ಚನ್ನಗಿರಿ: ರಾಷ್ಟ್ರಪಿತ ಮಹಾತ್ಮಗಾಂಧಿ ಯವರು ಸತ್ಯ ಮತ್ತು ಅಹಿಂಸೆಗೆ ಹೆಚ್ಚಿನ ಮಹತ್ವವನ್ನು ನೀಡಿದವರಾಗಿದ್ದು ಅವರ ತತ್ವ ಆದರ್ಶಗಳು ಇಂದಿನ ಪೀಳಿಗೆಗೆ ಮಾರ್ಗದರ್ಶಕವಾಗಬೇಕಾಗಿದೆ ಎಂದು ನಿವೃತ್ತ ಶಿಕ್ಷಕ ಎಂ.ಯು.ಚನ್ನಬಸಪ್ಪ ಹೇಳಿದರು.
ಶೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯು ಮಹಾತ್ಮ ಗಾಂಧೀಯವರ ಮಾರ್ಗದಲ್ಲಿ ನಡೆಯುತ್ತಿದ್ದು ರಾಜ್ಯದಲ್ಲಿ ಮಧ್ಯವರ್ಜನೆ ಶಿಬಿರಗಳನ್ನು ನಡೆಸುತ್ತ ಮದ್ಯ ವ್ಯಸನಿಗಳಿಗೆ ಮನ ಪರಿವರ್ತನೆ ಮಾಡಿ ಕುಡಿತದ ಚಟದಿಂದ ಮುಕ್ತರನ್ನಾಗಿ ಮಾಡಿ ಹೊಸ ಜೀವನ ನಡೆಸಲು ಅವಕಾಶ ನೀಡುತ್ತಿರುವುದು ಶ್ಲಾಘನೀಯ ಎಂದರು.
ಕುಡಿತದ ಚಟದಿಂದ ಅನೇಕ ಕುಟುಂಬಗಳು ಬೀದಿಗೆ ಬಿದ್ದಿದ್ದು ಇಂತಹ ಕೆಟ್ಟ ಚಟದಿಂದ ಚಿಕ್ಕ ವಯಸ್ಸಿನ ಮಕ್ಕಳು ಪ್ರಾಣ ಕಳೆದುಕೊಳ್ಳುತ್ತಿರುವುದು ವಿಷಾದನೀಯ ಎಂದರು.ಪುರಸಭೆಯ ಸದಸ್ಯ ಎಂ.ಬಿ.ಶಿವಾಜಿರಾವ್ ವಹಿಸಿ ಮಾತನಾಡಿ, ಸಮಾನತೆ, ಭ್ರಾತೃತ್ವ, ಸಹೋದರತೆಯ ಸಂದೇಶವನ್ನು ಇಡೀ ದೇಶಕ್ಕೆ ಸಾರಿದ ಮಹಾತ್ಮಗಾಂಧಿ ಅವರು ಇಂದಿನ ಯುವ ಪೀಳಿಗೆಗೆ ಆದರ್ಶವಾಗಬೇಕಾಗಿದ್ದು ಇಂದಿನ ಯುವ ಪೀಳಿಗೆ ಅನೇಕ ದುಶ್ಚಟಗಳಿಗೆ ಬಲಿಯಾಗುತ್ತಾ ತಮ್ಮ ಅಮೂಲ್ಯ ಜೀವನವನ್ನು ಹಾಳು ಮಾಡಿಕೊಳ್ಳುತ್ತಿರುವುದು ಸರಿಯಲ್ಲ ಎಂದರು.