ಮುಕ್ತ, ನ್ಯಾಯಸಮ್ಮತ ಚುನಾವಣೆಗೆ ಎಲ್ಲರ ಸಹಕಾರ ಅಗತ್ಯ:ಸೋಮೇಶೇಖರ್

KannadaprabhaNewsNetwork | Published : Jan 27, 2024 1:16 AM

ಸಾರಾಂಶ

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾ ಚುನಾವಣಾ ತರಬೇತಿ ಹಾಗೂ ನಿರ್ವಹಣಾ ಕೋಶದ ವತಿಯಿಂದ ಸಾರ್ವತ್ರಿಕ ಲೋಕಸಭಾ ಚುನಾವಣೆ-2024 ಸಂಬಂಧ ಅಧಿಕಾರಿಗಳಿಗೆ ತರಬೇತಿ ಕಾರ್ಯಾಗಾರ ಆಯೋಜಿಸಲಾಗಿತ್ತು.

- ಚುನಾವಣಾ ನೀತಿ ಸಂಹಿತೆ ಕುರಿತ ಅಧಿಕಾರಿಗಳ ತರಬೇತಿ ಕಾರ್ಯಾಗಾರದಲ್ಲಿ ಜಿಪಂ ಸಿಇಓ ಕನ್ನಡಪ್ರಭವಾರ್ತೆ ಚಿತ್ರದುರ್ಗ

ಮುಕ್ತ, ನ್ಯಾಯಸಮ್ಮತ ಹಾಗೂ ನಿರ್ಭೀತ ಚುನಾವಣೆ ನಡೆಸುವಲ್ಲಿ ಎಲ್ಲರ ಸಹಕಾರ ಮುಖ್ಯ. ಚುನಾವಣೆಗೆ ನೇಮಿಸಿದ ಅಧಿಕಾರಿಗಳು ಎಲ್ಲಾ ಪಕ್ಷ ಹಾಗೂ ಅಭ್ಯರ್ಥಿಗಳನ್ನು ಸಮಾನವಾಗಿ ಕಾಣಬೇಕು ಎಂದು ಚುನಾವಣೆ ನೀತಿ ಸಂಹಿತೆಯ ನೋಡಲ್ ಅಧಿಕಾರಿ ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಜೆ. ಸೋಮಶೇಖರ್ ಹೇಳಿದರು.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗದಲ್ಲಿ ಜಿಲ್ಲಾ ಚುನಾವಣಾ ತರಬೇತಿ ಹಾಗೂ ನಿರ್ವಹಣಾ ಕೋಶದ ವತಿಯಿಂದ ಸಾರ್ವತ್ರಿಕ ಲೋಕಸಭಾ ಚುನಾವಣೆ-2024 ಮಾದರಿ ನೀತಿ ಸಂಹಿತೆ ಕುರಿತು ಎಸ್‍ಎಸ್‍ಟಿ, ವಿಎಸ್‍ಟಿ, ಎಫ್‍ಎಸ್‍ಟಿ, ವಿವಿಟಿ ತಂಡವರಿಗೆ ಆಯೋಜಿಸಲಾದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಮಾದರಿ ನೀತಿ ಸಂಹಿತೆ ಪಾಲನೆಯಲ್ಲಿ ಎಸ್‍ಎಸ್‍ಟಿ (ಸ್ಯಾಟಿಕ್ ಸರ್ವೇಲೆನ್ಸ್ ಟೀಂ), ವಿಎಸ್‍ಟಿ (ವಿಡಿಯೋ ಸರ್ವೇಲೆನ್ಸ್ ಟೀಂ), ಎಫ್‍ಎಸ್‍ಟಿ (ಫ್ಲೈಯಿಂಗ್ ಸ್ಕ್ವಾಡ್), ವಿವಿಟಿ (ವಿಡಿಯೋ ವಿಜಿಲೆನ್ಸ್ ಟೀಂ) ತಂಡಗಳ ಪಾತ್ರ ಪ್ರಮುಖವಾಗಿದೆ. ಚುನಾವಣೆಗೆ ನೇಮಿಸಿದ ಅಧಿಕಾರಿಗಳು ಎಲ್ಲಾ ಪಕ್ಷ ಹಾಗೂ ಅಭ್ಯರ್ಥಿಗಳನ್ನು ಸಮಾನವಾಗಿ ಕಾಣಬೇಕು. ಇದುವರೆಗೂ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಯಾಗದೇ ಇರುವ ಅರ್ಹ ಮತದಾರರು ನಾಮಪತ್ರ ಸಲ್ಲಿಸುವ ಅಂತಿಮ ದಿನಾಂಕದವರೆವಿಗೂ ಸೇರ್ಪಡೆ ಮಾಡಿಕೊಳ್ಳಲು ಅವಕಾಶವಿರುತ್ತದೆ ಎಂದರು.

ಚುನಾವಣೆಯ ಜಿಲ್ಲಾ ಮಾಸ್ಟರ್ ಟ್ರೈನರ್ ಎನ್.ನಾಗಭೂಷಣ್ ತರಬೇತಿ ನೀಡಿ, ಸಾಮಾನ್ಯ ನೀತಿ ಸಂಹಿತೆ, ಪಕ್ಷಗಳ ಸಭೆಗಳು ಹಾಗೂ ಸಮಾರಂಭಗಳು, ಚುನಾವಣಾ ರ್‍ಯಾಲಿ ಮತ್ತು ಮೆರವಣಿಗೆಗಳು, ಮತದಾನ ಪ್ರಕ್ರಿಯೆ ದಿನದ ನೀತಿ ಸಂಹಿತೆ, ಮತದಾನ ಕೇಂದ್ರದ ನೀತಿ ಸಂಹಿತೆ, ಸ್ಟಾರ್ ಪ್ರಚಾರಕರು ಮುಂತಾದವುಗಳಲ್ಲಿ ಮಾದರಿ ನೀತಿ ಸಂಹಿತೆ ಯನ್ನು ಅಗತ್ಯವಾಗಿ ಪಾಲಿಸಬೇಕಾಗಿರುತ್ತದೆ. ಚುನಾವಣಾ ವೇಳಾಪಟ್ಟಿ ಪ್ರಕಟವಾದ ದಿನದಿಂದ ಚುನಾವಣಾ ಮತ ಎಣಿಕೆಯ ದಿನದವರೆವಿಗೂ ಮಾದರಿ ನೀತಿ ಸಂಹಿತೆ ಪ್ರಕ್ರಿಯೆ ಅನುಷ್ಠಾನದಲ್ಲಿರುತ್ತದೆ. ನೀತಿ ಸಂಹಿತೆಯ ಸಂದರ್ಭದಲ್ಲಿ ಜನರಿಗೆ ಹಣ ಹಂಚಿಕೆ, ಉಡುಗೊರೆ ಹಂಚಿಕೆ, ಊಟದ ವ್ಯವಸ್ಥೆಗಳು ಮುಂತಾದವುಗಳು ಜರುಗದ ರೀತಿಯಲ್ಲಿ ಎಲ್ಲಾ ತಂಡಗಳು ವ್ಯವಸ್ಥಿತವಾಗಿ ಕಾರ್ಯ ನಿರ್ವಹಿಸಬೇಕಾಗುತ್ತದೆ. ಯಾವುದೇ ವ್ಯಕ್ತಿ ಅಥವಾ ವಾಹನದಲ್ಲಿ ಸೂಕ್ತ ದಾಖಲೆಗಳಿಲ್ಲದೇ ರು. 50 ಸಾವಿರಕ್ಕಿಂತ ಹೆಚ್ಚು ನಗದನ್ನು ಕೊಂಡೊಯ್ಯುವಂತಿಲ್ಲ, ಕೊಂಡೊಯ್ದ ಪಕ್ಷದಲ್ಲಿ ವ್ಯಕ್ತಿಯಿಂದ ಹಣ ವಶಪಡಿಸಿಕೊಂಡು ದೂರು ದಾಖಲಿಸಬೇಕು ಎಂದರು.

ತರಬೇತಿ ಕಾರ್ಯಕ್ರಮದಲ್ಲಿ ಬೆಳಿಗ್ಗೆ ಮೊಳಕಾಲ್ಕೂರು, ಚಳ್ಳಕೆರೆ, ಹಿರಿಯೂರು ವಿಧಾನಸಭಾ ಕ್ಷೇತ್ರದ ಅಧಿಕಾರಿಗಳಿಗೆ ಹಾಗೂ ಮಧ್ಯಾಹ್ನ ಚಿತ್ರದುರ್ಗ, ಹೊಸದುರ್ಗ, ಹೊಳಲ್ಕೆರೆ ವಿಧಾನಸಭಾ ಕ್ಷೇತ್ರದ ಅಧಿಕಾರಿಗಳಿಗೆ ತರಬೇತಿ ನೀಡಲಾಯಿತು.

ಸಹಾಯಕ ಚುನಾವಣಾಧಿಕಾರಿಗಳಾದ ಮಹೇಂದ್ರ ಕುಮಾರ್, ಆನಂದ್, ಜಿಲ್ಲಾಧಿಕಾರಿಗಳ ತರಬೇತಿ ನಿರ್ವಹಣಾ ಕೋಶದ ನೋಡಲ್ ಅಧಿಕಾರಿ ಜಗದೀಶ್ ಹೆಬ್ಬಳ್ಳಿ, ಜಿಲ್ಲಾ ಚುನಾವಣಾ ಶಿರಸ್ತೇದಾರ ಮಲ್ಲಿಕಾರ್ಜನ ಉಪಸ್ಥಿತರಿದ್ದರು. ಮಂಜುನಾಥ್ ಎಸ್.ಕೆ ರವರು ಸ್ವಾಗತಿಸಿದರು. ಆರ್.ರವೀಂದ್ರ ವಂದನೆ ಸಲ್ಲಿಸಿದರು. ನಾಗೇಂದ್ರ ಚೌದರಿ ಕಾರ್ಯಕ್ರಮ ನಿರೂಪಿಸಿದರು.----------

ಪೋಟೋ ಕ್ಯಾಪ್ಸನ್- 26 ಸಿಟಿಡಿ10: ಜಿಲ್ಲಾ ಪಂಚಾಯಿತಿ ಸಭಾಂಗದಲ್ಲಿ ಜಿಲ್ಲಾ ಚುನಾವಣಾ ತರಬೇತಿ ಹಾಗೂ ನಿರ್ವಹಣಾ ಕೋಶದ ವತಿಯಿಂದ ಸಾರ್ವತ್ರಿಕ ಲೋಕಸಭಾ ಚುನಾವಣೆ-2024 ಸಂಬಂಧ ಆಯೋಜಿಸಲಾದ ತರಬೇತಿ ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದ ಅಧಿಕಾರಿಗಳು.

Share this article