ರಫೀಕ್ ಕಲೇಗಾರ
ಹಿಂದೂ- ಮುಸ್ಲಿಂ ಬಾಂಧವರ ಹಬ್ಬಗಳು ಈ ಬಾರಿ ಭಾವಕ್ಯತೆ ಮೆರೆಯುವ ಸಂದರ್ಭಕ್ಕೆ ಸಾಕ್ಷಿಯಾಗಿವೆ. ಇಲ್ಲಿ ಉಭಯ ಸಮಾಜಗಳ ಧಾರ್ಮಿಕ ಹಬ್ಬಗಳನ್ನು ಶಾಂತಿ, ಸೌಹಾರ್ದದಿಂದ ಮತ್ತು ವಿಶಿಷ್ಟವಾಗಿ ಆಚರಿಸುವುದು ಬಹು ಹಿಂದಿನಿoದಲೂ ಬಂದ ಪರಂಪರೆ. ಈಗ ಗಣೇಶೋತ್ಸವ ಮತ್ತು ಈದ್ ಮಿಲಾದ್ ಹಬ್ಬಗಳು ಒಟ್ಟಿಗೆ ಆಚರಿಸಲ್ಪಟ್ಟಿವೆ.
ಹಿಂದೂ ಸಂಪ್ರದಾಯದಂತೆ ಗಜಾನನ ಯುವಕ ಮಂಡಳ, ಮಹಾನ್ ಮಹಾತ್ಮ ಗಾಂಧೀಜಿ ಯುವಕ ಮಂಡಳ ಸೇರಿದಂತೆ ಅನೇಕ ಮಂಡಳಿಗಳು ಗಣೇಶನನ್ನು 9 ದಿನಗಳ ಕಾಲ ಪ್ರತಿಷ್ಠಾಪಿಸಿ ಸಾಮಾಜಿಕ ಕಾರ್ಯ ಕೈಗೊಂಡಿದ್ದಾರೆ. ರಕ್ತದಾನ, ಅನ್ನಸಂತರ್ಪಣೆ ಮತ್ತು ರಸಮಂಜರಿ ಕಾರ್ಯಕ್ರಮಗಳ ಮೂಲಕ ವಿಘ್ನವಿನಾಶಕನನ್ನು ಬೀಳ್ಕೊಡುವುದು ಹಲವು ವರ್ಷಗಳಿಂದ ನಡೆದುಕೊಂಡು ಬಂದಿರುವ ವಾಡಿಕೆ.ಇನ್ನು ಇಸ್ಲಾಂ ಧಾರ್ಮಿಕ ಆಚರಣೆಯಲ್ಲಿ ಒಂದಾದ ಈದ ಮಿಲಾದ್ ಪ್ರಯುಕ್ತ ಅಲ್ಲಾಹನ ಪ್ರೀತಿಗೆ ಪಾತ್ರರಾದ ಮೊಹಮ್ಮದ್ ಪೈಂಗಬರ್ ಹುಟ್ಟಿದ ದಿನವನ್ನು ನಮಾಜ, ಬಯಾನ್, ಸಲಾಂ ಪಠಣದೊಂದಿಗೆ ಸ್ಮರಿಸುವುದು ಮೊದಲದಿಂದಲೂ ನಡೆದುಕೊಂಡು ಬಂದಿದೆ.
ಯಾವುದೇ ಧಾರ್ಮಿಕ ಹಬ್ಬ ಇರಲಿ ನಾವು ಎಲ್ಲರೂ ಸೇರಿ ಆಚರಿಸುತ್ತೇವೆ. ನಮ್ಮ ಹಬ್ಬದ ಆಚರಣೆಯಲ್ಲಿ ಹಿಂದೂಗಳು ಭಾಗವಹಿಸುತ್ತಾರೆ. ಅವರ ಕಾರ್ಯಕ್ರಮದಲ್ಲಿ ನಾವು ಭಾಗವಹಿಸುತ್ತೇವೆ. ನಮ್ಮಲ್ಲಿ ಭೇದ ಭಾವ ಇಲ್ಲ. ನಮ್ಮೂರಲ್ಲಿ ಸರ್ವ ಜನಾಂಗದ ಶಾಂತಿ ತೋಟವಿದ್ದಂತೆ ಎಂದು ಅಂಜುಮನ್ ಸಂಸ್ಥೆ ಅಧ್ಯಕ್ಷ ಐ.ಜಿ. ಸಮುದ್ರಿ ಹೇಳಿದರು.