ಕನಕಗಿರಿ: ಅಂದಿನ ಕೆಚ್ಚೆದೆಯ ಹೋರಾಟಗಳೇ ನಮ್ಮ ಸುಖ ಜೀವನಕ್ಕೆ ನಾಂದಿಯಾಗಿದ್ದು, ಸ್ವಾತಂತ್ರ್ಯಕ್ಕಾಗಿ ಹೋರಾಡಿದವರನ್ನು ಸ್ಮರೀಸಿದರೆ ನಮ್ಮ ಬದುಕು ಸಾರ್ಥಕವಾಗಲಿದೆ ಎಂದು ತಹಸೀಲ್ದಾರ ಚಂದ್ರಶೇಖರ ಗಾಳಿ ಹೇಳಿದರು.
ಅನೇಕ ಹೋರಾಟಗಾರರ ತ್ಯಾಗ, ಬಲಿದಾನದಿಂದ ನಮ್ಮ ದೇಶಕ್ಕೆ ಸ್ವಾತಂತ್ರ್ಯ ದೊರೆತಿದೆ. ನಾವು ಸ್ವಾತಂತ್ರ್ಯವಾಗಿದ್ದುಕೊಂಡು ದೇಶದ ಬೆಳವಣಿಗೆಗೆ ಮುಂದಾಗಬೇಕಿದೆ. ಯುವ ಸಮೂಹ ಜವಾಬ್ದಾರಿ ಅರಿತು ಮುನ್ನಡೆದರೆ ರಾಷ್ಟ್ರ ಪರಿವರ್ತನೆಯತ್ತ ಸಾಗಲಿದೆ ಎಂದರು.
ಇನ್ನೂ ರಾಜ್ಯದ ನಾನಾ ಜಿಲ್ಲೆಗಳಲ್ಲಿ ಬರ ಆವರಿಸಿದ್ದು, ಈ ಪೈಕಿ ನಮ್ಮ ತಾಲೂಕು ಬರಪೀಡಿತ ತಾಲೂಕು ಪ್ರದೇಶವೆಂದು ಘೋಷಣೆಯಾಗಲಿದೆ. ಈಗಾಗಲೇ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದ್ದು, ಅದರಂತೆ ಸರ್ಕಾರ ಕೆಲವೇ ದಿನಗಳಲ್ಲಿ ಬರಪೀಡಿತ ಪ್ರದೇಶವಾರು ಘೋಷಣೆ ಮಾಡಲಿದ್ದು, ಅದರಲ್ಲಿ ನಮ್ಮ ಕನಕಗಿರಿ ತಾಲೂಕು ಸೇರ್ಪಡೆಯಾಗಲಿದೆ ಎಂದು ತಿಳಿಸಿದರು.ನಂತರ ಪಪಂ ಅಧ್ಯಕ್ಷೆ ತನುಶ್ರೀ ಟಿಜೆ ರಾಮಚಂದ್ರ ಮಾತನಾಡಿ, ನನ್ನ ಪತಿ ಇದೇ ಶಾಲೆಯಲ್ಲಿ ಓದಿದ್ದು, ನಾನು ಪಪಂ ಅಧ್ಯಕ್ಷೆಯಾಗಿ ಇದೇ ಮೊದಲ ಬಾರಿಗೆ ಧ್ವಜಾರೋಹಣ ನೆರವೇರಿಸಿ ಮಾತನಾಡುತ್ತಿರುವುದಕ್ಕೆ ಸಂತಸವಾಗುತ್ತಿದೆ ಎಂದು ಮಾತು ಆರಂಭಿಸಿದ ಅವರು, ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹನೀಯರಿಗೆ ಸ್ಮರಿಸಿಕೊಳ್ಳುವ ಸುದಿನ ಇದಾಗಿದೆ. ಇವರ ತ್ಯಾಗ ಕೇವಲ ಒಂದು ದಿನ ಸೀಮಿತವಾಗಿರದೆ ನಿತ್ಯವೂ ದೇಶಕ್ಕಾಗಿ ಮಡಿದ ವೀರರನ್ನು ನೆನೆಸುವುದು ನಮ್ಮ ಧ್ಯೇಯವಾಗಬೇಕು. ಅಂದಾಗ ಮಾತ್ರ ನಾವು ಮತ್ತು ಸಮಾಜದಲ್ಲಿ ದೇಶಭಕ್ತಿಯ ಕುರಿತು ಜಾಗೃತಿ ಮೂಡಲಿದೆ ಎಂದರು.
ವಿಶೇಷ ಮತಪಟ್ಟಿ ಪರಿಷ್ಕರಣಿಯಲ್ಲಿ ಶ್ರಮಿಸಿದ ಬಿಎಲ್ ಒಗಳಿಗೆ, ಎಸ್ಎಸ್ಎಲ್ಸಿ ಮತ್ತು ಪಿಯುಸಿಯಲ್ಲಿ ಉತ್ತಮ ಫಲಿತಾಂಶ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು.