ಮುಂಡಗೋಡ: ಕಳಪೆ ಕಳೆನಾಶಕವನ್ನು ನೀಡಿ ರೈತರನ್ನು ವಂಚಿಸಲಾಗಿದೆ ಎಂದು ಆರೋಪಿಸಿ ಪಾಳಾ ಹೋಬಳಿ ಕೋಡಂಬಿ ಭಾಗದ ರೈತರು ಸೋಮವಾರ ತಾಲೂಕಿನ ಪಾಳಾ ಕ್ರಾಸ್ನ ಶಿರಸಿ- ಹುಬ್ಬಳ್ಳಿ ರಸ್ತೆತಡೆದು ಔಷಧ ಕಂಪನಿಗಳ ವಿರುದ್ಧ ಪ್ರತಿಭಟನೆ ನಡೆಸಿದರು.
ಪೊಲೀಸರು ರೈತರನ್ನು ಸಮಾಧಾನಪಡಿಸಲೆತ್ನಿಸಿದರೂ ಇದಕ್ಕೆ ಜಗ್ಗದ ಪ್ರತಿಭಟನಾಕಾರರು, ಸಮಸ್ಯೆ ಪರಿಹಾರವಾಗುವರೆಗೂ ಪ್ರತಿಭಟನೆ ಮುಂದುವರಿಸುವುದಾಗಿ ಪಟ್ಟು ಹಿಡಿದರು. ಬಳಿಕ ಮುಂಡಗೋಡ ಸಹಾಯಕ ಕೃಷಿ ಅಧಿಕಾರಿ ಎಂ.ಎಸ್. ಕುಲಕರ್ಣಿ ಸ್ಥಳಕ್ಕಾಗಮಿಸಿ ಜು. ೧೬ರ ಬೆಳಗ್ಗೆ ಔಷಧ ಕಂಪನಿಯವರನ್ನು ಕೋಡಂಬಿ ಗ್ರಾಮಕ್ಕೆ ಕರೆಸಿ ಜಿಲ್ಲಾ ಜಂಟಿ ಸಹಾಯಕ ಕೃಷಿ ನಿರ್ದೇಶಕರು ಹಾಗೂ ಮುಂಡಗೋಡ ತಹಸೀಲ್ದಾರ್ ನೇತೃತ್ವದಲ್ಲಿ ಸಭೆ ನಡೆಸಿ ಸೂಕ್ತ ಪರಿಹಾರ ಒದಗಿಸುವುದಾಗಿ ಲಿಖಿತವಾಗಿ ಭರವಸೆ ನೀಡಿದ ಬಳಿಕ ಪ್ರತಿಭಟನೆಯನ್ನು ಕೈಬಿಡಲಾಯಿತು.
ಸತೀಶ ನಾಯ್ಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ, ರಾಜ್ಯ ಕಾರ್ಯದರ್ಶಿ ರಾಘವೇಂದ್ರ ನಾಯ್ಕ, ರೈತ ಮುಖಂಡ ಹಾಲಪ್ಪ ಕೊಡಣ್ಣನವರ, ಮಹೇಶ ಹೊಸಕೊಪ್ಪ, ಕೃಷ್ಣ ಕ್ಯಾರಕಟ್ಟಿ, ಬಸವಂತ ಪೂಜಾರ, ಶಂಕ್ರಪ್ಪ ಗಾಣಿಗ, ಯಮನಪ್ಪ ನಾಯ್ಕ, ಮರ್ದಾನಸಾಬ ಜನಗೇರಿ ಸೇರಿದಂತೆ ಹಲವಾರು ರೈತರು ಇದ್ದರು.ರಸ್ತೆ ಸಂಚಾರಕ್ಕೆ ಅಡಚಣೆಸುಮಾರು ೩ ಗಂಟೆಗಳ ಕಾಲ ರಸ್ತೆತಡೆ ನಡೆಸಿದ್ದರಿಂದ ಸಂಚಾರ ಅಸ್ತವ್ಯಸ್ತಗೊಂಡಿದ್ದರಿಂದ ಬಸ್, ಕಾರು ಮುಂತಾದ ವಾಹನಗಳು ಮುಂದೆ ಹೋಗಲಾಗದೆ ಸಾಲು ಸಾಲಾಗಿ ಇಲ್ಲಿಯೇ ನಿಲ್ಲಬೇಕಾಯಿತು. ಇದರಿಂದ ಪ್ರಯಾಣಿಕರು ಪರದಾಡಬೇಕಾಯಿತು. ಮುಂಡಗೋಡ ಸಿಪಿಐ ರಂಗನಾಥ ನೀಲಮ್ಮನವರ ನೇತೃತ್ವದಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗಿತ್ತು.