ಬಡವರಿಗೆ ಉಚಿತ ಆಂಬ್ಯುಲೆನ್ಸ್‌ ಮಾದರಿ ಸೇವೆ

KannadaprabhaNewsNetwork | Published : Aug 10, 2024 1:38 AM

ಸಾರಾಂಶ

ಹೊನ್ನಾಳಿ ಪಟ್ಟಣದ ಸಮಾನ ಮನಸ್ಕ 16 ಮುಸ್ಲಿಂ ಯುವಕರು ಯೂನಿಟಿ ಚಾರಿಟೇಬಲ್ ಟ್ರಸ್ಟ್ ರಚಿಸಿಕೊಂಡಿದ್ದು, ಟ್ರಸ್ಟ್‌ ಮೂಲಕ ಕಡುಬಡವರಿಗೆ ಉಚಿತ ಆಂಬ್ಯುಲೆನ್ಸ್ ಮತ್ತು ಶವ ಸಂರಕ್ಷಣೆ ಪೆಟ್ಟಿಗೆ ಸೇವೆ ಒದಗಿಸಲು ಮುಂದಾಗಿದ್ದಾರೆ. ಇದು ಇತರರಿಗೂ ಮಾದರಿ ಜನಸೇವೆಯಾಗಿದೆ ಎಂದು ಮುಸ್ಲಿಂ ಸಮಾಜದ ಮೌಲ್ವಿ ಅಕೀಲ್ ರಾಜಾ ಹೇಳಿದರು.

- ಯೂನಿಟಿ ಚಾರಿಟಬಲ್ ಟ್ರಸ್ಟ್ ಉದ್ಘಾಟಿಸಿ ಮೌಲ್ವಿ ಅಕೀಲ್ ರಾಜಾ ಶ್ಲಾಘನೆ - - - ಕನ್ನಡಪ್ರಭ ವಾರ್ತೆ ಹೊನ್ನಾಳಿ

ಪಟ್ಟಣದ ಸಮಾನ ಮನಸ್ಕ 16 ಮುಸ್ಲಿಂ ಯುವಕರು ಯೂನಿಟಿ ಚಾರಿಟೇಬಲ್ ಟ್ರಸ್ಟ್ ರಚಿಸಿಕೊಂಡಿದ್ದು, ಟ್ರಸ್ಟ್‌ ಮೂಲಕ ಕಡುಬಡವರಿಗೆ ಉಚಿತ ಆಂಬ್ಯುಲೆನ್ಸ್ ಮತ್ತು ಶವ ಸಂರಕ್ಷಣೆ ಪೆಟ್ಟಿಗೆ ಸೇವೆ ಒದಗಿಸಲು ಮುಂದಾಗಿದ್ದಾರೆ. ಇದು ಇತರರಿಗೂ ಮಾದರಿ ಜನಸೇವೆಯಾಗಿದೆ ಎಂದು ಮುಸ್ಲಿಂ ಸಮಾಜದ ಮೌಲ್ವಿ ಅಕೀಲ್ ರಾಜಾ ಹೇಳಿದರು.

ಪಟ್ಟಣದ ಜಾಮೀಯಾ ಮಸೀದಿ ಆವರಣದಲ್ಲಿ ನಡೆದ ಯೂನಿಟಿ ಚಾರಿಟಬಲ್ ಟ್ರಸ್ಟ್ ಉದ್ಘಾಟನೆ ಹಾಗೂ ಆಂಬ್ಯುಲೆನ್ಸ್ ಸೇವೆಗೆ ಚಾಲನೆ ನೀಡಿ ಅವರು ಮಾತನಾಡಿದರು. ಸಮಾಜಮುಖಿ ಸೇವೆಗಳಿಗೆ ಯಾವುದೇ ಧರ್ಮ, ಜಾತಿಗಳ ಬೇಧ-ಭಾವಗಳು ಇರುವುದಿಲ್ಲ. ದೇವರ ದೃಷ್ಟಿಯಲ್ಲಿ ಎಲ್ಲರೂ ಒಂದೇ ಎನ್ನುವ ತತ್ವದಡಿ ಈ ಚಾರಿಟೇಬಲ್ ಸೇವೆ ನೀಡಲಾಗಿದೆ. ಕಡುಬಡವರಿಗೆ ಸಂಪೂರ್ಣ ಉಚಿತ ಸೇವೆ ಒದಗಿಸಲು ಮುಂದಾಗಿರುವುದು ಅತ್ಯಂತ ಶ್ಲಾಘನೀಯ ಎಂದರು.

ಟ್ರಸ್ಟ್‌ ಅಧ್ಯಕ್ಷ ಮುಜಾಮಿಲ್ ಅಹಮ್ಮದ್ ಖಾನ್ ಮಾತನಾಡಿ, ಸಾರ್ವಜನಿಕರಿಗೆ ಸರ್ಕಾರಗಳು ಸಾಕಷ್ಟು ಸೇವೆಗಳನ್ನು ನೀಡುತ್ತಿವೆ. ಆದರೂ, ಕೆಲವೊಂದು ಸಂದರ್ಭಗಳಲ್ಲಿ ತುರ್ತು ಆರೋಗ್ಯ ಸೇವೆ ಭಾಗವಾಗಿರುವ ಆಂಬ್ಯುಲೆನ್ಸ್ ಸೇವೆ ತತ್‌ಕ್ಷಣಕ್ಕೆ ಸಿಗುವುದು ಕಷ್ಟವಾಗುತ್ತದೆ. ಇತ್ತೀಚಿನ ಅನೇಕ ಪ್ರಾಕೃತಿಕ ವಿಕೋಪ ಘಟನೆ ಗಮನಿಸಿದರೆ ಸಮಾಜಕ್ಕೆ ಆಂಬ್ಯುಲೆನ್ಸ್‌ ಸೇವೆ, ಅದರಲ್ಲೂ ತೀರಾ ಕಡುಬಡವರ ಕುಟುಂಬಗಳಿಗೆ ಅಗತ್ಯವಿದೆ ಎಂದರು.

ಟ್ರಸ್ಟ್ ಸೇವೆ ಧರ್ಮ, ಜಾತಿ ಎಂಬ ಬೇಧವಿಲ್ಲದೇ ಎಲ್ಲ ಸಮಾಜದವರಿಗೆ ಮುಕ್ತವಾಗಿದೆ. ಆಂಬ್ಯುಲೆನ್ಸ್‌ನಲ್ಲಿ ಆಕ್ಸಿಜನ್, ಫ್ರೀಜರ್ ವ್ಯವಸ್ಥೆಗಳು ಇರುತ್ತವೆ. ತೀರಾ ಕಡುಬಡವರು, ಏನೂ ಕೊಡಲಾಗದ ಕುಟುಂಬಗಳಿಗೆ ದೂರದ ಊರುಗಳ ಆಸ್ಪತ್ರೆಗಳಿಗೆ ರೋಗಿಗಳನ್ನು ಸಕಾಲದಲ್ಲಿ ಸಾಗಿಸಲು ಸಂಪೂರ್ಣ ಉಚಿತ ಸೇವೆ ನೀಡಲಾಗುವುದು. ಮಧ್ಯಮ ವರ್ಗದವರು ಬಾಡಿಗೆ ರೂಪದಲ್ಲಿ ಅಲ್ಲದಿದ್ದರೂ, ಕೊನೆ ಪಕ್ಷ ವಾಹನದ ಇಂಧನ ಮತ್ತು ಚಾಲಕನ ಖರ್ಚು ನೀಡುವ ಶಕ್ತಿಯಿದ್ದವರು ತಮ್ಮ ಕೈಯಿಂದಾದ ಹಣ ಪಾವತಿ ಮಾಡಿ ಸೇವೆ ಪಡೆಯಬಹುದು ಎಂದು ತಿಳಿಸಿದರು.

ಯೂನಿಟಿ ಚಾರಿಟೇಬಲ್ ಟ್ರಸ್ಟ್‌ನ ಆಂಬ್ಯುಲೆನ್ಸ್‌ ಸೇವೆ ಅಗತ್ಯವಿದ್ದವರು ಮೊ.96863- 93788 ಹಾಗೂ ಮೊ.72044-39118 ಈ ದೂರವಾಣಿ ಸಂಖ್ಯೆಗಳಿಗೆ ಸಂಪರ್ಕಿಸಿ ಹಗಲು-ರಾತ್ರಿ ಸೇವೆ ಪಡೆಯಬಹುದು ಎಂದರು.

ಟ್ರಸ್ಟ್ ಸದಸ್ಯರಾದ ಸರ್ವರ್ ಖಾನ್, ಮಹಮ್ಮದ್ ಆಶ್ರಫ್ ವುಲ್ಲಾ, ಆಲಿ ಅಕ್ಬರ್, ಮಹಮ್ಮದ್ ಮುಜಾಮಿಲ್, ಅಸದ್ ವುಲ್ಲಾ ಖಾನ್, ಇಮ್ತಿಯಾಜ್, ಜಾಮೀರ್ ಬಾಷಾ, ಹಿದಾಯತ್ ವುಲ್ಲಾ ಖಾನ್, ಅಫ್ಸರ್ ಅಹಮ್ಮದ್, ಇನಾಯತ್ ವುಲ್ಲಾ, ಮುಜ್ಮಿಲ್ ಖಾನ್, ಶಹಬಾಜ್, ಅದ್ನಾನ್, ತೌಶೀಪ್ ಅಹಮ್ಮದ್, ಫೈರೋಜ್ ಖಾನ್, ತನ್ವಿರ್ ಝಡ್., (ಚಾಲಕ) ಇದ್ದರು.

- - - -ಫೋಟೋ:

ಯೂನಿಟಿ ಚಾರಿಟೇಬಲ್ ಟ್ರಸ್ಟ್‌ನಿಂದ ಆರಂಭಿಸಲಾದ ಆಂಬ್ಯುಲೆನ್ಸ್‌ ಸೇವೆಗೆ ಮೌಲ್ವಿ ಅಕೀಲ್ ರಾಜಾ ಚಾಲನೆ ನಿಡಿದರು.

Share this article