ಹಾವೇರಿ: ಜಿಲ್ಲೆಯಲ್ಲಿ ಆ. 27ರಂದು ನಡೆಯಲಿರುವ ಗಣೇಶ ಚತುರ್ಥಿ ಹಬ್ಬದ ಪ್ರಯುಕ್ತ ಆಯ್ದ ಸ್ಥಳಗಳಲ್ಲಿ ಮದ್ದು ಮಾರಾಟ ಮಾಡಲು ಅಧಿಕೃತ ಪರವಾನಗಿ ಪಡೆದ ಮಾರಾಟಗಾರರಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ತಿಳಿಸಿದ್ದಾರೆ.
ಸಾರ್ವಜನಿಕ ಸುರಕ್ಷತೆ ಹಿತದೃಷ್ಟಿಯಿಂದ ಹಾಗೂ ಅಹಿತಕರ ಘಟನೆಗಳನ್ನು ತಪ್ಪಿಸುವ ಸಲುವಾಗಿ ಮುಂಜಾಗ್ರತಾ ಕ್ರಮಕೈಗೊಳ್ಳುವ ನಿಟ್ಟಿನಲ್ಲಿ ಜಿಲ್ಲೆಯ ನಗರ, ಪಟ್ಟಣ, ಗ್ರಾಮೀಣ ಪ್ರದೇಶಗಳಲ್ಲಿ ಅಧಿಕೃತವಾಗಿ ಪರವಾನಗಿ ಪಡೆದ ಮಾರಾಟಗಾರರು ಮಾತ್ರ ಅವಕಾಶ ನೀಡಲಾಗಿದೆ. ಕೇವಲ ಹಸಿರು ಪಟಾಕಿಗಳನ್ನಷ್ಟೇ ತಾತ್ಕಾಲಿಕ ಶೆಡ್ಗಳನ್ನು ಅಗ್ನಿಶಾಮಕ ಇಲಾಖೆಯ ನಿರ್ದೇಶನದಂತೆ ನಿರ್ಮಿಸಿಕೊಂಡು ಹಾಗೂ ಸುರಕ್ಷತೆಯ ಎಲ್ಲ ವ್ಯವಸ್ಥೆಗಳನ್ನು ಅಳವಡಿಸಿಕೊಂಡು ಮಾರಾಟ ಮಾಡಬಹುದು. ಜತೆಗೆ ಆಯಾ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ, ಹಾಗೂ ಗ್ರಾಮ ಪಂಚಾಯಿತಿಯವರಿಂದ ಪ್ರತ್ಯೇಕ ಅನುಮತಿ ಹಾಗೂ ನಿರಾಕ್ಷೇಪಣಾ ಪತ್ರ ಪಡೆದುಕೊಂಡು ಸೆ. 8ರ ವರೆಗೆ ಜಿಲ್ಲೆಯಲ್ಲಿ ಹಾವೇರಿ ನಗರದ ಮುನ್ಸಿಪಲ್ ಹೈಸ್ಕೂಲ್ ಮೈದಾನದಲ್ಲಿ ಅವಕಾಶ ಕಲ್ಪಿಸಲಾಗಿದೆ.ಅದೇ ರೀತಿ ಗುತ್ತಲ ಪಟ್ಟಣದ ಖುಲ್ಲಾ ಜಾಗ, ಹೊಸರಿತ್ತಿ ಗ್ರಾಪಂ ಆಸ್ತಿ, ರಾಣಿಬೆನ್ನೂರು ತಾಲೂಕು ಕ್ರೀಡಾಂಗಣ, ಮೇಡ್ಲೇರಿ ಗ್ರಾಮದ ಬಯಲು ಜಾಗ, ಹಲಗೇರಿ ಬಯಲು ಜಾಗ, ಅರೇಮಲ್ಲಾಪುರ ಗ್ರಾಮದ ಖಾಲಿ ಜಾಗ, ಬ್ಯಾಡಗಿಯ ತಾಲೂಕು ಕ್ರೀಡಾಂಗಣ, ಹಿರೇಕೆರೂರು ತಾಲೂಕಿನ ಪೊಲೀಸ್ ಮೈದಾನದ ಬಯಲು ಪ್ರದೇಶ, ಚಿಕ್ಕೇರೂರು ಗ್ರಾಮದ ಖುಲ್ಲಾ ಜಾಗ, ಹಂಸಭಾವಿ ಖುಲ್ಲಾ ಜಾಗ, ರಟ್ಟೀಹಳ್ಳಿ ಪಟ್ಟಣದ ಖುಲ್ಲಾ ಜಾಗ, ಮಾಸೂರು ಗ್ರಾಮದ ಖುಲ್ಲಾ ಜಾಗ, ಹಿರೇಮೊರಬ ಖುಲ್ಲಾ ಜಾಗ, ಶಿಗ್ಗಾವಿ ಎಪಿಎಂಸಿ ಬಯಲು ಜಾಗ, ಬಂಕಾಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಬಯಲು ಪ್ರದೇಶ, ಹುಲಗೂರು ಗ್ರಾಪಂ ಖುಲ್ಲಾ ಜಾಗ, ಸವಣೂರು ತಾಲೂಕು ಕ್ರೀಡಾಂಗಣ, ಹಾನಗಲ್ಲ ತಾಲೂಕು ಕ್ರೀಡಾಂಗಣ ಹಾಗೂ ಅಕ್ಕಿಆಲೂರು ಗ್ರಾಪಂ ಖುಲ್ಲಾ ಜಾಗ ಹೀಗೆ ನಿಗದಿಪಡಿಸಿದ ಸ್ಥಳಗಳಲ್ಲಿ ಮದ್ದು ಸಂಗ್ರಹಣೆ ಹಾಗೂ ಮಾರಾಟ ಮಾಡಬೇಕು. ಈ ಆದೇಶ ಉಲ್ಲಂಘನೆ ಮಾಡಿದ ಲೈಸೆನ್ಸ್ದಾರರ ಮೇಲೆ ಕಾನೂನು ರೀತಿ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.