ಕನ್ನಡಪ್ರಭ ವಾರ್ತೆ ಹೊಳೆನರಸೀಪುರ ಪಟ್ಟಣದ ತಾಲೂಕು ಕಚೇರಿ ರಸ್ತೆಯಲ್ಲಿ ಇರುವ ಶ್ರಿ ಮಹಾಗಣಪತಿ ಭವನದಲ್ಲಿ ಶ್ರೀ ಮಹಾಗಣಪತಿ ಮಹೋತ್ಸವ ಸೇವಾ ಸಮಿತಿ ವತಿಯಿಂದ ಆಯೋಜಿಸಿದ್ದ ೬೭ನೇ ವರ್ಷದ ಶ್ರೀ ಗಣೇಶ ಪ್ರತಿಷ್ಠಾಪನಾ ಪೂಜಾ ಮಹೋತ್ಸವ ವಿಜೃಂಭಣೆಯಿಂದ ಜರುಗಿತು.ಶನಿವಾರ ಮುಂಜಾನೆ ಬ್ರಾಹ್ಮಿ ಮಹೂರ್ತದಲ್ಲಿ ಶ್ರಿ ಮಹಾಗಣಪತಿ ಭವನದಲ್ಲಿ ನಿರ್ಮಿಸಿರುವ ಎಂಟು ಅಡಿ ಎತ್ತರದ ಜೇಡಿಮಣ್ಣಿನ ಗಣೇಶ ಮೂರ್ತಿ ಮುಂಭಾಗದಲ್ಲಿ ಬಾಳೆಕಂದು ನೆಟ್ಟು ಅದರ ಮುಂದೆ ಕನ್ನಡಿಯನ್ನು ಇಡಲಾಯಿತು. ಕಲಾವಿದ ಕೆ.ಸತೀಶ್ ಹಾಗೂ ಅರ್ಚಕ ಶ್ರೀಷಾಚಾರ್ ಅವರ ನೇತೃತ್ವದಲ್ಲಿ ಶ್ರೀ ಗಣೇಶಮೂರ್ತಿಗೆ ಕಣ್ಣು ಬರೆಯುತ್ತಿದ್ದಂತೆ ಪರದೆ ಸರಿಸಿ, ಬಾಳೆಕಂದು ಕತ್ತರಿಸಿ, ಕನ್ನಡಿಯಲ್ಲಿ ಗಣೇಶ ಮೂರ್ತಿಯನ್ನು ತೋರಿಸಿ, ನಂತರ ಸಾರ್ವಜನಿಕರಿಗೆ ಶ್ರೀ ಸ್ವಾಮಿಯ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು. ಶ್ರೀ ಸ್ವಾಮಿಯ ಬೆಳ್ಳಿಮೂರ್ತಿಗೆ ಪಂಚಾಮೃತ ಅಭಿಷೇಕ, ಅಲಂಕಾರ ನೆರವೇರಿಸಿ, ಸಂಪ್ರದಾಯದ ಆಚರಣೆಯಂತೆ ಪೂಜಾ ಕೈಂಕರ್ಯ ನೆರವೇರಿಸಿ, ಮಂಗಳಾರತಿ ನಂತರ ತೀರ್ಥ, ಮೋದಕ ಹಾಗೂ ಸಕ್ಕರೆ ಮಿಶ್ರಿತ ಕಡ್ಲೆಹಿಟ್ಟು ಪ್ರಸಾದ ವಿತರಿಸಲಾಯಿತು. ಅರ್ಚಕ ಶ್ರೀಷಾಚಾರ್ ಹಾಗೂ ರಮೇಶ್ ಐತಾಳ್ ಪೂಜಾ ಕೈಂಕರ್ಯ ನೆರವೇರಿಸಿದರು.
ಪಟ್ಟಣದ ಕೊನೇರಿ ರಾಮಶೆಟ್ಟರ ಛತ್ರದಲ್ಲಿ ಆರ್ಯವೈಶ್ಯ ಯುವ ಬಿಗೇಡ್ ಸದಸ್ಯರು ಗಣೇಶೋತ್ಸವ ಪ್ರಯುಕ್ತ ೧೦೮ ಗಣಪತಿ ಪ್ರತಿಷ್ಠಾಪಿಸಿ, ಸಂಪ್ರದಾಯದ ಆಚರಣೆಯಂತೆ ಪೂಜಿಸಿದರು. ಶಬರೀಶ, ಧೀರಜ್, ರಜತ್, ರಾಹುಲ್, ಅಭಿತ್, ವಿಜಯ್, ಶ್ರೇಯಸ್ ಇತರರು ಇದ್ದರು.