ಬೃಂದಾವನದಿಂದ ಉಡುಪಿಯೆಡೆಗೆ ಸಾಂಝಿ ಕಲಾಕೃತಿಗಳ ಪ್ರದರ್ಶನವನ್ನು ಆರ್ಕಿಟೆಕ್ಟ್ ಶ್ರೀಜಾ ಜಯಕುಮಾರ್ ಉದ್ಘಾಟಿಸಿದರು. ಕೃಷ್ಣನ ವಿವಿಧ ಲೀಲೆಗಳನ್ನು ದರ್ಶಿಸಿರುವ ಕಲಾಕೃತಿಗಳು ಪ್ರದರ್ಶನದಲ್ಲಿದೆ.
ಕನ್ನಡಪ್ರಭ ವಾರ್ತೆ ಉಡುಪಿ
ಇಲ್ಲಿನ ಭಾವನಾ ಫೌಂಡೇಶನ್ ಹಾವಂಜೆ ಹಾಗೂ ಭಾಸ ಗ್ಯಾಲರಿ ಮತ್ತು ಸ್ಟುಡಿಯೋವು ಮಧುರಂ ವೈಟ್ ಲೋಟಸ್ ಹೋಟೆಲ್ಸ್ನ ಸಹಯೋಗದೊಂದಿಗೆ ಸಂಯೋಜಿಸಿದ ‘ಬೃಂದಾವನದಿಂದ ಉಡುಪಿಯೆಡೆಗೆ’ ಸಾಂಝಿ ಕಲಾಕೃತಿಗಳ ಪ್ರದರ್ಶನವನ್ನು ಆರ್ಕಿಟೆಕ್ಟ್ ಶ್ರೀಜಾ ಜಯಕುಮಾರ್ ಉದ್ಘಾಟಿಸಿದರು.ನಂತರ ಅವರು ‘ಭಾರತೀಯ ಕಲೆಯಲ್ಲಿಯೇ ಶ್ರೇಷ್ಠವಾದ ಹಾಗೂ ರಾಧೆಯ ಪ್ರೀತಿಯೊಂದಿಗೆ ಬೆಸೆದಿರುವ ಸಾಂಝಿ ಕಲೆಯನ್ನು ಉಡುಪಿಯ ಕಲಾ ರಸಿಕರಿಗೆ ಉಣಬಡಿಸುತ್ತಿರುವ ಭಾಸ ಗ್ಯಾಲರಿಯ ಪ್ರಯತ್ನ ನಿಜಕ್ಕೂ ಶ್ಲಾಘನೀಯ. ಇಂದಿನ ಕಟ್ಟಡಗಳ ಒಳಾಂಗಣ ವಿನ್ಯಾಸದಲ್ಲಿ ಈ ತೆರನಾದ ಕಲೆಗಳ ಮಹತ್ವತೆ ಉಡುಪಿಯ ಕಲಾಪ್ರಿಯರಲ್ಲಿ ಒಂದು ಹೊಸ ಸಂಚಲನವನ್ನೇ ಸೃಜಿಸಬಹುದು. ನಾವೆಲ್ಲ ಸೇರಿಕೊಂಡು ಈ ದೇಶೀಯ ಕಲೆಗೆ ಪ್ರೋತ್ಸಾಹಿಸೋಣ’ ಎಂಬುದಾಗಿ ಆಶಿಸಿದರು.ರಾಷ್ಟ್ರಪ್ರಶಸ್ತಿ ಪುರಸ್ಕೃತ ಕಲಾವಿದರಾದ ಶ್ರೀ ರಾಮ್ ಸೋನಿ ಅವರು ಸಾಂಝಿ ಕಲೆಯ ಬೆಳವಣಿಗೆ ಹಾಗೂ ತಮ್ಮ ಕಲಾಕೃತಿಗಳಲ್ಲಿ ಕಂಡುಕೊಳ್ಳುತ್ತಿರುವ ನವೀನ ಪ್ರಯೋಗಗಳ ಬಗೆಗೆ ವಿವರಿಸಿದರು.ಫೌಂಡೇಶನ್ನ ಅಧ್ಯಕ್ಷರಾದ ಹಾವಂಜೆ ಮಂಜುನಾಥ ರಾವ್ ಉಪಸ್ಥಿತರಿದ್ದರು. ಆಶ್ಲೇಷ್ ಆರ್. ಭಟ್ ಧನ್ಯವಾದವಿತ್ತರು.ಚಿನ್ನದ ಲೇಪದೊಂದಿಗೆ ಸಾಂಝಿ ಕಲೆಯ ನಿರ್ಮಾಣ ಸೋನಿಯವರ ವಿಶೇಷತೆ. ಸುಮಾರು ನಲವತ್ತಕ್ಕೂ ಮಿಕ್ಕಿ ಪೇಪರ್ ಕಟ್ಟಿಂಗ್ ಕಲಾಕೃತಿಗಳೊಂದಿಗೆ ಚಿನ್ನ ಹಾಗೂ ಬೆಳ್ಳಿಯ ತೆಳುವಾದ ಪದರದ ಮೇಲೆ ಕೃಷ್ಣನ ವಿವಿಧ ಲೀಲೆಗಳನ್ನು ದರ್ಶಿಸಿರುವ ಕಲಾಕೃತಿಗಳೂ ಪ್ರದರ್ಶನದಲ್ಲಿವೆ.ಕಲಾಪ್ರದರ್ಶನವು 26ನೇ ಭಾನುವಾರದ ಅಪರಾಹ್ನ 3ರಿಂದ ಸಂಜೆ 7ರ ತನಕ ಸಾರ್ವಜನಿಕ ವೀಕ್ಷಣೆಗೆ ತೆರೆದಿರಲಿದ್ದು, ಇದೇ ಸಂದರ್ಭದಲ್ಲಿ ಶನಿವಾರ ಹಾಗೂ ಭಾನುವಾರಗಳಂದು ಸಾಂಝಿ ಕಲೆ ಹಾಗೂ ನೀರಿನ ಮೇಲೆ ನಿರ್ಮಿಸುವ ರಂಗೋಲಿ ಕಲೆಯಾದ ಜಲ ಸಾಂಝಿ ಕಲೆಯ ಕಾರ್ಯಾಗಾರಗಳು ನೋಂದಾಯಿಸಿದವರಿಗಾಗಿ ಬಡಗುಪೇಟೆಯ ಗ್ಯಾಲರಿಯಲ್ಲಿ ನಡೆಯಲಿವೆ ಎಂಬುದಾಗಿ ಕಾರ್ಯಕ್ರಮ ಸಂಯೋಜಕರಾದ ಡಾ. ಜನಾರ್ದನ ಹಾವಂಜೆಯವರು ಮಾಹಿತಿಯಿತ್ತರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.