ ವೆಂಕಟೇಶ್, ರಾಜೇಶ್ ಸೇರಿ ಇನ್ನಿತರರು ಹಾಜರಿದ್ದರು.