ಗದಗ: ಗದಗ ಜಿಲ್ಲಾ ಕಾಂಗ್ರೆಸ್ ವತಿಯಿಂದ ಗಾಂಧಿ ಭಾರತ ಕಾರ್ಯಕ್ರಮದ ಅಂಗವಾಗಿ ಹಾಗೂ ಬೆಳಗಾವಿಯಲ್ಲಿ ಗಾಂಧೀಜಿ ನೇತೃತ್ವದಲ್ಲಿ ನಡೆದ 29ನೇ ಕಾಂಗ್ರೆಸ್ ಸಮಾವೇಶ ಜರುಗಿ 100 ವರ್ಷಗಳ ಪೂರೈಸಿದ ಹಿನ್ನೆಲೆಯಲ್ಲಿ ಆಯೋಜಿಸಲಾಗಿದ್ದ ವಿಶೇಷ ಪಾದಯಾತ್ರೆಗೆ ಬುಧವಾರ ಬೆಳಗ್ಗೆ ಚಾಲನೆ ನೀಡಲಾಯಿತು.
ಅವಳಿ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ಪಾದಯಾತ್ರೆಯಲ್ಲಿ ಕಾಂಗ್ರೆಸ್ ವಿವಿಧ ಘಟಕಗಳ ಪದಾಧಿಕಾರಿಗಳು ಶ್ವೇತವಸ್ತ್ರಧಾರಿಗಳಾಗಿ ಪಾಲ್ಗೊಂಡು ಗಮನ ಸೆಳೆದರು.
ಗಾಂಧಿ ನಡಿಗೆ ಪಾದಯಾತ್ರೆ ರಾಮಕೃಷ್ಣ ಆಶ್ರಮದಿಂದ ಗಾಂಧಿ ವೃತ್ತದ ವರೆಗೂ ಜರುಗಿತು. ಆನಂತರ ಜರುಗಿದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ, ರೋಣ ಶಾಸಕ ಜಿ.ಎಸ್. ಪಾಟೀಲ, 100 ವರ್ಷಗಳ ಹಿಂದೆ ಗಾಂಧೀಜಿ ಬೆಳಗಾವಿಯಲ್ಲಿ ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯ ಹೋರಾಟಕ್ಕಾಗಿ ಅಧಿವೇಶನ ರೂಪಿಸಿದ್ದರು. ಮಹಾತ್ಮಾ ಗಾಂಧಿ ಅವರ ಹೋರಾಟದ ಸವಿನೆನಪಿಗಾಗಿ ಶತಮಾನೋತ್ಸವವನ್ನು ಈ ವರ್ಷ ಪೂರ್ತಿ ಆಚರಿಸಲು ನಿರ್ಧರಿಸಲಾಗಿದೆ. ಈಗಾಗಲೇ ಪ್ರತಿಯೊಂದು ಬ್ಲಾಕ್ ಗಳಲ್ಲಿ ಮಟ್ಟದಲ್ಲಿ ಆಚರಿಸಲಾಗುತ್ತಿದೆ. ಆನಂತರ ಪ್ರತಿಯೊಂದು ಗ್ರಾಪಂ ಮಟ್ಟದಲ್ಲಿ ನಡೆಸಲು ಚಿಂತನೆ ಮಾಡಲಾಗಿದೆ ಎಂದು ಹೇಳಿದರು. ಸ್ವಾತಂತ್ರ್ಯ ಹೋರಾಟಕ್ಕೆ ಉತ್ತರ ಕರ್ನಾಟಕದ ಕೊಡುಗೆ ಅಪಾರವಾಗಿದ್ದು, ಅದರಲ್ಲಿಯೂ ಅವಿಭಜಿತ ಧಾರವಾಡ ಜಿಲ್ಲೆಯ ಕೊಡುಗೆ ದೊಡ್ಡದು ಎಂದರು.ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಅಶೋಕ ಮಂದಾಲಿ, ಯುವ ಮುಖಂಡ ಕೃಷ್ಣಗೌಡ ಪಾಟೀಲ, ಎಸ್.ಎನ್. ಬಳ್ಳಾರಿ, ಬಿ.ಬಿ. ಅಸೂಟಿ, ವಾಸಣ್ಣ ಕುರುಡಗಿ, ಸಿದ್ಧಲಿಂಗೇಶ್ವರ ಪಾಟೀಲ, ವೀರಯ್ಯ ಸೋಮನಕಟ್ಟಿಮಠ, ಸೈಯ್ಯದ ಖಾಲಿದ್ ಕೊಪ್ಪಳ, ಬರ್ಕತಅಲಿ ಮುಲ್ಲಾ, ಬಸವರಾಜ ಸುಂಕಾಪುರ, ಉಮರ್ ಫಾರೂಕ್ ಹುಬ್ಬಳ್ಳಿ, ಮಹ್ಮದ ಶಾಲಗಾರ ಹಾಗೂ ವಿವಿಧ ಘಟಕಗಳ ಪದಾಧಿಕಾರಿಗಳು, ಕಾರ್ಯಕರ್ತರು ಹಾಜರಿದ್ದರು. ಆನಂತರ ಗಾಂಧಿ ವೃತ್ತದಲ್ಲಿ ನಡೆದ ಬಹಿರಂಗ ಕಾರ್ಯಕ್ರಮದಲ್ಲಿ ಬೆಂಗಳೂರಿನಿಂದ ಏಕಕಾಲಕ್ಕೆ ಸಿಎಂ ಸೇರಿದಂತೆ ಹಿರಿಯ ನಾಯಕರ ಕಾರ್ಯಕ್ರಮಗಳನ್ನು ಸ್ಥಳದಲ್ಲಿಯೇ ಕುಳಿತು ವೀಕ್ಷಣೆ ಮಾಡಿದರು.