ಕನ್ನಡಪ್ರಭ ವಾರ್ತೆ ಮಂಡ್ಯ
ಕರ್ನಾಟಕ ಇಬ್ಭಾಗವಾಗಬೇಕೆಂದು ಬಯಸುವ ಕೆಲವು ರಾಜಕಾರಣಿಗಳು ಒಮ್ಮೆ ನಾಲ್ವಡಿ ಕೃಷ್ಣರಾಜ ಒಡೆಯರ್ ಆಡಳಿತ ಶೈಲಿಯನ್ನು ನೋಡಿ ಕಲಿಯಬೇಕು ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ತಿಳಿಸಿದರು.ನಗರದ ಕರ್ನಾಟಕ ಸಂಘದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ನಂಜಮ್ಮ ಮೋಟೇಗೌಡ ಚಾರಿಟಬಲ್ ಮತ್ತು ಎಜುಕೇಷನ್ ಟ್ರಸ್ಟ್ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.
ಕರ್ನಾಟಕ ರಾಜ್ಯ ಎರಡು ಭಾಗ ಆಗಲಿ ಎನ್ನುವ ಮಾತನ್ನು ಉಮೇಶ್ ಕತ್ತಿ ಅಂದು ಹೇಳಿದ್ದರು. ಅಖಂಡ ಕರ್ನಾಟಕಕ್ಕೆ ಹೋರಾಟ ಮಾಡಿದ ಮಹಾನ್ ನಾಯಕರು ಕಟ್ಟಿದ ನಾಡನ್ನು ನೀವು ಒಡೆದು ಓಳು ಮಾಡುವುದು ಬೇಡ ಎನ್ನುವ ಮಾತನ್ನು ಅವರಿಗೆ ನಾನು ಹೇಳಿದ್ದೆ. ಕರ್ನಾಟಕವನ್ನು ವಿಭಜನೆ ಮಾಡಿ ಮಣ್ಣು ತಿನ್ನಬೇಕಾ?, ಉತ್ತರ ಕರ್ನಾಟಕ ಮತ್ತು ಹೈದರಾಬಾದ್ ಕರ್ನಾಟಕ ಹಾಳಾಗಬೇಕಾದರೆ ನಾವು ಕಾರಣವೇ ಹೊರತು ಜನರು ಮತ್ತು ಸರ್ಕಾರಗಳಲ್ಲ ಎಂದು ಪ್ರತಿಪಾದಿಸಿದರು.ಮಂಡ್ಯ ಜಿಲ್ಲೆಗೆ ಕೊಡುಗೆ ನೀಡಿದ ಕೆ.ವಿ.ಶಂಕರಗೌಡ ಅವರ ಮಾದರಿಯನ್ನಾಗಿಟ್ಟುಕೊಂಡು ನಾನು ಶಿಕ್ಷಣ ಸಚಿವನಾದೆ. ನನ್ನ ೨೦ ತಿಂಗಳ ಅವಧಿಯಲ್ಲಿ ಬಿಸಿಯೂಟ ಯೋಜನೆ, ಶಿಕ್ಷಕರ ನೇಮಕ ಸೇರಿದಂತೆ ಶಾಲೆಗಳ ಅಭಿವೃದ್ಧಿಗೆ ಶ್ರಮಿಸಿದೆ. ನನ್ನ ಮೇಲೆ ನಂಬಿಕೆಯಿಟ್ಟು ಎಚ್.ಡಿ.ದೇವೇಗೌಡ ಅವರ ನಂಬಿಕೆಯನ್ನು ಉಳಿಸಿಕೊಂಡೆ. ಶಿಕ್ಷಕರು ನೆಮ್ಮದಿಯಾಗಿದ್ದರೆ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಉತ್ತಮ ಪಾಠ ಮಾಡುತ್ತಾರೆ ಎನ್ನುವುದನ್ನು ಮನಗಂಡು ಶಿಕ್ಷಕರ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಸಾಗಿ ಯಶಸ್ವಿಯಾದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಪ್ರಶಸ್ತಿ ಪಡೆದ ನಾನು ಅವರ ಹೆಸರಿನ ಪ್ರಶಸ್ತಿಯಿಂದಲೇ ನನ್ನ ಗೌರವ ಹೆಚ್ಚಿದೆ. ಈ ಪ್ರಶಸ್ತಿಯನ್ನು ಮನೆಯಲ್ಲಿಟ್ಟು ಪೂಜಿಸುತ್ತೇನೆ. ನಾಲ್ವಡಿ ಅವರನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳುವ ಪ್ರಯತ್ನ ಮಾಡಬೇಕು. ಅವರು ಹಾಕಿಕೊಟ್ಟ ಆಡಳಿತದ ಮಾದರಿ ನಮಗೆ ಪ್ರೇರಣೆ ಎಂದರು.ಕರ್ನಾಟಕ ಸಂಘದ ಅಧ್ಯಕ್ಷ ಡಾ.ಪ್ರೊ.ಜಯಪ್ರಕಾಶಗೌಡ ಮಾತನಾಡಿ, ಉತ್ತರ ಕರ್ನಾಟಕ ಭಾಗಕ್ಕೆ ಸೇರಿದ ಬಸವರಾಜ ಹೊರಟ್ಟಿ ಅವರಿಗೆ ದಕ್ಷಿಣ ಕರ್ನಾಟಕದ ಪ್ರಮುಖವಾಗಿ ಹತ್ತು ಜಿಲ್ಲೆಗಳನ್ನು ಒಳಗೊಂಡ ಈ ಪ್ರದೇಶದಲ್ಲಿ ಆಳ್ವಿಕೆ ಮಾಡಿದ ರಾಜರ್ಷಿ ನಾಲ್ವಡಿ ಅವರ ಹೆಸರಿನಲ್ಲಿ ಪ್ರಶಸ್ತಿ ನೀಡುವ ಮೂಲಕ ಅಖಂಡ ಕರ್ನಾಟಕದ ಕಲ್ಪನೆಗೆ ಈ ಕಾರ್ಯಕ್ರಮ ಸಾಕ್ಷಿಯಾಗಿದೆ ಎಂದು ಸ್ಮರಿಸಿದರು.
ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಮಾತನಾಡಿ, ಬಸವರಾಜ ಹೊರಟ್ಟಿ ಅವರು ಅವ್ವ ಸೇವಾ ಟ್ರಸ್ಟ್ ಸ್ಥಾಪಿಸಿ ಜನರಿಗೆ ದನಿಯಾದರು. ನಂತರ ಎಂಟು ಬಾರಿ ಶಾಸಕರಾಗಿ, ವಿವಿಧ ಖಾತೆಗಳ ಸಚಿವರಾಗಿ ಇಂದು ಸಭಾಪತಿಯಾಗಿ ಅತ್ಯಂತ ಮಾರ್ಗದರ್ಶಕರಾಗಿ ಕೆಲಸ ಮಾಡುತ್ತಿದ್ದಾರೆ. ೫೦ ವರ್ಷದ ರಾಜಕೀಯ ಮುಗಿಸಿ ಮುನ್ನುಗ್ಗುತ್ತಿರುವ ಹೊರಟ್ಟಿ ಅವರ ವಿಶ್ವಾಸ ಮೆಚ್ಚುವಂತದ್ದು, ಶಿಕ್ಷಣ ಕ್ಷೇತ್ರದ ಆಳ ಮತ್ತು ಅಗಲವನ್ನು ಬಸವರಾಜ ಹೊರಟ್ಟಿ ಅವರು ತಿಳಿದಿದ್ದಾರೆ ಎಂದು ಶ್ಲಾಘಿಸಿದರು.ಮಾಜಿ ಸಚಿವ ಡಿ.ಸಿ.ತಮ್ಮಣ್ಣ ಅವರು ಸಭಾಪತಿ ಬಸವರಾಜ ಹೊರಟ್ಟಿ ಅವರಿಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಶಸ್ತಿ ಪ್ರದಾನ ಮಾಡಿದರು. ಶಿಕ್ಷಕ ಮತ್ತು ಲೇಖಕ ಲೋಕೇಶ್ ಚಂದಗಾಲು ಅವರ ನಾಲ್ವಡಿ ನಾಡು’ ಕೃತಿಯನ್ನು ಬಿಡುಗಡೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಕೆ.ಎಸ್.ರಾಜಣ್ಣ, ಟ್ರಸ್ಟ್ ಅಧ್ಯಕ್ಷ ಕೆ.ಟಿ.ಹನುಮಂತು ಭಾಗವಹಿಸಿದ್ದರು.