ಹುಬ್ಬಳ್ಳಿ: ಇಲ್ಲಿಯ ಶ್ರೀ ಗಣೇಶೋತ್ಸವ ಶಾಂತತೆ, ಏಕತೆ ಮನೋಭಾವದೊಂದಿಗೆ ಭಾವೈಕ್ಯತೆಯ ಮೌಲ್ಯವನ್ನು ಎತ್ತಿ ಹಿಡಿದಿದೆ. ಈ ವರ್ಷವೂ ನಾಡಿಗೆ ಮಾದರಿಯಾಗುವಂತೆ ವಿಶಿಷ್ಟ ಪ್ರೀತಿಯಿಂದ ಹಬ್ಬವನ್ನು ಆಚರಿಸಲಿ ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ ಹೇಳಿದರು.
ಮಹಾ ಮಂಡಳದ ಅಧ್ಯಕ್ಷ ಮೊಹನ ಲಿಂಬಿಕಾಯಿ ಮಾತನಾಡಿ, 11 ದಿನಗಳ ಕಾಲ ಮಾರುಕಟ್ಟೆಯಲ್ಲಿ ಸ್ಥಾಪಿಸುವ ಗಣೇಶ ದರ್ಶನಕ್ಕೆ ಬರುವ ಭಕ್ತರಿಗೆ ಸಂಚಾರಕ್ಕೆ ಯಾವುದೇ ಅಡೆತಡೆ ಆಗದಂತೆ ಕಾಪಾಡುವುದು, ಪಾರ್ಕಿಂಗ್ ವ್ಯವಸ್ತೆ, ಜನ ಸಾಂದ್ರತೆ ನಿಯಂತ್ರಿಸಲು ಹೆಚ್ಚಿನ ಪೊಲೀಸ್ ಹಾಗೂ ಹೋಮ್ಗಾರ್ಡ್ ಒದಗಿಸುವ ಕುರಿತು, ವಿಸರ್ಜನೆ ಮತ್ತು ಪ್ರತಿಷ್ಟಾಪನಾ ಮೆರವಣಿಗೆ ಮೇಳಕ್ಕೆ, ಬಡಾವಣೆಗಳಲ್ಲಿ ಆಚರಿಸುವಂತಹ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಹೆಚ್ಚಿನ ಸಹಕಾರ ಕೊಡಬೇಕು. ಹೊಸೂರು, ಇಂದಿರಾಗಾಜಿನ ಮನೆ ಆವರಣದಲ್ಲಿರುವ ವಿಸರ್ಜನಾ ಬಾವಿಗಳಿಗೆ ಹೆಚ್ಚಿನ ಸಿಬ್ಬಂದಿ ಒದಗಿಸುವ ಕುರಿತು ಮನವಿ ಮಾಡಿದರು.
ಅಲ್ತಾಫ ಕಿತ್ತೂರ, ಸಿದ್ದಣ್ಣ ಅಂಗಡಿ, ಆರ್.ಎಫ್. ಕರಕಣ್ಣವರ, ಸಂಗೀತಾ ಇಜಾರದ, ಎಸ್.ಎಸ್. ಕಮಡೊಳ್ಳಿ ಶೆಟ್ಟರ್, ರೋಹನ ಗೊಂದಕರ, ಅನಿಲ ಕವಿಶೆಟ್ಟಿ, ಎಂ.ಎಂ. ಡಂಬಳ, ಅರುಣ ಹಚಡದ ಮಾತನಾಡಿ, ಧ್ವನಿ ವರ್ಧಕ ಸಮಯ ಬಳಸುವ ಸಮಯದ ಹೆಚ್ಚಿಸಬೇಕು. ಮಧ್ಯರಾತ್ರಿಯ ವರೆಗೂ ಪುಟ್ಟಪುಟ್ಟ ಚಹಾ ಅಂಗಡಿಗಳನ್ನು ತೆರೆಯಲು ಅವಕಾಶ ಕೊಡಬೇಕು, ಸಮಿತಿಯವರು ನಡೆಸುತ್ತಿರುವ ಅನ್ನ ದಾಸೋಹಕ್ಕೆ ಸಂಪೂರ್ಣ ಸಹಕಾರ ಕಲ್ಪಿಸಿ ಕೊಡಬೇಕೆಂದು ಎಂದು ಒತ್ತಾಯಿಸಿದರು. ಮಹಾ ಮಂಡಳದ ಕಾರ್ಯದರ್ಶಿ ಅಮರೇಶ ಹಿಪ್ಪರಗಿ ವಂದಿಸಿದರು.