ಆಡಳಿತಾತ್ಮಕ ದೃಷ್ಟಿಯಿಂದ ಸಣ್ಣ ನೀರಾವರಿ ಇಲಾಖೆ ಕಚೇರಿ ನಾಗಮಂಗಲಕ್ಕೆ ಸ್ಥಳಾಂತರ

KannadaprabhaNewsNetwork | Published : Aug 14, 2024 12:58 AM

ತಾಲೂಕಿನ ಬೂಕನೆಕೆರಯಲ್ಲಿದ್ದ ಸಣ್ಣ ನೀರಾವರಿ ಇಲಾಖೆ ಕೆ.ಆರ್.ಪೇಟೆ, ನಾಗಮಂಗಲ ಮತ್ತು ಪಾಂಡವಪುರ ತಾಲೂಕು ಸೇರಿ ಒಟ್ಟು ಮೂರು ತಾಲೂಕುಗಳ ಕ್ಷೇತ್ರ ವ್ಯಾಪ್ತಿ ಹೊಂದಿದೆ. ಮೊದಲು ಮಂಡ್ಯ ತಾಲೂಕು ದುದ್ದ ವ್ಯಾಪ್ತಿಯಲ್ಲಿ ಇಲಾಖೆ ಕಚೇರಿ ಇತ್ತು. ಆನಂತರ ತಾಲೂಕಿನ ಬೂಕನಕೆರೆಗೆ ಸ್ಥಳಾಂತರಗೊಂಡಿತ್ತು.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಸಣ್ಣ ನೀರಾವರಿ ಇಲಾಖೆ ಕಚೇರಿ ಹೋಬಳಿ ಕೇಂದ್ರ ಬೂಕನೆಕೆರೆ ಗ್ರಾಮದಲ್ಲಿದೆ. ಸಾರ್ವಜನಿಕರ ಸಂಪರ್ಕಕ್ಕೆ ಅನಾನುಕೂಲ ಆಗಲಿ ಎಂಬ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರ ಆಕ್ಷೇಪದ ಮೇರೆಗೆ ನಾಗಮಂಗಲ ತಾಲೂಕಿಗೆ ಸ್ಥಳಾಂತರವಾಗಿದೆ ಎಂದು ಕಾಂಗ್ರೆಸ್ ಮುಖಂಡ ಬಿ.ಎಲ್.ದೇವರಾಜು ಸ್ಪಷ್ಟನೆ ನೀಡಿದರು.

ಪಟ್ಟಣದಲ್ಲಿ ಕಾಂಗ್ರೆಸ್ ಮುಖಂಡರೊಂದಿಗೆ ಸುದ್ದಿಗಾರರೊಂದಿಗೆ ಮಾತನಾಡಿ, ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ವಿರುದ್ದ ಶಾಸಕ ಎಚ್.ಟಿ.ಮಂಜು ಮಾಡಿರುವ ಟೀಕೆಗಳನ್ನು ಖಂಡಿಸಿದರು.

ಕೆ.ಆರ್.ಪೇಟೆಯಲ್ಲಿ 8 ಕೆರೆಗಳು ಮಾತ್ರ ಸಣ್ಣ ನೀರಾವರಿ ಇಲಾಖೆಗೆ ಸೇರಿವೆ. ನೆರೆಯ ನಾಗಮಂಗಲ ತಾಲೂಕಿನ 20 ಕೆರೆಗಳು ಇಲಾಖೆ ವ್ಯಾಪ್ತಿಗೆ ಸೇರಿದ್ದು, ಅಭಿವೃದ್ಧಿ ಮತ್ತು ಆಡಳಿತಾತ್ಮಕ ದೃಷ್ಟಿಯಿಂದ ನಾಗಮಂಗಲಕ್ಕೆ ಸ್ಥಳಾಂತರಗೊಂಡಿದೆ ಎಂದರು.

ತಾಲೂಕಿನ ಬೂಕನೆಕೆರಯಲ್ಲಿದ್ದ ಸಣ್ಣ ನೀರಾವರಿ ಇಲಾಖೆ ಕೆ.ಆರ್.ಪೇಟೆ, ನಾಗಮಂಗಲ ಮತ್ತು ಪಾಂಡವಪುರ ತಾಲೂಕು ಸೇರಿ ಒಟ್ಟು ಮೂರು ತಾಲೂಕುಗಳ ಕ್ಷೇತ್ರ ವ್ಯಾಪ್ತಿ ಹೊಂದಿದೆ. ಮೊದಲು ಮಂಡ್ಯ ತಾಲೂಕು ದುದ್ದ ವ್ಯಾಪ್ತಿಯಲ್ಲಿ ಇಲಾಖೆ ಕಚೇರಿ ಇತ್ತು. ಆನಂತರ ತಾಲೂಕಿನ ಬೂಕನಕೆರೆಗೆ ಸ್ಥಳಾಂತರಗೊಂಡಿತ್ತು ಎಂದರು.

ಕೆ.ಆರ್.ಪೇಟೆ ತಾಲೂಕು ವ್ಯಾಪ್ತಿಯಲ್ಲಿ 106 ಕೆರೆಗಳು ಹೇಮಾವತಿ ಜಲಾಶಯ ಯೋಜನಾ ವ್ಯಾಪ್ತಿಗೆ ಸೇರಿದ್ದರೆ, ಕೇವಲ 8 ಕೆರೆಗಳು ಮಾತ್ರ ಸಣ್ಣ ನೀರಾವರಿ ಇಲಾಖೆಗೆ ಸೇರಿವೆ. ಕಚೇರಿ ಸ್ಥಳಾಂತರವಾಗಿದ್ದರೂ ಅದರ ಕಾರ್ಯವ್ಯಾಪ್ತಿ ಬದಲಾಗಿಲ್ಲ ಎಂದರು.

ತಾಲೂಕಿನಲ್ಲಿ ಸಣ್ಣ ನೀರಾವರಿ ಇಲಾಖೆ ಮೂಲಕ ಯಾವುದೇ ಅಭಿವೃದ್ಧಿ ಕಾಮಗಾರಿಗಳಿಗೂ ತಡೆಯಾಗಿಲ್ಲ. ಆದರೆ, ಕಚೇರಿ ಸ್ಥಳಾಂತರ ವಿಚಾರ ಮುಂದಿಟ್ಟು ಶಾಸಕ ಎಚ್.ಟಿ.ಮಂಜು ಸಚಿವರ ವಿರುದ್ಧ ತಾಕತ್ತಿನ ಪದ ಬಳಕೆ ಮಾಡಿರುವುದು ಸರಿಯಲ್ಲ ಎಂದರು.

ಸಚಿವ ಚಲುವರಾಯಸ್ವಾಮಿ ತಮ್ಮ ಅಧಿಕಾರದ ತಾಕತ್ತು ಬಳಸಿ ಮಂಡ್ಯದ ವಿ.ಸಿ.ಫಾರಂನಲ್ಲಿ ಕೃಷಿ ವಿವಿ ಸ್ಥಾಪಿಸಿದ್ದಾರೆ. ಮೈಷುಗರ್ ಕಾರ್ಖಾನೆ ಪುನಶ್ಚೇತನಕ್ಕೆ ಮುಂದಾಗಿದ್ದಾರೆ. ಜಿಲ್ಲೆಯ ಏಕೈಕ ಜೆಡಿಎಸ್ ಶಾಸಕರಾಗಿ ನನ್ನ ಕಾರ್ಯವ್ಯಾಪ್ತಿ ಸಚಿವರು ಯಾವ ಅಭಿವೃದ್ಧಿ ಕಾರ್ಯಕ್ಕೆ ತಡೆ ಮಾಡಿದ್ದಾರೆಂಬುದನ್ನು ಬಹಿರಂಗ ಪಡಿಸಬೇಕು ಎಂದು ಆಗ್ರಹಿಸಿದರು.

ಶಾಸಕ ಸ್ಥಾನದ ಗೌರವಕ್ಕೆ ಚ್ಯುತಿ ಬರುವಂತೆ ಸಚಿವ ಎನ್.ಚಲುವರಾಯಸ್ವಾಮಿ ನಡೆದುಕೊಂಡಿದ್ದರೆ ಇದನ್ನು ತಿಳಿಸಿ, ಸುಮ್ಮನೆ ನಿರಾಧಾರ ಆರೋಪಗಳನ್ನು ಮಾಡಿ ಸಚಿವರ ವಿರುದ್ಧ ಗಾಳಿಯಲ್ಲಿ ಗುಂಡು ಹಾರಿಸುವ ಪ್ರಯತ್ನ ಮಾಡಬಾರದು ಎಂದು ಸಲಹೆ ನೀಡಿದರು.

ಸಚಿವ ಎನ್.ಚಲುವರಾಯಸ್ವಾಮಿ ಜಿಲ್ಲೆಯಲ್ಲಿ ಯಾವುದೇ ಪಕ್ಷ ರಾಜಕಾರಣ ಮಾಡುತ್ತಿಲ್ಲ. ವಿಪಕ್ಷ ಶಾಸಕರಾಗಿ ಸಚಿವರ ಸಹಕಾರ ಪಡೆದು ಕ್ಷೇತ್ರದ ಅಭಿವೃದ್ಧಿ ಮಾಡುವ ಬದಲು ಸಂರ್ಘಷ ರಾಜಕಾರಣಕ್ಕೆ ಇಳಿದಿರುವುದು ಸರಿಯಲ್ಲ. ಕ್ಷೇತ್ರದ ಶಾಸಕರಾಗಿ ಒಂದು ವರ್ಷ ಕಳೆದಿದೆ. ಯಾವುದೇ ಅಭಿವೃದ್ಧಿ ಕೆಲಸಗಳನ್ನು ನಡೆಯುತ್ತಿಲ್ಲ ಎಂದು ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹರಳಹಳ್ಳಿ ವಿಶ್ವನಾಥ್, ತಾಲೂಕು ಕಾಂಗ್ರೆಸ್ ಪಕ್ಷದ ಪರಿಶಿಷ್ಟ ಜಾತಿ ವಿಭಾಗದ ಅಧ್ಯಕ್ಷ ರಾಜಯ್ಯ ಇದ್ದರು.