ಗಾಲಿ ಜನಾರ್ದನ ರೆಡ್ಡಿ ಹೊರಬರುತ್ತಾರೆ, ಎದೆಗುಂದಬೇಡಿ

KannadaprabhaNewsNetwork | Published : Jun 4, 2025 2:22 AM
ಗಂಗಾವತಿ ಕ್ಷೇತ್ರವನ್ನು ಅಭಿವೃದ್ಧಿಪಡಿಸುವ ಛಲವನ್ನು ಜನಾರ್ದನ ರೆಡ್ಡಿ ಅವರು ಹೊಂದಿದ್ದಾರೆ. ಕೆಲವರು ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಅವುಗಳಿಗೆ ಯಾರು ತಲೆಕೆಡಿಸಿಕೊಳ್ಳಬಾರದು.

ಗಂಗಾವತಿ:

ಕೆಲವೇ ದಿನಗಳಲ್ಲಿ ಗಾಲಿ ಜನಾರ್ದನ ರೆಡ್ಡಿ ಅವರು ಹೊರಗೆ ಬರುತ್ತಾರೆ. ಆದರಿಂದ ಕಾರ್ಯಕರ್ತರು ಯಾವುದೇ ಕಾರಣಕ್ಕೂ ಎದೆಗುಂದಬೇಡಿ ಎಂದು ರೆಡ್ಡಿ ಪತ್ನಿ ಲಕ್ಷ್ಮೀ ಅರುಣಾ ಕಾರ್ಯಕರ್ತರಿಗೆ ಧೈರ್ಯ ತುಂಬಿದರು.

ನಗರದ ತಮ್ಮ ನಿವಾಸದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಜನಾರ್ದನ ರೆಡ್ಡಿ ಅವರಿಗೆ ನ್ಯಾಯ ಸಿಕ್ಕೇ ಸಿಗುತ್ತದೆ. ನ್ಯಾಯಾಲಯದ ಮೇಲೆ ನಮಗೆ ನಂಬಿಕೆ ಇದೆ. ಅವರಿಗೆ ಭಗವಂತನ ಆಶೀರ್ವಾದ ಮತ್ತು ಗಂಗಾವತಿ ಕ್ಷೇತ್ರದ ಮತದಾರರ ಹಾರೈಕೆ ಇರುವುದರಿಂದ ಶೀಘ್ರವೇ ಸಂಕಷ್ಟದಿಂದ ಹೊರ ಬರುತ್ತಾರೆಂಬ ನಂಬಿಕೆ ತಮಗಿದೆ ಎಂದರು.

ಗಂಗಾವತಿ ಕ್ಷೇತ್ರವನ್ನು ಅಭಿವೃದ್ಧಿಪಡಿಸುವ ಛಲವನ್ನು ಜನಾರ್ದನ ರೆಡ್ಡಿ ಅವರು ಹೊಂದಿದ್ದಾರೆ. ಕೆಲವರು ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಅವುಗಳಿಗೆ ಯಾರು ತಲೆಕೆಡಿಸಿಕೊಳ್ಳಬಾರದು ಎಂದ ಲಕ್ಷ್ಮೀ ಅರುಣಾ, ಕೆಲವರು ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ ಉಪ ಚುನಾವಣೆ ನಡೆಯಲಿದೆ ಎಂದು ಆಸೆ ಇಟ್ಟುಕೊಂಡಿದ್ದಾರೆ. ಅವರ ಆಸೆ ನಿರಾಸೆಯಾಗಲಿದೆ. ಜನಾರ್ದನ ರೆಡ್ಡಿ ಅವರೇ ಶಾಸಕರಾಗಿ ಮುಂದುವರಿಯುತ್ತಾರೆಂದು ವಿಶ್ವಾಸ ವ್ಯಕ್ತಪಡಿಸಿದರು.

ಈಗಾಗಲೇ ಕ್ಷೇತ್ರದಲ್ಲಿ ಅಭಿವೃದ್ಧಿ ಕಾಮಗಾರಿಗಳು ಮುಂದುವರಿದಿವೆ. ಪ್ರಸಿದ್ಧ ಅಂಜನಾದ್ರಿ ದೇಗುಲ ಅಭಿವೃದ್ಧಿ ಸೇರಿದಂತೆ ರಸ್ತೆ ಕಾಮಗಾರಿ ನಡೆದಿದೆ ಎಂದ ಅವರು, ನಗರ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿ ಅಭಿವೃದ್ಧಿ ಕಾರ್ಯಗಳು ನಿರಂತರವಾಗಿ ನಡೆಯುತ್ತಿವೆ ಎಂದು ಹೇಳಿದರು.

ಬಿಜೆಪಿ ಜಿಲ್ಲಾ ಮಾಜಿ ಅಧ್ಯಕ್ಷ ಸಿಂಗನಾಳ ವಿರೂಪಾಕ್ಷಪ್ಪ ಮಾತನಾಡಿ, ಗಾಲಿ ಜನಾರ್ದನ ರೆಡ್ಡಿ ಅವರು ಬಿಜೆಪಿ ಬೆಳೆಸಿದವರು. ಈ ಹಿಂದೆ ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಭಗವಂತ ಅವರಿಗೆ ಅನ್ಯಾಯ ಮಾಡುವುದಿಲ್ಲ ಎಂದರು.

ಬಿಜೆಪಿ ಮುಖಂಡ ಮನೋಹರಗೌಡ ಮಾತನಾಡಿ, ಯಾವಾಗಲು ಗಾಲಿ ಜನಾರ್ದನ ರೆಡ್ಡಿ ಅವರಿಗೆ ಬೆಂಬಲವಾಗಿ ಇದ್ದೇವೆ. ಪಕ್ಷದಲ್ಲಿ ಇರಲಿ, ಇರದೇ ಇರಲಿ ರೆಡ್ಡಿ ಅವರ ಕುಟುಂಬಕ್ಕೆ ಬೆಂಬಲವಾಗಿ ನಿಲುತ್ತೇವೆ ಎಂದು ಶುಭ ಹಾರೈಸಿದರು.

ಈ ವೇಳೆ ನಗರಸಭೆ ಅಧ್ಯಕ್ಷೆ ಹೀರಾಬಾಯಿ, ವಿಧಾನ ಪರಿಷತ್ ಮಾಜಿ ಸದಸ್ಯ ಕರಿಯಣ್ಣ ಸಂಗಟಿ, ನಗರಸಭೆ ಹಣಕಾಸು ಸ್ಥಾಯಿ ಸಮಿತಿ ಅದ್ಯಕ್ಷ ರಮೇಶ ಚೌಡ್ಕಿ, ಯಮನೂರು ಚೌಡ್ಕಿ ಮುಸ್ತಾಕಲಿ, ಸಂಗಮೇಶ ಬಾದವಾಡಗಿ, ಆನಂದಗೌಡ ಹಿರೇಬೆಣಕಲ್, ಉಸ್ಮಾನ್, ವೀರೇಶ ಬಲಕುಂದಿ, ಪಂಪಣ್ಣ ನಾಯಕ, ಚಂದಶೇಖರ್, ದುರಗಪ್ಪ ದಳಪತಿ, ಸಿಂಗನಾಳ ಪಂಪಾಪತಿ ಸೇರಿದಂತೆ ಪ್ರಮುಖರು ಇದ್ದರು.