ಮೇ 5ರಿಂದ ಇತಿಹಾಸ ಪ್ರಸಿದ್ಧ ಗುಂಡಿಕೆರೆ ಮಖಾಂ ಉರೂಸ್

KannadaprabhaNewsNetwork |  
Published : May 02, 2024, 12:16 AM IST

ಸಾರಾಂಶ

ಗುಂಡಿಕೆರೆ ಮಖಾಂನಲ್ಲಿ ಅಂತ್ಯ ವಿಶ್ರಾಂತಿ ಪಡೆಯುತ್ತಿರುವ ವಲಿಯುಲ್ಲಾಹಿರವರ ಹೆಸರಿನಲ್ಲಿ ಪ್ರತಿ ವರ್ಷ ಅದ್ಧೂರಿಯಿಂದ ನಡೆಸಲಾಗುವ ಗುಂಡಿಕೆರೆ ಮಖಾಂ ಉರೂಸ್ ಈ ಸಾಲಿನಲ್ಲೂ 3 ದಿನಗಳ ಕಾಲ ಆಯೋಜಿಸಲಾಗಿದೆ. ಕಾರ್ಯಕ್ರಮ ಮೇ 5ರಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರುಗಲಿದೆ.

ಕನ್ನಡಪ್ರಭ ವಾರ್ತೆ ಪೊನ್ನಂಪೇಟೆ

ಇತಿಹಾಸ ಪ್ರಸಿದ್ಧ ಗುಂಡಿಕೆರೆ ಮಖಾಂ ಉರೂಸ್ ಕಾರ್ಯಕ್ರಮ ಮೇ 5ರಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರುಗಲಿದೆ.

ಗುಂಡಿಕೆರೆ ಮಖಾಂನಲ್ಲಿ ಅಂತ್ಯ ವಿಶ್ರಾಂತಿ ಪಡೆಯುತ್ತಿರುವ ವಲಿಯುಲ್ಲಾಹಿರವರ ಹೆಸರಿನಲ್ಲಿ ಪ್ರತಿ ವರ್ಷ ಅದ್ಧೂರಿಯಿಂದ ನಡೆಸಲಾಗುವ ಗುಂಡಿಕೆರೆ ಮಖಾಂ ಉರೂಸ್ ಈ ಸಾಲಿನಲ್ಲೂ 3 ದಿನಗಳ ಕಾಲ ಆಯೋಜಿಸಲಾಗಿದೆ ಎಂದು ಗುಂಡಿಕೆರೆ ಶಾಫಿ ಮುಸ್ಲಿಂ ಜಮಾಅತ್ ನ ಆಡಳಿತ ಮಂಡಳಿ ಅಧ್ಯಕ್ಷರಾದ ಕೆ.ಯು. ಮಹಮ್ಮದ್ ಹಾಜಿ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 5ರಂದು ಸಂಜೆ 4ಕ್ಕೆ ಧ್ವಜಾರೋಹಣದ ಮೂಲಕ ಗುಂಡಿಕೆರೆ ಮಖಾಂ ಉರೂಸ್ ಗೆ ಚಾಲನೆ ದೊರೆಯಲಿದೆ. ಬಳಿಕ ಗುಂಡಿಕೆರೆ ಜಮಾಹತ್ತಿನ ಖತೀಬ ಇಲ್ಯಾಸ್ ಅಂಜದಿ ನೇತೃತ್ವದಲ್ಲಿ ಮಖಾಂ ಅಲಂಕಾರ ಮತ್ತು ಸಾಮೂಹಿಕ ಪ್ರಾರ್ಥನೆ ನಡೆಯಲಿದೆ. ಇದಾದ ಕೂಡಲೇ ಗುಂಡಿಕೆರೆ ಜಮಾಅತ್ತಿನ 1ನೇ ತಕ್ಕರಾದ ಸಿ.ಎ. ಹಸೈನಾರ್ ಹಾಜಿ ಮತ್ತು 2ನೇ ತಕ್ಕರಾದ ಎಂ.ಪಿ. ಶಾದಲಿ ನೇತೃತ್ವದಲ್ಲಿ ಉರೂಸ್ ನ ಭಂಡಾರ ಜಮಾಯಿಸುವ ಕಾರ್ಯಕ್ರಮ ಜರುಗಲಿದೆ ಎಂದು ಹೇಳಿದ್ದಾರೆ.

ಧಾರ್ಮಿಕ ಉಪನ್ಯಾಸ:

5ರಂದು ರಾತ್ರಿ 8ಕ್ಕೆ ಗುಂಡಿಕೆರೆ ಶಾಫಿ ಮುಸ್ಲಿಂ ಜಮಾಅತ್ ನ ಅಧ್ಯಕ್ಷರ ನೇತೃತ್ವದಲ್ಲಿ ನಡೆಯಲಿರುವ ಧಾರ್ಮಿಕ ಉಪನ್ಯಾಸ ಕಾರ್ಯಕ್ರಮವನ್ನು ಗುಂಡಿಕೆರೆ ಜಮಾಅತ್ತಿನ ಖತೀಬ ಇಲ್ಯಾಸ್ ಅಂಜದಿ ಉದ್ಘಾಟಿಸಲಿದ್ದಾರೆ. ದಕ್ಷಿಣ ಭಾರತದ ಪ್ರಸಿದ್ಧ ಧಾರ್ಮಿಕ ಪಂಡಿತ ಅಬ್ದುಲ್ ಸಲಾಂ ಮುಸ್ಲಿಯರ್ ದೇವರಶೋಲ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ.

ಕಾರ್ಯಕ್ರಮದಲ್ಲಿ ಗುಂಡಿಕೆರೆ ಶಾಫಿ ಮುಸ್ಲಿಂ ಜಮಾಅತಿನ ಆಡಳಿತ ಮಂಡಳಿ ಉಪಾಧ್ಯಕ್ಷರಾದ ಎಂ.ವೈ. ಆಲಿ, ಪ್ರಧಾನ ಕಾರ್ಯದರ್ಶಿ ಎಂ.ಎ. ಇಸ್ಮಾಯಿಲ್ ಹಾಜಿ ಗುಂಡಿಕೆರೆ ಜಮಾಅತ್ತಿನ 1ನೇ ತಕ್ಕರಾದ ಸಿ.ಎ. ಹಸೈನಾರ್ ಹಾಜಿ ಮತ್ತು 2ನೇ ತಕ್ಕರಾದ ಎಂ.ಪಿ. ಶಾದಲಿ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ವಿವರಿಸಿದರು.

6ರಂದು ಅಪರಾಹ್ನ 1ಕ್ಕೆ ಗುಂಡಿಕೆರೆ ಮಖಾಂ ಉರೂಸ್ ನ ಪ್ರಮುಖ ಆಕರ್ಷಣೆಯಾದ ಸಾರ್ವಜನಿಕ ಸಮ್ಮೇಳನ ನಡೆಯಲಿದೆ. ಆರಂಭದಲ್ಲಿ ನಡೆಯುವ ಸಾಮೂಹಿಕ ಪ್ರಾರ್ಥನೆಗೆ ಗುಂಡಿಕೆರೆ ಜಮಾಅತ್ತಿನ ಖತೀಬರಾದ ಇಲ್ಯಾಸ್ ಅಂಜದಿ ನೇತೃತ್ವ ನೀಡಲಿದ್ದಾರೆ. ವಿರಾಜಪೇಟೆಯ ಅನ್ವಾರಲ್ ಹುದಾ ಸಂಸ್ಥೆಯ ಪ್ರಾಂಶುಪಾಲ ಅಶ್ರಫ್ ಅಹ್ಸನಿ ಸಮ್ಮೇಳನ ಉದ್ಘಾಟಿಸಲಿದ್ದಾರೆ. ಪ್ರಧಾನ ಭಾಷಣಗಾರರಾಗಿ ಹಿರಿಯ ಪಂಡಿತರಾದ ಇಸ್ಮಾಯಿಲ್ ಸಖಾಫಿ ರಿಪ್ಪನ್ ಆಗಮಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಕೊಡವ ಮುಸ್ಲಿಂ ಅಸೋಸಿಯೇಷನ್ ಅಧ್ಯಕ್ಷ ಡಿ.ಎಚ್. ಸೂಫಿ ಹಾಜಿ, ಬೆಂಗಳೂರಿನ ಆಯೆಷಾ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲ ಕುವೇoಡ ವೈ. ಹಂಝತುಲ್ಲಾ, ಉದ್ಯಮಿಗಳಾದ ಎಂ.ಎಚ್. ಮೊಯ್ದು, ಎ.ಎಚ್. ಅಬೂಬಕ್ಕರ್, ಹೈಕೋರ್ಟ್ ವಕೀಲ ಕೆ.ಎಂ. ಸುಬೈರ್, ಬೇಟೋಳಿ ಗ್ರಾ ಪಂ. ಸದಸ್ಯರಾದ ಎಂ. ಎಂ. ರಜಾಕ್, ಗುಂಡಿಕೆರೆ ಶಾಫಿ ಮುಸ್ಲಿಂ ಜಮಾಅತ್ ಆಡಳಿತ ಮಂಡಳಿ ಉಪಾಧ್ಯಕ್ಷ ಎಂ. ವೈ. ಆಲಿ, ಗುಂಡಿಕೆರೆ ಜಮಾಅತ್ತಿನ 1ನೇ ತಕ್ಕ ಸಿ.ಎ. ಹಸೈನಾರ್ ಹಾಜಿ ಮತ್ತು 2ನೇ ತಕ್ಕ ಎಂ.ಪಿ. ಶಾದಲಿ ಮೊದಲಾದವರು ಭಾಗವಹಿಸಲಿದ್ದಾರೆ.

ಅಂದು ಸಂಜೆ 4.30ಕ್ಕೆ ಮೌಲೂದ್ ಪಾರಾಯಣ ಮತ್ತು ಸಾಮೂಹಿಕ ಅನ್ನಸಂತರ್ಪಣೆ ನಡೆಯಲಿದೆ ಎಂದು ಹೇಳಿದರು.

6ರಂದು ರಾತ್ರಿ 8ಕ್ಕೆ ನಡೆಯಲಿರುವ ಮತ್ತೊಂದು ಧಾರ್ಮಿಕ ಉಪನ್ಯಾಸ ಕಾರ್ಯಕ್ರಮವನ್ನು ಗುಂಡಿಕೆರೆ ಜಮಾಅತಿನ ಸದರ ಉಸ್ತಾದ್ ಇಬ್ರಾಹಿಂ ಲತೀಫಿ ಉದ್ಘಾಟಿಸಲಿದ್ದಾರೆ. ಹಿರಿಯ ಧಾರ್ಮಿಕ ವಿದ್ವಾಂಸ ಹಂಸ ಮಿಸ್ಬಾಯಿ ಒಟ್ಟಪಡವು ವಿಶೇಷ ಉಪನ್ಯಾಸ ನೀಡಲಿದ್ದಾರೆ.

ಈ ಕಾರ್ಯಕ್ರಮದಲ್ಲಿ ಗುಂಡಿಕೆರೆ ಶಾಫಿ ಮುಸ್ಲಿಂ ಜಮಾಅತಿನ ಆಡಳಿತ ಮಂಡಳಿ ಕೋಶಾಧಿಕಾರಿಗಳಾದ ಎಂ.ಎಂ. ಆಲಿ ಮುಸ್ಲಿಯರ್ ಹಾಜಿ, ಸದಸ್ಯರಾದ ಸಿ.ಯು.ಮಹಮ್ಮದ್ ಹಾಜಿ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

7ರಂದು ರಾತ್ರಿ 8ಕ್ಕೆ ನಡೆಯುವ ಕಾರ್ಯಕ್ರಮವನ್ನು ಗುಂಡಿಕೆರೆ ಮದರಸಾ ಅಧ್ಯಾಪಕ ರಾಫಿ ಜೈನಿ ಉದ್ಘಾಟಿಸಲಿದ್ದಾರೆ. ಬಳಿಕ ಕೇರಳದ ಪ್ರಸಿದ್ಧ ಧಾರ್ಮಿಕ ಸಾಹಿತ್ಯಗಾರ ಡಾ. ಕೋಯ ಕಾಪಾಡ್ ಮತ್ತು ಸಂಗಡಿಗರಿಂದ ‘ಗ್ರಾಂಡ್ ಇಶಲ್ ನೈಟ್’ ಎಂಬ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಗುಂಡಿಕೆರೆ ಶಾಫಿ ಮುಸ್ಲಿಂ ಜಮಾಅತಿನ ಆಡಳಿತ ಮಂಡಳಿ ಉಪಾಧ್ಯಕ್ಷ ಎಂ.ವೈ. ಆಲಿ, ಪ್ರಧಾನ ಕಾರ್ಯದರ್ಶಿ ಎಂ.ಎ. ಇಸ್ಮಾಯಿಲ್ ಹಾಜಿ ಮೊದಲಾದವರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಉರೂಸ್ ನ ಎಲ್ಲಾ ದಿನವೂ ಮಗರಿಬ್ ನಮಾಜಿನ ನಂತರ ಸಾಂಪ್ರದಾಯಿಕ ದಫ್ ಪ್ರದರ್ಶನ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಮಹಮ್ಮದ್ ಹಾಜಿ ತಿಳಿಸಿದರು.

ಗೋಷ್ಠಿಯಲ್ಲಿ ಗುಂಡಿಕೆರೆ ಶಾಫಿ ಮುಸ್ಲಿಂ ಜಮಾಅತ್ ನ ಆಡಳಿತ ಮಂಡಳಿ ಪದಾಧಿಕಾರಿಗಳಾದ ಎಂ. ವೈ. ಆಲಿ, ಎಂ.ಎಂ. ಆಲಿ ಮುಸ್ಲಿಯಾರ್ ಹಾಜಿ, ಎಂ. ಎ. ಇಸ್ಮಾಯಿಲ್ ಹಾಜಿ, ಸಿ.ಪಿ. ಆಲಿ, ಎಂ. ಎಂ. ಇಸ್ಮಾಯಿಲ್ ಮತ್ತು ಸಿ. ಯು. ಮಹಮ್ಮದ್ ಹಾಜಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಾಮಾಜಿಕ ಜಾಲತಾಣ ಮೇಲೆ ಕಣ್ಣಿಡಲು ಸರ್ಕಾರಿ ಸಾಫ್ಟ್‌ವೇರ್‌
ಬ್ಯಾಲೆಟ್‌ ಪೇಪರಲ್ಲೇ ಪಂಚಾಯ್ತಿ ಚುನಾವಣೆಗೆ ಸರ್ಕಾರ ಮಸೂದೆ